ಮಂಗಳೂರು: ಮತ್ತೊಂದು ಸೇತುವೆ ಬಿರುಕು ಬಿದ್ದು ಸುದ್ಧಿಯಾಗಿದೆ. ಕಾವೂರು ಬಳಿಯ ಮರವೂರು ಸೇತುವೆ ಬಿರುಕು ಬಿಟ್ಟಿದೆ. ನಿರಂತರ ಮತ್ತು ಅವೈಜ್ಞಾನಿಕ ರೀತಿಯ ಮರಳುಗಾರಿಕೆಗೆ ಬಲಿಯಾಗಿದೆ.
ಮರವೂರಿನ ಫಲ್ಗುಣಿ ನದಿಯ ಸೇತುವೆಯಲ್ಲಿ ಬಿರುಕು ಕಾಣಿಸಿಕೊಂಡಿದು, ಕಾವೂರು ಪೊಲೀಸರು ರಸ್ತೆಯಲ್ಲಿ ವಾಹನ ಸಂಚಾರಕ್ಕೆ ತಡೆ ಹಾಕಿದ್ದಾರೆ. ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು ಬ್ಯಾರಿಕೇಡ್ ಹಾಕಿ, ರಸ್ತೆಯನ್ನು ಬಂದ್ ಮಾಡಲಾಗಿದೆ.
ಮಂಗಳೂರು ನಗರದಿಂದ ಬಜ್ಪೆ ವಿಮಾನ ನಿಲ್ದಾಣವನ್ನು ಸಂಪರ್ಕಿಸುವ ಪ್ರಮುಖ ರಸ್ತೆಯ ಸಂಪರ್ಕ ಸೇತುವೆಯಾಗಿದ್ದ ಮರವೂರು ಬ್ರಿಡ್ಜ್ ಬಿರುಕು ಬಿಟ್ಟ ಕಾರಣದಿಂದ ಇನ್ನು ಗುರುಪುರ ಸೇತುವೆ ಮೂಲಕ ಏರ್ ಪೋರ್ಟ್ ಗೆ ಸುತ್ತು ಬಳಸಿ ತೆರಳಬೇಕಾಗಿದೆ.
ಮಂಗಳೂರು ನಗರದಿಂದ ಕೇವಲ ಹತ್ತು ನಿಮಿಷಗಳಲ್ಲಿ ಮರವೂರು ಬ್ರಿಡ್ಜ್ ಮೂಲಕ ಏರ್ ಪೋರ್ಟ್ ತಲುಪಬಹುದಿತ್ತು. ಅದಕ್ಕೆ ಈಗ ತೊಂದರೆ ಉಂಟಾಗಿದೆ.
ಗುರುಪುರ ಸೇತುವೆ, ಮೂಲರಪಟ್ನ ಸೇತುವೆ ಬಳಿಕ ಇದೀಗ ಮರವೂರು ಸೇತುವೆಯಲ್ಲೂ ದೊಡ್ಡ ಬಿರುಕು ಕಾಣಿಸಿಕೊಂಡಿದ್ದು ತುಂಡಾಗಿ ಬೀಳುವ ಆತಂಕ ಎದುರಾಗಿದೆ. ಮೂಲರಪಟ್ನ ಸೇತುವೆ ಅಕ್ರಮ ಮರಳುಗಾರಿಕೆಗೆ ಬಲಿಯಾಗಿತ್ತು.
ಇದೀಗ ಮರವೂರು ಸೇತುವೆಯು ಅಕ್ರಮ ಮರಳುಗಾರಿಕೆಗೆ ಬಾರಿಯಾಗಿದೆ ಎನ್ನಲಾಗಿದೆ. ದೊಡ್ಡ ದೊಡ್ಡ ಕುಳಗಳು ಡ್ರೆಜ್ಜರ್ ಇಟ್ಟು ಅಕ್ರಮವಾಗಿ ಮರಳುಗಾರಿಕೆ ನಡೆಸಿದ್ದ ಪರಿಣಾಮ ಸೇತುವೆ ಬಲಿ ಕೊಟ್ಟಿದ್ದಾರೆ ಅನ್ನುವ ಮಾತು ಕೇಳಿಬರುತ್ತಿದೆ.