ಬೆಳ್ತಂಗಡಿ: ರಾತ್ರಿ ಮನೆಗೆ ನುಗ್ಗಿ ಮನೆಮಂದಿ ಸಮ್ಮುಖದಲ್ಲೇ ಬಾಲಕಿ (13) ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಯುವಕರಿಬ್ಬರನ್ನು ಸ್ಥಳೀಯರು ಹಿಡಿದು ಪೊಲೀಸರಿಗೊಪ್ಪಿಸಿದ ಘಟನೆ ಬೆಳ್ತಂಗಡಿ ತಾಲೂಕಿನ ಕರಾಯ ಗ್ರಾಮದ ಕಲ್ಲಾಪು ಎಂಬಲ್ಲಿ ನಡೆದಿದೆ.
ಕಡಬ ತಾಲೂಕಿನ ಕೊಯಿಲ ಗ್ರಾಮದ ಹಸೈನಾರ್ (24), ಅಬ್ಬಾಸ್ (30) ಆರೋಪಿಗಳು.
ಇವರು 3 ದಿನಗಳಿಂದ ಕರಾಯ ಗ್ರಾಮದಲ್ಲಿ ಮರ ಕತ್ತರಿಸುವ ಕೆಲಸ ನಿರ್ವಹಿಸುತ್ತಿದ್ದು, ನೀರು ಕೇಳುವ ನೆಪದಲ್ಲಿ ಬಾಲಕಿ ಮನೆಗೆ ತೆರಳಿದ್ದರು. ಮರ ತುಂಡರಿಸುವ ಚೈನ್ ಇಲ್ಲಿ ಬಾಕಿಯಾಗಿದೆ ಎಂದು ಹೇಳಿ ಬಾಲಕಿಯ ಕೈಗೆ ಚೀಟಿಯೊಂದನ್ನು ನೀಡಿದ್ದರು. ‘ಈ ನಂಬರ್ಗೆ ಫೋನ್ ಮಾಡು, ಇಲ್ಲದಿದ್ದರೆ ನಿನ್ನನ್ನು ಬಿಡುವುದಿಲ್ಲ’ ಎಂದು ಬೆದರಿಕೆಯೊಡ್ಡಿ ಹೋಗಿದ್ದರು.
ಶನಿವಾರ ರಾತ್ರಿ 8 ಗಂಟೆಯಲ್ಲಿ ಮನೆ ಒಳಗೆ ಪ್ರವೇಶಿಸಿ ಅತ್ಯಾಚಾರಕ್ಕೆ ಯತ್ನಿಸಿದ್ದರು. ಬಾಲಕಿ ಹಾಗೂ ಬಾಲಕಿಯ ತಾಯಿ ರಕ್ಷಣೆ ಗಾಗಿ ಬೊಬ್ಬೆ ಹೊಡೆದಾಗ ನೆರೆಮನೆಯವರು ರಕ್ಷಿಸಿದ್ದಾರೆ. ಬಳಿಕ ಸ್ಥಳೀಯರ ಸಹಕಾರದಿಂದ ಆರೋಪಿಗಳನ್ನು ಹಿಡಿದು ಉಪ್ಪಿನಂಗಡಿ ಪೊಲೀಸರಿಗೆ ಒಪ್ಪಿಸಿದ್ದಾರೆ.