ಮಂಗಳೂರು: ಮಂಗಳೂರಿನ ನಂತೂರು ಸರ್ಕಲ್ ಬಳಿ ಗುರುವಾರ ಸಂಜೆ ಭಿನ್ನಕೋಮಿನ ಜೋಡಿ ಮೇಲೆ ದಾಳಿ ನಡೆಸಿದ್ದ ಘಟನೆಗೆ ಸಂಬಂಧಿಸಿದಂತೆ ಕದ್ರಿ ಠಾಣಾ ಪೊಲೀಸರು ಮೂವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಸುರತ್ಕಲ್ ನಿವಾಸಿ ಮುತ್ತು (18), ಪ್ರಕಾಶ್(21) ಮತ್ತು ಅಸೈಗೋಳಿ ನಿವಾಸಿ ರಾಕೇಶ್(23) ಎಂಬವರನ್ನು ಬಂಧಿಸಿದ್ದಾರೆ. ಈ ಮೂವರೂ ಭಜರಂಗದಳ ಮತ್ತು ವಿಶ್ವ ಹಿಂದು ಪರಿಷತ್ ಕಾರ್ಯಕರ್ತರು ಎಂದು ಪೊಲೀಸರು ತಿಳಿಸಿದ್ದಾರೆ.
ನವೆಂಬರ್ 24ರಂದು ಸಂಜೆ ಕಾರ್ಕಳದ ನಿಟ್ಟೆಯಿಂದ ತನ್ನ ಸಹಪಾಠಿ ಎಂದು ಹೇಳಿಕೊಂಡಿರುವ ಯುವತಿಯ ಜೊತೆಗೆ ಆಗಮಿಸುತ್ತಿದ್ದ ಜೆಪ್ಪು ನಿವಾಸಿ ಸೈಯ್ಯದ್ ರಶೀಮ್ನನ್ನು ನಂತೂರು ಸರ್ಕಲ್ ಬಳಿ ಏಕಾಏಕಿ ಬಸ್ಸನ್ನು ಅಡ್ಡ ಹಾಕಿ ಒಳನುಗ್ಗಿದ ತಂಡ, ಯುವಕನ ಬಳಿ ಇದ್ದ ಐಡಿ ಕಾರ್ಡ್ ತೋರಿಸಲು ಹೇಳಿ ಬಳಿಕ ಬಸ್ಸಿನಿಂದ ಕೆಳಕ್ಕೆ ಎಳೆದು ಹಾಕಿ ಹಲ್ಲೆ ನಡೆಸಿದ್ದರು.
ಆತನ ಜೊತೆಗೆ ಇದ್ದ ಭಿನ್ನ ಕೋಮಿನ ಯುವತಿಗೂ ಅಶ್ಲೀಲ ಪದಗಳನ್ನು ಬಳಸಿ ತರಾಟೆಗೆ ತೆಗೆದುಕೊಂಡಿದ್ದರು. ಅದಲ್ಲದೇ ಆರೋಪಿಗಳು ದೊಣ್ಣೆ, ಬೆತ್ತ ಹಾಗೂ ಕಲ್ಲಿನಿಂದ ಹಲ್ಲೆ ನಡೆಸಿದ್ದರು ಎಂದು ಸಂತ್ರಸ್ತ ಯುವಕ ಸೈಯ್ಯದ್ ರಶೀಮ್ ಕದ್ರಿ ಠಾಣೆಗೆ ದೂರು ನೀಡಿದ್ದರು. ಸೈಯ್ಯದ್ ರಶೀಮ್ ಹಾಗೂ ಯುವತಿ ನಗರದ ಕಾಲೇಜಿನ ಸಹಪಾಠಿಗಳಾಗಿದ್ದರು.
ನಂತೂರಿನ ಸೈಯ್ಯದ್ ರಶೀಮ್ ಮೇಲೆ ನಡೆದ ಹಲ್ಲೆ ಪ್ರಕರಣದ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಡಿಜಿಪಿ ಅಲೋಕ್ ಕುಮಾರ್ ಅವರು ಟ್ವೀಟ್ ಮೂಲಕ ತಿಳಿಸಿದ್ದರು.