ಮಂಗಳೂರು: ಸರಣಿ ಹತ್ಯೆಯಿಂದ ಬೂದಿ ಮುಚ್ಚಿದ ಕೆಂಡಾದಂತಿರುವ ಕರಾವಳಿಯಲ್ಲಿ ಹಿಂದೂ ಮುಸ್ಲಿಂ ಸಾಮರಸ್ಯ ಸಾರುವ ಘಟನೆಯೊಂದು ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಸುಬ್ರಮಣ್ಯ ಸಮೀಪದ ಹರಿಹರ ಪಳ್ಳತ್ತಡ್ಕ ಎಂಬಲ್ಲಿ ನಡೆದಿದೆ.
ಇಲ್ಲಿ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದ ಮುಸ್ಲಿಂ ಯುವಕನನ್ನು ಹಿಂದೂ ಯುವಕನೊಬ್ಬ ಕಾಪಾಡಿದ್ದಾನೆ. ಈ ಮೂಲಕ ಮಾನವೀಯತೆ ಎಲ್ಲಕ್ಕಿಂತ ದೊಡ್ಡದು ಅಂತ ಸಾರಿದ್ದಾನೆ.
ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಅಬ್ಬರದ ಮಳೆ ಮುಂದುವರೆದಿದೆ. ಕಡಬ ತಾಲೂಕಿನ ಸುಬ್ರಮಣ್ಯ ಸಮೀಪದ ಹರಿಹರಪಳ್ಳತ್ತಡ್ಕ ಎಂಬಲ್ಲಿ ಸೇತುವೆಯೊಂದರಲ್ಲಿ ಸಿಲುಕಿದ್ದ ಮರವನ್ನು ತೆರವುಗೊಳಿಸುವ ಸಂದರ್ಭ ಕ್ರೈನ್ ಆಪರೇಟರ್ ಶರೀಫ್ ಎಂಬಾತ ಆಯತಪ್ಪಿ ನದಿಗೆ ಬಿದ್ದಿದ್ದಾನೆ. ಶರೀಫ್ ನೀರಿನಲ್ಲಿ ಬೀಳುತ್ತಿದ್ದಂತೆ ಅಲ್ಲಿದ್ದವರೆಲ್ಲ ಕಿರುಚಲು ಶುರು ಮಾಡಿದ್ದಾರೆ. ಶರೀಫ್ ಸಹ ಭಯದಿಂದ ಕೂಗಿಕೊಂಡಿದ್ದಾನೆ. ಈ ಸಂದರ್ಭದಲ್ಲಿ ಅಲ್ಲೇ ಇದ್ದ ಸೋಮಶೇಖರ್ ಕಟ್ಟೆಮನೆ ಎಂಬ ಯುವಕ ಅಪಾಯ ಲೆಕ್ಕಿಸದೇ ತಕ್ಷಣ ನದಿಗೆ ಹಾರಿ ಆ ಯುವಕನನ್ನು ರಕ್ಷಿಸಿದ್ದಾನೆ.
ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್
ಸದ್ಯ ಕೋಮು ಸಂಘರ್ಷದಿಂದ ಬೂದಿ ಮುಚ್ಚಿದ ಕೆಂಡದಂತ ಪರಿಸ್ಥಿತಿ ಇರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬರು ತನ್ನ ಪ್ರಾಣವನ್ನೇ ಪಣಕ್ಕಿಟ್ಟು ಅನ್ಯ ಧರ್ಮದ ವ್ಯಕ್ತಿಯೊಬ್ಬರನ್ನು ರಕ್ಷಣೆ ಮಾಡಿದ್ದಕ್ಕೆ ಪ್ರಶಂಸೆ ವ್ಯಕ್ತವಾಗಿದೆ. ಈ ದೃಶ್ಯವನ್ನು ಸ್ಥಳದಲ್ಲಿದ್ದವರು ವಿಡಿಯೋ ಮಾಡಿ, ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದಾರೆ. ಸದ್ಯ ಸೋಶಿಯಲ್ ಮೀಡಿಯಾಗಳಲ್ಲಿ ಈ ವಿಡಿಯೋ ವೈರಲ್ ಆಗಿದ್ದು, ಸಾರ್ವಜನಿಕರು ಮೆಚ್ಚುಗೆ ಸೂಚಿಸಿದ್ದಾರೆ.