ಮಂಗಳೂರು: ಯಾವುದೇ ಪರವಾನಿಗೆ ಇಲ್ಲದೇ ಗಾಂಧಿ ಸನ್ಸ್ ಕಟ್ಟಡದಲ್ಲಿ ಭಾರೀ ಪ್ರಮಾಣದ ಸ್ಫೋಟಕ ವಸ್ತುಗಳು ದಾಸ್ತಾನು ಮಾಡಿದ ಪ್ರಕರಣವೊಂದು ಬೆಳಕಿಗೆ ಬಂದಿದೆ.
ಬಂಧಿತ ಆರೋಪಿಯನ್ನು ಕೈರಂಗಳ ನಿವಾಸಿ ಆನಂದ ಗಟ್ಟಿ( 50) ಎನ್ನಲಾಗಿದೆ.
ಬಂದರು ಠಾಣಾ ಪೊಲೀಸರು ಕಾರ್ಯಾಚರಣೆ ನಡೆಸಿ 1 ಲಕ್ಷದ 11 ಸಾವಿರ ಮೌಲ್ಯದ ಸುಮಾರು 1725ಕೆ.ಜಿಯಷ್ಟು ತೂಕದ ಸ್ಫೋಟಕ ಇರುವುದನ್ನು ಪತ್ತೆ ಹಚ್ಚಿದ್ದಾರೆ. ಬಂಧಿತ ಆರೋಪಿಯನ್ನು ವಿಚಾರಣೆಗೆ ಒಳಪಡಿಸಲಾಗಿದೆ.
ಈ ಬಗ್ಗೆ ಮಾತನಾಡಿದ ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಎನ್. ಅವರು ಆರೋಪಿಯು ನಗರದಲ್ಲಿ ಗನ್ ಶಾಪ್ ಹೊಂದಿದ್ದ ಆದರೆ, ಯಾವುದೇ ಪರವಾನಿಗೆ ಇಲ್ಲದೆ ಈ ಸ್ಫೋಟಕ ಸಾಮಗ್ರಿಗಳನ್ನು ಖಾಸಗಿಯಾಗಿ ದಾಸ್ತಾನು ಮಾಡಿದ್ದ, ಆ ಕಟ್ಟಡದಲ್ಲಿ ಮೇಲಿನ ಮಹಡಿಯಲ್ಲಿ ವಸತಿ ಸಮುಚ್ಚಯವಿದ್ದು, 20-30 ಕುಟುಂಬಗಳು ವಾಸವಿದೆ.
ಬಹಳಷ್ಟು ಮಂದಿ ಮಕ್ಕಳು ಅದೇ ಪರಿಸರದಲ್ಲಿ ಓಡಾಟ ನಡೆಸುತ್ತಿದ್ದಾರೆ. ಅಚನಕ್ಕಾಗಿ ಸ್ಫೋಟಗೊಂಡಲ್ಲಿ ಅಪಾಯ ಎದುರಾಗುವ ಸಾಧ್ಯತೆ ಇದೆ. ಆದರೆ, ಭಯೋತ್ಪಾದನಾ ಚಟುವಟಿಕೆಯ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ ಎಂದು ಹೇಳಿದರು.