ಬೆಳ್ತಂಗಡಿ: ಕಲ್ಮಂಜ ಗ್ರಾಮದ ಕಂರ್ಬಿತ್ತಿಲ್ ಎಂಬಲ್ಲಿ ಮನೆಯಿಂದ ತೋಟಕ್ಕೆ ಹೋಗಿದ್ದ ವ್ಯಕ್ತಿ ವಿದ್ಯುತ್ ಅವಘಡಕ್ಕೆ ಒಳಗಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಬೆಳ್ತಂಗಡಿ ತಾಲೂಕಿನ ಕಲ್ಮಂಜ ಗ್ರಾಮದ ಕರಿಯನೆಲದ ಕರ್ಬಿತ್ತಿಲ್ ನಿವಾಸಿ ಶೀನಪ್ಪ ಗೌಡ ಎಂಬವರ ಪುತ್ರ ಉದಯ ಗೌಡ ಮೃತರು ಎಂದು ಗುರುತಿಸಲಾಗಿದೆ.
ಇವರು ತೋಟಕ್ಕೆಂದು ಹೋದವರು ಮನೆಗೆ ಹಿಂತಿರುಗಿ ಬಾರದ ಹಿನ್ನೆಲೆಯಲ್ಲಿ ಮನೆಮಂದಿ ಸುತ್ತಮುತ್ತ ಹುಡುಕಾಟ ನಡೆಸಿದಾಗ ಸಂಜೆಯ ವೇಳೆ ತೋಟದಲ್ಲಿ ಬಿದ್ದು ಮೃತಪಟ್ಟಿರುವುದು ಕಂಡು ಬಂದಿದೆ ಎಂದು ದೂರಲಾಗಿದೆ.
ಸ್ಥಳೀಯ ನಿವಾಸಿಯಾಗಿರುವ ಹರೀಶ ಮತ್ತು ಇತರರು ಸೇರಿ ತೋಟಕ್ಕೆ ಬರುವ ಕಾಡು ಪ್ರಾಣಿಗಳನ್ನು ಓಡಿಸಲೆಂದು ಅಕ್ರಮವಾಗಿ ತಮ್ಮ ಪಂಪ್ ಶೆಡ್ ನಿಂದ ತೋಟದ ಸುತ್ತ ತಂತಿಯ ಮೂಲಕ ವಿದ್ಯುತ್ ಹರಿಸಿದ್ದರು. ಜನ ನಡೆದಾಡುವ ದಾರಿಯ ಬದಿಯಲ್ಲಿಯೇ ಅತ್ಯಂತ ಅಪಾಯಕಾರಿಯಾಗಿ ವಿದ್ಯುತ್ ಹರಿಯಬಿಟ್ಟಿದ್ದು, ಮನೆಯಿಂದ ತೋಟಕ್ಕೆಂದು ಹೋದ ಉದಯ ಅವರ ಕಾಲಿಗೆ ವಿದ್ಯುತ್ ಹರಿಯುತ್ತಿದ್ದ ತಂತಿ ಸಿಲುಕಿ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ದೂರು ನೀಡಲಾಗಿದೆ. ಘಟನಾ ಸ್ಥಳಕ್ಕೆ ಬೆಳ್ತಂಗಡಿ ವೃತ್ತ ನಿರೀಕ್ಷ ಶಿವಕುಮಾರ್, ಧರ್ಮಸ್ಥಳ ಠಾಣಾಧಿಕಾರಿ ಅನಿಲ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.