ಮಂಗಳೂರು: ನಗರದ ಪಂಜಿಮೊಗರು ವಾರ್ಡ್ನ ಉರುಂದಾಡಿ ಎಂಬಲ್ಲಿ ಸುಮಾರು 30 ವರ್ಷಗಳಿಂದ ಕಾರ್ಯಾಚರಿಸುತ್ತಿದ್ದ ಅಂಗನವಾಡಿ ಕೇಂದ್ರದ ಹೊರ ಗೋಡೆಗೆ ಪ್ರಾರ್ಥನಾ ಮಂದಿರದ ಬ್ಯಾನರ್ ಅಳವಡಿಸಿದ್ದು, ಹಿಂದೂ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ.
ಸುಮಾರು 14 ವರ್ಷಗಳಿಂದ ಅಂಗನವಾಡಿ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕಿ ಅಂಗನವಾಡಿ ಕೇಂದ್ರವನ್ನು ಕ್ರಿಶ್ಚಿಯನ್ ಸಮುದಾಯದ ಪ್ರಾರ್ಥನ ಮಂದಿರವನ್ನಾಗಿ ಮಾರ್ಪಡು ಮಾಡುವ ಉದ್ದೇಶದಿಂದ ಅಂಗನವಾಡಿ ಕೇಂದ್ರದ ಹೊರ ಗೋಡೆಗೆ ಪ್ರಾರ್ಥನಾ ಮಂದಿರದ ಬ್ಯಾನರ್ ಅಳವಡಿಸಿದ್ದಾರೆ ಎಂದು ಹಿಂದೂ ಸಂಘಟನೆಗಳು ಆರೋಪಿಸಿದೆ.
ಶಿಕ್ಷಣ ಕೇಂದ್ರವನ್ನು ಮತಾಂತರ ಕೇಂದ್ರವನ್ನಾಗಿಸಲು ಪ್ರಯತ್ನಿಸಿ, ಸಮಾಜದಲ್ಲಿ ಕೋಮು ಸಾಮರಸ್ಯ ಕದಡುತ್ತಿರುವ, ಶಿಕ್ಷಣ ನೀತಿಗೆ ವ್ಯತಿರಿಕ್ತವಾಗಿ ನಡೆದುಕೊಂಡಿರುವ ಶಿಕ್ಷಕಿ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಂಡು, ಅಂಗನವಾಡಿ ಕೇಂದ್ರದಲ್ಲಿ ಅಳವಡಿಸಿರುವ ಬ್ಯಾನರನ್ನು ಕೂಡಲೇ ತೆರವುಗೊಳಿಸಿ, ಸ್ಥಳೀಯ ಮಕ್ಕಳ ಶಿಕ್ಷಣಕ್ಕೆ ಪೂರಕವಾಗಿ ಮಾಡಿಕೊಡುವಂತೆ ಹಿಂದೂ ಜಾಗರಣ ವೇದಿಕೆ ಕಾವೂರು ಘಟಕವು ಕಾವೂರು ಪೊಲೀಸರಿಗೆ ದೂರು ನೀಡಿದ್ದಾರೆ.