ಮಂಗಳೂರು: ನಗರದ ಉಳ್ಳಾಲ ಪೊಲೀಸ್ ಠಾಣಾ ಸಿಬ್ಬಂದಿಗಳು ಹಾಗೂ ಆಹಾರ ಇಲಾಖೆಯ ಅಧಿಕಾರಿಗಳು ಮನೆಯಲ್ಲಿ ಅಕ್ರಮವಾಗಿ ಸಿಲಿಂಡರ್ಗಳಿಗೆ ಗ್ಯಾಸ್ ತುಂಬಿಸುತ್ತಿದ್ದ ಪ್ರಕರಣವನ್ನು ಬಯಲಿಗೆಳೆದಿದ್ದಾರೆ. ಆರೋಪಿ ಪೆರ್ಮನ್ನೂರು ಗ್ರಾಮದ ಚೆಂಬುಗುಡ್ಡ ನಿವಾಸಿ ಫ್ರಾನ್ಸಿಸ್ ಎನ್ನಲಾಗಿದೆ.
ಈತ ತನ್ನ ಮನೆಯ ಬಳಿ ತಗಡು ಶೀಟಿನಿಂದ ನಿರ್ಮಿಸಿದ ಕೋಣೆಯಲ್ಲಿ ಮನೆ ಬಳಕೆ ಸಿಲಿಂಡರ್’ನಿಂದ ಖಾಲಿ ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ ಗೆ ತಾನೇ ಕೃತಕವಾಗಿ ರೆಗ್ಯುಲೇಟರ್ ಮುಖೇನ ಗ್ಯಾಸ್ ರಿಫಿಲ್ಲಿಂಗ್ ಮಾಡಿ ಗಿರಾಕಿಗಳಿಗೆ ಮಾರಾಟ ಮಾಡುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಉಳ್ಳಾಲ ಪೊಲೀಸ್ ಠಾಣಾ ಸಂದೀಪ್ ಹಾಗೂ ತಂಡ ಮತ್ತು ಉಳ್ಳಾಲ ವಲಯ ಆಹಾರ ನಿರೀಕ್ಷಕ ಹ್ಯಾರಿಸ್ ಮತ್ತವರ ತಂಡ ದಾಳಿ ನಡೆಸಿದೆ.
ಈ ವೇಳೆ, ಖಾಲಿ ಗ್ಯಾಸ್ ಸಿಲಿಂಡರ್ ನ್ನು ನೆಲದ ಮೇಲೆ ಇರಿಸಿ , ಅದರ ಮೇಲೆ ತುಂಬಿದ ಗ್ಯಾಸ್ ಸಿಲಿಂಡರ್’ನನ್ನು ಕವುಚಿ ಹಾಕಿ ಪೈಪ್ ಮುಖೇನ ಕೃತಕವಾಗಿ ತುಂಬಿಸುತ್ತಿದ್ದು, ಆರೋಪಿ ಪ್ರಾನ್ಸಿಸ್ ಸ್ಥಳದಿಂದ ಓಡಿ ಪರಾರಿಯಾಗಿದ್ದಾನೆ.
ಉಳ್ಳಾಲ ವಲಯ ಆಹಾರ ನಿರೀಕ್ಷಕರು ನೀಡಿದ ದೂರಿನಂತೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಸುಮಾರು 1,92,000 ಲಕ್ಷ ರೂ. ಮೌಲ್ಯದ ಗ್ಯಾಸ್ ತುಂಬಿಸಲು ಬಳಸುತ್ತಿದ್ದ ಪರಿಕರ ಸೇರಿದಂತೆ ವಿವಿಧ ಕಂಪನಿಗಳ 128 ಸಿಲಿಂಡರ್ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.