ಬೆಳ್ತಂಗಡಿ: ರಾಷ್ಟ್ರೀಯ ಹಿಂದು ಜಾಗರಣ ವೇದಿಕೆಯ ಮುಖಂಡ ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ. ಧರ್ಮಸ್ಥಳ ಗ್ರಾಮದ ಸಂದೀಪ್ ರೈ ಎಂಬವರು ತಿಮರೋಡಿ ಮತ್ತಿತರರ ವಿರುದ್ಧ ಕೇಸು ದಾಖಲಿಸಿದವರು.
ಮಹೇಶ್ ಶೆಟ್ಟಿ ತಿಮರೋಡಿ, ಅನಿಲ್ ಕುಮಾರ್ ಅಂತರ, ಕಿರಣ್ ಗೌಡ, ಪ್ರಜ್ವಲ್ ಕೆ.ವಿ. ಗೌಡ, ಮನೋಹರ್ ಮನ್ನಡ್ಕ, ಮನೋಜ್ ಸಾಲ್ಯಾನ್ ಕುಂಜರ್ಪ ಮತ್ತು ಇತರರ ಹಾಗೂ ಸಮಾಜದ ಸ್ವಾಸ್ಥ್ಯವನ್ನು ಕದಡುವಂತಹ ಕೆಟ್ಟದಾಗಿ ಶಬ್ದಗಳನ್ನು ಬರೆದ ಬ್ಯಾನರ್ ಅಳವಡಿಸಲು ಅನುಮತಿ ನೀಡಿದ ಉಜಿರೆಯ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹಾಗೂ ಕಾರ್ಯದರ್ಶಿ ವಿರುದ್ಧವೂ ಪ್ರಕರಣ ದಾಖಲಾಗಿದೆ.
ಅ.29ರಂದು ಬೆಳ್ತಂಗಡಿ ಠಾಣಾ ವ್ಯಾಪ್ತಿಯಲ್ಲಿ ನಡೆದ ಧರ್ಮಸಂರಕ್ಷಣಾ ಯಾತ್ರೆಯ ಸಲುವಾಗಿ ಸಂಬಂಧಪಟ್ಟ ಇಲಾಖೆಯಿಂದ ಅನುಮತಿ ಪಡೆದು ಯಾತ್ರೆಗೆ ಬೆಂಬಲ ಸೂಚಿಸಿ ಅಳವಡಿಸಲಾಗಿದ್ದ ಬ್ಯಾನರ್ಗಳ ಸಮೀಪದಲ್ಲೇ ಪಾದಯಾತ್ರೆಯನ್ನು ನಿಲ್ಲಿಸುವ ಒಳಸಂಚಿನಿಂದ ಪ್ರಾದೇಶಿಕ ಗುಂಪುಗಳ ನಡುವಣ ಸೌಹಾರ್ದಕ್ಕೆ ಬಾಧಕವಾಗುವಂತಹ ಬರವಣೆಗೆಗಳನ್ನು ಹೊಂದಿರುವ ಬ್ಯಾನರ್ಗಳನ್ನು ಅಳವಡಿಸಿ ಪ್ರಾದೇಶಿಕ ಗುಂಪುಗಳ ನಡುವೆ ವೈರತ್ವ, ದ್ವೇಷ, ವೈಮನಸ್ಸು ಭಾವನೆಗಳನ್ನು ಬಿತ್ತಿಸಿ ಅಸೌಹಾರ್ದತೆಯನ್ನು ಸೃಷ್ಟಿಸಿರುವುದಾಗಿ ಸಂದೀಪ್ ರೈ ನೀಡಿದ ದೂರಿನಂತೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.