ಮಂಗಳೂರು: ಒಂದೆಡೆ ಹೆಜ್ಜೆ ಇಂಡಿಯಾ ಹೆಸರಲ್ಲಿ ಸಮಾಜಸೇವಕನ ಫೋಸು, ಪೊಲೀಸ್ ಅಧಿಕಾರಿಗಳು, ರಾಜಕೀಯ ಗಣ್ಯರ ನಂಟು, ಇನ್ನೊಂದೆಡೆ ಕತ್ತಲ ಸಾಮ್ರಾಜ್ಯದಲ್ಲಿ ಅನೈತಿಕ ದಂಧೆ… ಪಿಯುಸಿ ಹುಡುಗಿಯರ ಬ್ಲಾಕೇಲ್, ವೇಶ್ಯಾವಾಟಿಕೆ ದಂಧೆಯಲ್ಲಿ ಉಳ್ಳಾಲದ ಸ್ವಯಂಘೋಷಿತ ಸಮಾಜ ಸೇವಕ, ಶಾಸಕ ಯುಟಿ ಖಾದರ್ ಆಪ್ತ ರಾಝಿಕ್ ಉಳ್ಳಾಲ್ ನನ್ನು ನಗರದ ಸಿಸಿಬಿ ಪೊಲೀಸರು ಪೋಕ್ಸೆ ಕಾಯ್ದೆಯಡಿ ಬಂಧಿಸಿದ್ದಾರೆ.
ಇತ್ತೀಚೆಗೆ ಮಂಗಳೂರು ನಗರದ ನಂದಿಗುಡ್ಡೆಯ ಫ್ಲಾಟ್ ಒಂದರಲ್ಲಿ ನಡೆಯುತ್ತಿದ್ದ ಅಪ್ರಾಪ್ತ ಪಿಯುಸಿ ಹುಡುಗಿಯರ ಬ್ಲಾಕೇಲ್, ವೇಶ್ಯಾವಾಟಿಕೆ ಪ್ರಕರಣ ಸಂಬಂಧಿಸಿ ಮಂಗಳೂರು ಸಿಸಿಬಿ ಪೊಲೀಸರು ತನಿಖೆ ಕೈಗೊಂಡಿದ್ದರು. ಇಬ್ಬರು ಅಪ್ರಾಪ್ತ ಬಾಲಕಿಯರ ದೂರಿನಂತೆ ಮಹಿಳಾ ಪೊಲೀಸ್ ಠಾಣೆಯಲ್ಲಿ ಒಟ್ಟು 10 ಪ್ರಕರಣಗಳು ದಾಖಲಾಗಿದ್ದವು. ಈಗಾಗಲೇ ಮಂದಿಯನ್ನು ಬಂಧಿಸಿದ್ದು 15 ತನಿಖೆ ಚುರುಕುಗೊಳಿಸಿದಾಗ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಉಳ್ಳಾಲದ ಸ್ವಯಂಘೋಷಿತ ಸಮಾಜ ಸೇವಕ ಅಬ್ದುಲ್ ರಾಝೀಕ್ (44) ಯಾನೆ ರಫೀಕ್ ಉಳ್ಳಾಲ ಸಿಕ್ಕಿಬಿದ್ದಿದ್ದಾನೆ. ಮಂಗಳೂರು ಸಿಸಿಬಿ ಪೊಲೀಸರು ಆರೋಪಿಯನ್ನು ಮಾ.18ರಂದು ಸದ್ದಿಲ್ಲದೆ ಪೋಕ್ಸ್ ಕಾಯ್ದೆಯಡಿ ಜೈಲಿಗೆ ತಳ್ಳಿದ್ದು ಮೂರು ದಿನಗಳ ಬಳಿಕ ವಿಷಯ ಬಯಲಾಗಿದೆ.
ರಸ್ತೆ ಬದಿಯಲ್ಲಿ ಬಿದ್ದುಕೊಂಡಿದ್ದ ಒಂದಿಬ್ಬರು ಅನಾಥರನ್ನ ಕರೆತಂದು ಅವರ ಕೂದಲು, ಗಡ್ಡ ಬೋಳಿಸಿ ಪ್ರಚಾರ ಪಡೆದು ದಿಢೀರನೆ ಸಮಾಜ ಸೇವಕನಾಗಿದ್ದ ರಾಝಿಕ್ ಉಳ್ಳಾಲ್, ಹೆಲ್ತ್ ಇಂಡಿಯಾ ಫೌಂಡೇಷನ್ ಎಂಬ ಸಂಸ್ಥೆಯನ್ನೂ ಹುಟ್ಟುಹಾಕಿದ್ದ ಶಾಸಕ ಖಾದರ್ ಆಪ್ತನಾಗಿದ್ದರಿಂದ ಈ ಬಾರಿಯ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯೂ ಹೆಸ್ಟ್ ಇಂಡಿಯಾಕ್ಕೆ ಲಭಿಸುವಂತೆ ಮಾಡಿದ್ದ. ಮಂಗಳೂರಿನ ನೆಹರೂ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದು ಅದರ ಪ್ಲೆಕ್ಸನ್ನ ಉಳ್ಳಾಲದೆಲ್ಲೆಡೆ ಹಾಕಿಸಿದ್ದ.
ಈ ಮೊದಲು ತೊಕ್ಕೊಟ್ಟಿನಲ್ಲಿ ನಷ್ಟದಲ್ಲೇ ಫಾಸ್ಟ್ ಫುಡ್ ವ್ಯವಹಾರ ನಡೆಸುತ್ತಿದ್ದ ರಾಝಿಕ್, ದಿಢೀರ್ ಆಗಿ ಐಷಾರಾಮಿ ಜೀವನ ನಡೆಸುತ್ತಾ ಸಮಾಜ ಸೇವೆಯ ಸೋಗು ಹಾಕಿದ್ದ. ನಗರ ಪೊಲೀಸ್ ಕಮಿಷನರ್ ಶಶಿಕುಮಾರ್ ಸೇರಿದಂತೆ ಪೊಲೀಸ್ ಅಧಿಕಾರಿಗಳು, ಕಾಂಗ್ರೆಸ್, ಬಿಜೆಪಿ ಪಕ್ಷದ ನಾಯಕರ ಒಡನಾಟ ಇರಿಸಿಕೊಂಡು, ಅವರ ಜೊತೆಗೆ ತೆಗೆದಿದ್ದ ಫೋಟೊಗಳನ್ನ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದ. ನಕಲಿ ಸಮಾಜ ಸೇವಕ ರಾಝಿಕ್ ಕತ್ತಲ ಸಾಮ್ರಾಜ್ಯವು ಈಗ ಅನಾವರಣಗೊಂಡಿದ್ದು ಪಿಯುಸಿ ಹುಡುಗಿಯರ ಬ್ಲಾಕೇಲ್ ದಂಧೆಯಲ್ಲಿ ಈತನದ್ದೂ ಪ್ರಮುಖ ಕೈವಾಡ ಇರುವುದು ಬೆಳಕಿಗೆ ಬಂದಿದೆ.
ರಾಝಿಕ್ ಮೂರು ದಿನಗಳ ಹಿಂದೆಯೇ ಬಂಧನ ಆಗಿದ್ದರೂ, ಈತ ಅವರಿಗೆ ಆಪ್ತ ಎನ್ನುವ ಕಾರಣಕ್ಕಾಗಿಯೋ ಏನೋ, ಆ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಗಳು ಮಾಧ್ಯಮಕ್ಕೆ ಸುದ್ದಿ ನೀಡದೆ ರಹಸ್ಯವಾಗಿಟ್ಟಿದ್ದರು. ಇದಲ್ಲದೆ, ರಾಝಿಕ್ ಉಳ್ಳಾಲ್ ತನಗೆ ಉಳ್ಳಾಲದ ನಟೋರಿಯಸ್ ಗ್ಯಾಂಗ್ ಒಂದರಿಂದ ಕೊಲೆ ಬೆದರಿಕೆ ಇದೆಯೆಂದು ಹೇಳಿ ಪರವಾನಗಿ ಹೊಂದಿರುವ ರಿವಾಲ್ವರನ್ನೂ ಪಡೆದಿದ್ದು ಅದನ್ನು ಹಿಡಿದುಕೊಂಡೇ ತಿರುಗಾಡುತ್ತಿದ್ದ.
ಹರೆಯದ ಹುಡುಗಿಯರೇ ದಾಳ, ಹಣಕ್ಕಾಗಿ ಹೀನ ದಂಧೆ..!
ಅತ್ತಾವರದ ನಂದಿಗುಡ್ಡೆಯ ಫ್ಲಾಟ್ ಒಂದರಲ್ಲಿ ಸಮೀನಾ ಎಂಬ ಮಹಿಳೆಯ ನೇತೃತ್ವದಲ್ಲಿ ಹರೆಯದ ಹುಡುಗಿಯರನ್ನು ದಾಳವಾಗಿಸಿ ಅನೈತಿಕ ದಂಧೆ ನಡೆಸುತ್ತಿದ್ದುದನ್ನು ಫೆಬ್ರವರಿ ಮೊದಲ ವಾರದಲ್ಲಿ ಪತ್ತೆ ಮಾಡಲಾಗಿತ್ತು. ಈ ಬಗ್ಗೆ ಇಬ್ಬರು ಪಿಯುಸಿ ಹುಡುಗಿಯರು ನೀಡಿದ ದೂರನ್ನು ಆಧರಿಸಿ, ಪಾಂಡೇಶ್ವರ ಮಹಿಳಾ ಠಾಣೆಯಲ್ಲಿ ಹತ್ತು ಪ್ರಕರಣ ದಾಖಲಾಗಿದ್ದು 15 ಮಂದಿಯನ್ನು ಬಂಧಿಸಲಾಗಿದೆ. ಹುಡುಗಿಯರ ಹೇಳಿಕೆ ಮತ್ತು ಪಿಂಪ್ ಆಗಿರುತ್ತಿದ್ದ ಮಹಿಳೆಯರ ಮೊಬೈಲ್ ನಲ್ಲಿ ದಾಖಲಾದ ಗಿರಾಕಿಗಳ ಹೆಸರು ಆಧರಿಸಿ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಅಪ್ರಾಪ್ತ ಬಾಲಕಿಯರಿಗೆ ಬ್ಲಾಕೇಲ್ ಮತ್ತು ಹಣದ ಆಮಿಷವೊಡ್ಡಿ ಲೈಂಗಿಕ ಕಿರುಕುಳ ನೀಡುತ್ತಿದ್ದರು. ಕಳೆದ ಬಾರಿ 65 ವರ್ಷ ಮೀರಿದ ನಾಲ್ವರು ಮುದುಕರನ್ನೂ ಇದೇ ಪ್ರಕರಣದಲ್ಲಿ ಬಂಧಿಸಲಾಗಿತ್ತು. ಇದೀಗ ಮಾರ್ಚ್ 18 ರಂದು ರಾಝಿಕ್ ಉಳ್ಳಾಲ್ ಎಂಬಾತನನ್ನು ಖಚಿತ ಸಾಕ್ಷ್ಯದ ಜೊತೆಗೆ ಪೊಲೀಸರು ಬಂಧಿಸಿದ್ದು ಪೋಕ್ಲೋ ಕಾಯ್ದೆ ದಾಖಲಿಸಿದ್ದಾರೆ. ಪ್ರಕರಣದಲ್ಲಿ ಈವರೆಗೆ ಒಟ್ಟು 16 ಮಂದಿ ಬಂಧಿತರಾಗಿದ್ದಾರೆ.