ಮಂಗಳೂರು: ಕಾರ್ಕಳ ಮೂಲದ ವ್ಯಕ್ತಿಯೊಬ್ಬರಿಗೆ ಜಾಗದ ವಿಚಾರದಲ್ಲಿ ನಗರದ ಪಶ್ಚಿಮ ಸಂಚಾರ ಠಾಣೆ ಪೊಲೀಸ್ ಸಿಬಂದಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿದ ಬಗ್ಗೆ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಾಗಿದ್ದು, ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೋಟೆಕಾರು ಗ್ರಾಮದ ಕೊಂಡಾಣದಲ್ಲಿ ಕಾರ್ಕಳ ನಿವಾಸಿ ಕರುಣಾಕರ ಪೂಜಾರಿ 0.71ಎಕರೆ ಜಮೀನನ್ನು ಇಂದಿರಾ ಅವರಿಂದ ಖರೀದಿಸಿದ್ದರು. ಜಮೀನಿಗೆ ಹೋಗಲು 21 ಲಿಂಕ್ಸ್ ಅಗಲ ರಸ್ತೆಯನ್ನು ನಕ್ಷೆಯಲ್ಲಿ ತೋರಿಸಿ ರಸ್ತೆ ಮಾಡಿಕೊಡುವುದಾಗಿ ನಂಬಿಸಿ ಹಣ ಪಡೆದ ಇಂದಿರಾ ಮತ್ತು ಅವರ ಮಕ್ಕಳು ಬಳಿಕ ರಸ್ತೆ ಮಾಡದೆ ವಂಚನೆ ಎಸಗಿದ್ದಾರೆ. ಬಳಿಕ ಕರುಣಾಕರ ಪೂಜಾರಿ ಅವರು ರಸ್ತೆಯನ್ನು ಅಭಿವೃದ್ಧಿಪಡಿಸುವ ಕಾರಣದಿಂದ 3 ತೆಂಗಿನ ಮರಗಳನ್ನು ಕಡಿದಿದ್ದರು. ಇದಕ್ಕೆ ಜಾಗ ಮಾರಿದ ಮಾಲಕರ ಅಳಿಯ ಹೆಡ್ ಕಾನ್ಸ್ಟೆಬಲ್ ಭುವನೇಶ್ ವಿರೋಧ ವ್ಯಕ್ತಪಡಿಸಿದ್ದರು.
ಬಳಿಕ ಕರುಣಾಕರ ಪೂಜಾರಿ ಅವರ ಮೊಬೈಲ್ಗೆ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಜೀವ ಬೆದರಿಕೆ ಹಾಕಿದ್ದಾರೆ.
ಈ ಬಗ್ಗೆ ಉಳ್ಳಾಲ ಠಾಣೆಯಲ್ಲಿ ದೂರನ್ನು ನೀಡಿದ್ದು, ಸೂಕ್ತ ಕ್ರಮ ಕೈಗೊಳ್ಳದ ಕಾರಣ ನ್ಯಾಯಾಲಯಕ್ಕೆ ಖಾಸಗಿ ದೂರು ಸಲ್ಲಿಸಿದ್ದರು. ನ್ಯಾಯಾಲಯ ಎಲ್ಲ ನಾಲ್ಕು ಜನ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸುವಂತೆ ಉಳ್ಳಾಲ ಪೊಲೀಸರಿಗೆ ನಿರ್ದೇಶನ ನೀಡಿದೆ. ದೂರುದಾರರ ಪರ ವಕೀಲ ಮನೋಹರ ಪಿ. ವಾದಿಸಿದ್ದರು.