ಮಂಗಳೂರು: ಮಂಗಳೂರಿನ ನಾಗುರಿಯ ಕಂಕನಾಡಿ ಪೊಲೀಸ್ ಠಾಣೆ ಬಳಿ ಆಟೋದಲ್ಲಿ ಸಂಭವಿಸಿದ ಸ್ಫೋಟ ಆಕಸ್ಮಿಕವಲ್ಲ, ಇದೊಂದು ಭಯೋತ್ಪಾದಕ ಕೃತ್ಯ ಎಂದು ಡಿಜಿಪಿ ಪ್ರವೀಣ್ ಸೂದ್ ಅವರು ಸ್ಪಷ್ಟಪಡಿಸಿದ್ದಾರೆ. ನಾಗುರಿಯಲ್ಲಿ ಶನಿವಾರ ಸಂಜೆ ಸುಮಾರು 4.29ಕ್ಕೆ KA19 AA8471 ಸಂಖ್ಯೆಯ ಚಲಿಸುತ್ತಿದ್ದ ದುರ್ಗಾಪರಮೇಶ್ವರಿ ಹೆಸರಿನ ಆಟೋ ರಿಕ್ಷಾದಲ್ಲಿ ದಿಢೀರ್ ಸ್ಫೋಟವಾಗಿತ್ತು . ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಎಲ್ಲಾ ಆಯಾಮದಲ್ಲಿಯೂ ತನಿಖೆ ನಡೆಸುತ್ತಿದ್ದಾರೆ. ಸಿಎಂ ಬಸವರಾಜ್ ಬೊಮ್ಮಾಯಿ ಮಂಗಳೂರಿಗೆ ಬಂದ ವೇಳೆಯೇ ಈ ನಿಗೂಢ ಸ್ಫೋಟ ನಡೆದಿರೋದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಇನ್ನು ಸ್ಫೋಟಗೊಂಡಿರುವ ಆಟೋ ಒಳಗೆ ಕುಕ್ಕರ್ನೊಳಗೆ ತಯಾರಿಸುವ ಬಾಂಬ್ ಮಾದರಿ ವಸ್ತು ಪತ್ತೆಯಾಗಿದೆ. ಕುಕ್ಕರ್ ಒಳಭಾಗದಲ್ಲಿ ಮ್ಯಾಟ್ ಮಾದರಿ ವಸ್ತು ಪತ್ತೆಯಾಗಿರುವ ಮಾಹಿತಿ ಲಭ್ಯವಾಗಿದೆ. ನಾಲ್ಕು ಡ್ಯೂರೆಸೆಲ್ ಬ್ಯಾಟರಿ, ಸರ್ಕೀಟ್ ಮಾದರಿಯ ವೈರ್ ಸೇರಿದಂತೆ ಬ್ಲಾಸ್ಟ್ಗೆ ಬೇಕಾದ ಸಾಧನ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.
ಪ್ರಯಾಣಿಕನ ವಿಚಾರಣೆ
ಆಟೋದಲ್ಲಿ ಪ್ರಯಾಣಿಸಿದ್ದ ಪ್ರಯಾಣಿಕ ಮೇಲೆ ಹಲವು ಅನುಮಾನ ವ್ಯಕ್ತವಾಗಿದೆ. ಪ್ರಯಾಣಿಕನ ಸೋಗಿನಲ್ಲಿದ್ದ ಆ ವ್ಯಕ್ತಿ ಯಾರು, ಆತನ ಹಿನ್ನೆಲೆ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈತ ಮಂಗಳೂರು ಜಂಕ್ಷನ್ ರೈಲು ನಿಲ್ದಾಣದಿಂದ ಬರುತ್ತಿದ್ದ ಆಟೋವನ್ನು ಹತ್ತಿದ ಘಟನಾ ಸ್ಥಳದ 1 ಕಿ.ಮೀ ದೂರದ ನಾಗುರಿ ಬಳಿ ಆಟೋ ಹತ್ತಿದ್ದು, ಆತನ ಕೈಯಲಿ ಕುಕ್ಕರ್ ಇದ್ದ ಚೀಲವಿದ್ದು ಪಂಪ್ವೆಲ್ ಕಡೆ ಹೋಗುವಂತೆ ತಿಳಿಸಿದ್ದಾನೆ ಎನ್ನಲಾಗಿದೆ. ಸ್ಫೋಟದ ತೀವ್ರತೆಗೆ ಪ್ರಯಾಣಿಕನ ದೇಹದ ಅರ್ಧ ಭಾಗ ಸುಟ್ಟ ಗಾಯವಾಗಿದೆ.
ಕೈ, ಎದೆ, ಮುಖದ ಭಾಗಕ್ಕೆ ಗಾಯವಾಗಿದ್ದು, ಸದ್ಯ ಗಂಭೀರ ಸ್ಥಿತಿಯಲ್ಲಿರುವ ಪ್ರಯಾಣಿಕರಿಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆಟೋದಲ್ಲಿ ಪ್ರೇಮ್ ರಾಜ್ ಕನೋಗಿ ಎಂಬ ಹೆಸರಿನ ಐಡಿ ದಾಖಲೆ ಪತ್ತೆಯಾಗಿದೆ. ದಾಖಲೆಯಲ್ಲಿ ಮೈಸೂರಿನ ವಿಳಾಸ ಪತ್ತೆಯಾದ ಹಿನ್ನೆಲೆಯಲ್ಲಿ ಪೊಲೀಸ್ ತಂಡ ಮೈಸೂರಿಗೆ ತೆರಳಿದೆ. ಅಲ್ಲದೆ ಪ್ರಯಾಣಿಕನ ಬಳಿ 30 ಸಾವಿರ ರೂ. ನಗದು ಪತ್ತೆಯಾಗಿದೆ.
ವಿಚಾರಣೆ ವೇಳೆ ಮೈಸೂರಿನಿಂದ ಬಂದಿರುವುದಾಗಿ ಹೇಳಿಕೊಂಡಿದ್ದು, ಅಣ್ಣ ಬಾಬು ರಾವ್ ಗೆ ಕರೆ ಮಾಡಿ ಎಂದು ಸಹೋದರನ ಮೊಬೈಲ್ ಸಂಖ್ಯೆ ನೀಡಿದ್ದು ಅದಕ್ಕೆ ಪೊಲೀಸರು ಕರೆ ಮಾಡಿ ವಿಚಾರಿಸಿದಾಗ ಕರೆ ಸ್ವೀಕರಿಸಿದಾತ ” ಆತ ನನ್ನ ಸಂಬಂಧಿಕನಲ್ಲ, ಬಾಡಿಗೆ ರೂಂ ನಲ್ಲಿದ್ದ, ಬೆಂಗಳೂರಿಗೆ ಹೋಗುತ್ತೇನೆ ಎಂದು ಹೇಳಿದ್ದ. ಬೇರೇನು ಗೊತ್ತಿಲ್ಲ ಎಂಬುವುದಾಗಿ ತಿಳಿಸಿದ್ದಾನೆ. ಆಟೋದಲ್ಲಿದ್ದ ವ್ಯಕ್ತಿ ಹಿಂದಿ ಭಾಷೆಯಲ್ಲಿ ವ್ಯವಹರಿಸುತ್ತಿದ್ದ ಎಂದು ತಿಳಿದುಬಂದಿದೆ.
ಪೊಲೀಸರು ಪ್ರಯಾಣಿಕನನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಆಟೋದಲ್ಲಿ ಪತ್ತೆಯಾಗಿರುವ ಪ್ರೇಮ್ ರಾಜ್ ಕೊಣಗಿಯ ಆಧಾರ್ ಕಾರ್ಡ್ ನಕಲಿ ಎನ್ನಲಾಗಿದೆ. ಆಧಾರ್ ಕಾರ್ಡ್ನಲ್ಲಿ ಪ್ರೇಮ್ರಾಜ್ ಹುಬ್ಬಳ್ಳಿಯ ನಿವಾಸಿ ಎಂದು ದಾಖಲಾಗಿದೆ. ಸದ್ಯ ಪ್ರೇಮ್ರಾಜ್ ಅರೆಪ್ರಜ್ಞಾವಸ್ಥೆಯಲ್ಲಿದ್ದು, ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.
.