ಮ0ಗಳೂರು: ಮಂಗಳೂರಿನ ಖ್ಯಾತ ವಕೀಲ ಕೆ.ಎಸ್.ಎನ್.ರಾಜೇಶ್ ಎಂಬುವರ ಮೇಲೆ ಲೈಂಗಿಕ ಕಿರುಕುಳದ ಗಂಭೀರ ಆರೋಪ ಕೇಳಿ ಬಂದಿತ್ತು. ತನ್ನ ಕಚೇರಿಯಲ್ಲಿ ಇಂಟರ್ನ್ಶಿಪ್ ಮಾಡಲು ಬಂದಿದ್ದ ಮಂಗಳೂರಿನ ಕಾನೂನು ಪದವಿ ಕಾಲೇಜಿನ ವಿದ್ಯಾರ್ಥಿನಿ ಲೈಂಗಿಕ ಕಿರುಕುಳ ಆರೋಪ ಮಾಡಿದ್ದು, ಈ ಪ್ರಕರಣದಲ್ಲಿ ಕರ್ತವ್ಯ ಲೋಪ ಎಸಗಿದ ಪಿ.ಎಸ್.ಐ ಮತ್ತು ಹೆಡ್ ಕಾನ್ಸ್ಟೇಬಲ್ ಅವರನ್ನು ಅಮಾನತು ಮಾಡುವಂತೆ ಮಂಗಳೂರು ನಗರ ಪೊಲೀಸ್ ಕಮೀಷನರ್ ಆದೇಶಿಸಿದ್ದಾರೆ.
ಅಮಾನತು ಆದವರನ್ನು ಪೂರ್ವ ಪೊಲೀಸ್ ಠಾಣೆಯ ಪಿ.ಎಸ್.ಐ ಶ್ರೀಕಲಾ ಮತ್ತು ಹೆಡ್ ಕಾನ್ಸ್ಟೇಬಲ್ ಪ್ರಮೋದ್ ಎನ್ನಲಾಗಿದೆ. ಸಂತ್ರಸ್ತೆ ವಿದ್ಯಾರ್ಥಿನಿಯಿಂದ ಇವರು ಕಾನೂನು ಮುಚ್ಚಳಿಕೆ ಬರೆಸಿಕೊಂಡು ಹೆಬ್ಬೆಟ್ಟು ಸಹಿಯನ್ನು ತೆಗೆದುಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಇವರನ್ನು ಅಮಾನತು ಮಾಡಲಾಗಿದೆ.
ಇನ್ನು ಇದೇ ಪ್ರಕರಣದಲ್ಲಿ ಸಂತ್ರಸ್ತೆಗೆ ಬೆದರಿಕೆ ಮತ್ತು ಆರೋಪಿ ವಕೀಲ ಪರ ವಹಿಸಿದ ಮೂವರನ್ನು ಬಂಧಿಸಲಾಗಿದೆ. ಜಾಗೃತ ಮಹಿಳಾ ವೇದಿಕೆಯ ಹೆಸರಿನಲ್ಲಿ ಪವಿತ್ರಾ ಆಚಾರ್ಯ ಎಂಬಾಕೆ ಸಂತ್ರಸ್ತೆಗೆ ನ್ಯಾಯ ಕೊಡಿಸುತ್ತೇನೆ ಎಂದು ಕರೆಸಿ ಪೊಲಿಸ್ ಠಾಣೆಗೆ ಕರೆದೊಯ್ದು ಮುಚ್ಚಳಿಕೆ ಬರೆಯಿಸಿ ಹೆಬ್ಬೆಟ್ಟು ಹಾಕಿಸಿಕೊಂಡಿದ್ದರು. ಈ ಕಾರಣಕ್ಕಾಗಿ ಇವರನ್ನು ಬಂಧಿಸಲಾಗಿದೆ. ಇನ್ನು ಲೈಂಗಿಕ ಕಿರುಕುಳ ಘಟನೆಯಾದ ಬಳಿಕ ಸಂತ್ರಸ್ತೆ ತನ್ನ ಗೆಳೆಯ ಧ್ರುವ ಎಂಬಾತನಿಗೆ ವಿಷಯ ತಿಳಿಸಿದ್ದಾಳೆ. ಆದರೆ, ಧ್ರುವ ಮತ್ತು ಆತನ ತಾಯಿ ರಾಜೇಶ್ ಬಳಿ ಮಾತನಾಡಿ ಸಂತ್ರಸ್ತೆಗೆ ದೂರು ನೀಡದಂತೆ ಬೆದರಿಸಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಗಿದೆ.
ಇದನ್ನೂ ಓದಿ: ಇಂಟರ್ನ್ಶಿಪ್ ವಿದ್ಯಾರ್ಥಿನಿ ಮೇಲೆ ಅತ್ಯಾಚಾರಕ್ಕೆ ಯತ್ನ; ಖ್ಯಾತ ವಕೀಲನ ಮೇಲೆ FIR