ಮಂಗಳೂರು: ಇಲ್ಲಿನ ಹೊರವಲಯದ ಕಿನ್ನಿಗೋಳಿ ಸಮೀಪದ ನಿಡ್ಡೋಡಿ ಎಂಬಲ್ಲಿನ ಮನೆಯೊಂದರಲ್ಲಿ ಎರಡು ತಲೆಯ ಹಾವು ಪತ್ತೆಯಾಗಿ ಕೆಲ ಕಾಲ ಮನೆ ಮಂದಿಯನ್ನು ಆತಂಕಕ್ಕೀಡುಮಾಡಿದ ಘಟನೆಯೊಂದು ಆಗಸ್ಟ್ 07ರಂದು ನಡೆದಿದೆ.
ಇಲ್ಲಿನ ರಾಜೇಶ್ ಎಂಬವರ ಮನೆಯಲ್ಲಿ ಈ ಎರಡು ತಲೆಯ ಹಾವು ಪತ್ತೆಯಾಗಿದ್ದು,ಕೂಡಲೇ ಉರಗ ಪ್ರೇಮಿ ವಿನೇಶ್ ಪೂಜಾರಿ ನಿಡ್ಡೋಡಿಯವರಿಗೆ ವಿಷಯ ತಿಳಿಸಲಾಯಿತು. ಬಳಿಕ ಸ್ಥಳಕ್ಕೆ ಆಗಮಿಸಿದ ವಿನೇಶ್ ಹಾವನ್ನು ಹಿಡಿದು ಸುರಕ್ಷಿತವಾಗಿ ರಕ್ಷಿಸಿದ್ದಾರೆ.
ಎರಡು ತಲೆಯ ಹಾವು ಇತ್ತೀಚಿನ ದಿನಗಳಲ್ಲಿ ಅತೀ ವಿರಳವಾಗಿದ್ದು, ಈ ಹಾವು ಹೆಚ್ಚು ಬೆಲೆ ಬಾಳುತ್ತದೆ ಎನ್ನುವ ವದಂತಿಯೊಂದು ಹಬ್ಬಿದ ಕಾರಣದಿಂದಲೇ ಈ ಹಾವಿನ್ನು ಹಿಡಿದು ಮಾರಾಟ ನಡೆಸಿದ ಪರಿಣಾಮ ಇವುಗಳ ಸಂತತಿ ಕಡಿಮೆಯಾಗಿದೆ ಎನ್ನುವ ಮಾತುಗಳು ಕೇಳಿ ಬಂದಿವೆ.
ಕಳೆದ ಕೆಲ ವರ್ಷಗಳ ಹಿಂದೆ ಈ ಹಾವಿಗೆ ಬೆಲೆ ಕೊಡುತ್ತಾರೆ ಎನ್ನುವ ವಿಚಾರವೊಂದು ಹರಿದಾಡಿದ ಹಿನ್ನೆಲೆಯಲ್ಲಿ ಈ ಹಾವುಗಳ ಬೇಟೆ ನಡೆದಿದ್ದು, ಕದ್ದು ಮಾರಾಟ ದಂಧೆ ನಡೆಸುತ್ತಿದ್ದ ಹಲವರು ಅರಣ್ಯಾಧಿಕಾರಿಗಳಿಂದ ಬಂಧನಕ್ಕೂ ಒಳಗಾಗಿದ್ದರು.
ರೈತನ ಮಿತ್ರ, ಮಣ್ಣು ಮುಕ್ಕ ಹಾವು ಎಂದೆಲ್ಲಾ ಕರೆಯಲ್ಪಡುವ ಇವುಗಳ ಸಂತತಿ ನಾಶವಾಗುತ್ತಿರುವುದು ಬೇಸರದ ಸಂಗತಿ ಎನ್ನುತ್ತಾರೆ ಉರಗ ಪ್ರೇಮಿ ವಿನೇಶ್ ಪೂಜಾರಿ.