ಮಂಗಳೂರು: ಖಾಸಗಿ ಬಸ್ವೊಂದರಲ್ಲಿ ಬಿಹಾರದ ಯುವಕನ ಜೊತೆಗೆ ಮಹಿಳೆಯೊಬ್ಬಳು ಪ್ರಯಾಣಿಸುತ್ತಿದ್ದ ವೇಳೆ ಅವರಿಬ್ಬರು ಅನ್ಯಮತೀಯ ಜೋಡಿ ಎಂದು ಬಸ್ ತಡೆದವರು ಬೆಪ್ಪರಾದ ಘಟನೆ ಗುರುಪುರದಲ್ಲಿ ನಡೆದಿದೆ. ಇವರನ್ನು ನೋಡಿದ ಕೆಲವರಿಗೆ ತಲೆಯಲ್ಲಿ ಮತೀಯ ವಿಚಾರ ಬಂದಿದೆ. ಇವರಿಬ್ಬರನ್ನು ಅನ್ಯಮತೀಯ ಜೋಡಿ ಎಂದು ಬಸ್ ತಡೆದವರಿಗೇ ಕೊನೆಗೆ ತಾವು ತಪ್ಪು ತಿಳಿದಿರುವುದು ಅರಿವಿಗೆ ಬಂದಿದೆ.
ಮಂಗಳೂರಿನ ವಿವಾಹಿತ ಮಹಿಳೆಯೊಬ್ಬಳು ಬಿಹಾರದ ಗೆಳೆಯನೊಂದಿಗೆ ಬಸ್?ನಲ್ಲಿ ಸಂಚರಿಸುತ್ತಿದ್ದಳು. ಮೂಡುಬಿದಿರೆಯಿಂದ ಮಂಗಳೂರಿಗೆ ಬರುತ್ತಿದ್ದ ಬಸ್?ನಲ್ಲಿದ್ದ ಯುವಕ ಮತ್ತು ಗೃಹಿಣಿಯನ್ನು ನೋಡಿದವರು ಅವರು ಅನ್ಯಮತೀಯ ಜೋಡಿ ಎಂದು ಗುರುಪುರದ ಹಿಂದೂ ಸಂಘಟನೆಯ ಕಾರ್ಯಕರ್ತರಿಗೆ ಮಾಹಿತಿ ನೀಡಿದ್ದರು.
ಗುರುಪುರದ ಅಲೈಗುಡ್ಡೆ ಎಂಬಲ್ಲಿ ಹಿಂದೂ ಸಂಘಟನೆಯ ಕಾರ್ಯಕರ್ತರು ಬಸ್ ತಡೆದು ಯುವಕ ಮತ್ತು ಮಹಿಳೆಯನ್ನು ಕೆಳಗಿಳಿಸಿ ವಿಚಾರಣೆ ನಡೆಸುತ್ತಿದ್ದ ಸಂದರ್ಭದಲ್ಲಿ ಬಜ್ಪೆ ಪೊಲೀಸರು ಸ್ಥಳಕ್ಕಾಗಮಿಸಿದ್ದಾರೆ. ಆಗ ಇಬ್ಬರು ಒಂದೇ ಸಮುದಾಯಕ್ಕೆ ಸೇರಿದವರೆಂದು ವಿಚಾರಣೆಯ ವೇಳೆ ಪೊಲೀಸರಿಗೆ ತಿಳಿದುಬಂದಿದೆ.
ಅನ್ಯಮತೀಯ ಜೋಡಿ ಎಂದು ನೈತಿಕ ಪೊಲೀಸ್ ಗಿರಿ ನಡೆಸಲು ಹೋದವರು ಈ ಜೋಡಿ ಒಂದೇ ಸಮುದಾಯದವರೆಂದು ತಿಳಿದು ಬಂದ ಹಾದಿಗೆ ಸುಂಕ ಇಲ್ಲವೆಂಬತೆ ಅಲ್ಲಿಂದ ವಾಪಸ್ ಆಗಿದ್ದಾರೆ.