ಬೆಳ್ತಂಗಡಿ: ಬೆಳ್ತಂಗಡಿಯ ಕೊಯ್ಯೂರು ಗ್ರಾಮದ ಅರಂತೊಟ್ಟು ಎಂಬಲ್ಲಿ ಅಪರೂಪದ ಸಾರಿಬಳ ಹಾವು ಪತ್ತೆಯಾಗಿದ್ದು ಇದನ್ನು ಉರಗ ಪ್ರೇಮಿ ಸ್ನೇಕ್ ಅಶೋಕ್ ಸುರಕ್ಷಿತವಾಗಿ ಹಿಡಿದು, ರಕ್ಷಿಸಿ ಕಾಡಿಗೆ ಬಿಟ್ಟಿದ್ದರೆ.
ಕೊಯ್ಯೂರು ಗ್ರಾಮದ ಅರಂತೊಟ್ಟು ನಿವಾಸಿ ದೀಪಕ್ ಎಂಬುವರ ಮನೆಯಲ್ಲಿ ಸುಮಾರು 5 ಅಡಿ ಉದ್ದದ ಸಾರಿಬಳ ಹಾವು ಕೋಳಿಮರಿಯನ್ನು ನುಂಗುತ್ತಿದ್ದ ವೇಳೆ ಅದನ್ನು ಕಂಡ ಮನೆಯವರು ಸ್ನೇಕ್ ಅಶೋಕ್ ಲಾಯಿಲ ಅವರಿಗೆ ಮಾಹಿತಿ ನೀಡಿದ್ದಾರೆ.
ಅವರು ತಕ್ಷಣ ಆಗಮಿಸಿ ಹಾವನ್ನು ರಕ್ಷಿಸಿದ್ದಾರೆ. ಫೋರೆಸ್ಟನ್ಸ್ ಬೆಕ್ಕು ಹಾವು ಅಥವಾ ಸಾರಿಬಳ ಎಂದೇ ಕರೆಯಲ್ಪಡುವ ಈ ಹಾವು ಹೆಚ್ಚಾಗಿ ಗುಜರಾತ್, ಕೇರಳ ಹಾಗೂ ಕರ್ನಾಟಕದ ಪಶ್ಚಿಮ ಘಟ್ಟ ಪ್ರದೇಶದ ಕಾಡುಗಳಲ್ಲಿ ಕಂಡು ಬರುತ್ತದೆ. ಇವು ಜನವಸತಿ ಪ್ರದೇಶದಲ್ಲಿ ಕಂಡುಬರುವುದು ತೀರಾ ವಿರಳ. ರಾತ್ರಿ ಸಮಯ ಹೆಚ್ಚಿನ ಸಂಚಾರ ನಡೆಸುವ ಇವುಗಳ ಪ್ರಮುಖ ಆಹಾರ ಸಣ್ಣ ಪಕ್ಷಿ , ಮೊಟ್ಟೆ , ಇಲಿ, ಬಾವಲಿ ಇತ್ಯಾದಿ. ಇವುಗಳಲ್ಲೂ ಎರಡು ಪ್ರಭೇದಗಳಿದ್ದು ಬೂದು ಬಣ್ಣ ಹಾಗೂ ಕಪ್ಪು ಚುಕ್ಕೆ , ಇನ್ನೊಂದು ಪ್ರಭೇದ ಕಪ್ಪು ಚುಕ್ಕೆಗಳೊಂದಿಗೆ, ತಿಳಿ ಕೆಂಪು, ಕಂದು ಬಣ್ಣವನ್ನು ಹೊಂದಿರುತ್ತದೆ.
ತನ್ನ 11 ವರ್ಷಗಳ ಹಾವು ಹಿಡಿಯುವ ಸೇವೆಯಲ್ಲಿ ಇದುವರೆಗೆ ಬೂದು ಬಣ್ಣದ ಸಾರಿಬಾಳ ಎರಡು ಬಾರಿ ಹಾಗೂ ತಿಳಿ ಕೆಂಪು ಕಂಡು ಕಂದು ಬಣ್ಣ ದ ಹಾವು ಇದೇ ಮೊದಲ ಬಾರಿ ಕಂಡು ಬಂದಿದೆ ಎಂದು ಅಶೋಕ್ ಅವರು ತಿಳಿಸಿದ್ದಾರೆ. ಇವು ವಿಷ ರಹಿತ ಹಾವುಗಳಾಗಿದ್ದು ಕಟ್ಟು ಹಾವನ್ನು ಹೋಲುವುದರಿಂದ ಇವು ಕಂಡು ಬಂದಲ್ಲಿ ಜನರು ಕೊಲ್ಲಲು ಮುಂದಾಗುತ್ತಿದ್ದಾರೆ.
ಎಲ್ಲ ಜೀವಿಗಳಂತೆ ಹಾವುಗಳಿಗೂ ಬದುಕುವ ಹಕ್ಕಿದ್ದು ಯಾವುದೇ ಹಾವು ಕಂಡು ಬಂದರೆ ಅವುಗಳನ್ನು ರಕ್ಷಿಸುವುದು ಅತಿ ಅಗತ್ಯ ಎಂದು ಸ್ನೇಕ್ ಅಶೋಕ್ ತಿಳಿಸಿದ್ದಾರೆ.