
ಮಂಗಳೂರು: ಭಾರತದಲ್ಲಿ ಇದೇ ಮೊದಲ ಬಾರಿಗೆ ಸಮುದ್ರದ ಉಪ್ಪು ನೀರನ್ನು ಸಿಹಿ ನೀರನ್ನಾಗಿ ಪರಿವರ್ತನೆ ಮಾಡುವ ತಂತ್ರಜ್ಞಾನವನ್ನು ಮಂಗಳೂರು ಮೀನುಗಾರಿಕಾ ಬೋಟ್ನಲ್ಲಿ ಪ್ರಾಯೋಗಿಕವಾಗಿ ಅಳವಡಿಸಲಾಗಿದ್ದು, ಈ ಯಂತ್ರದ ಮೂಲಕ ದಿನಕ್ಕೆ ಎರಡು ಸಾವಿರ ಲೀ. ನೀರನ್ನು ಕುಡಿಯಲು ಯೋಗ್ಯವಾದ ಶುದ್ಧ ನೀರನ್ನಾಗಿ ಮಾರ್ಪಾಡು ಮಾಡಬಹುದಾಗಿದೆ.
ಈ ರೀತಿಯಲ್ಲಿ ಫಿಲ್ಟರ್ ಮಾಡಲಾದ ನೀರಿನಿಂದ ಆರೋಗ್ಯಕ್ಕೆ ಯಾವುದೇ ರೀತಿಯಾದ ಹಾನಿ ಸಂಭವಿಸುವುದಿಲ್ಲ. ಈ ಯೋಜನೆಗೆ ಮೀನುಗಾರಿಕಾ ಸಚಿವ ಎಸ್. ಅಂಗಾರ ಅವರೇ ಈ ತಂತ್ರಜ್ಞಾನದ ಬಳಸಿ ಶುದ್ಧೀಕರಿಸಲಾದ ನೀರು ಕುಡಿಯುವ ಮೂಲಕ ಚಾಲನೆಯನ್ನು ನೀಡಿದ್ದಾರೆ. ಈ ಯೋಜನೆಗೆ ಕೇಂದ್ರ ಸರ್ಕಾರ ಪ್ರೋತ್ಸಾಹ ನೀಡುತ್ತಿದ್ದು, 50% ಸಬ್ಸಿಡಿಯನ್ನು ಸಹ ಈ ಯಂತ್ರಕ್ಕೆ ಘೋಷಿಸಿದೆ.
ಈ ತಂತ್ರಜ್ಞಾನದಿಂದ ಮುಂದಿನ ದಿನಗಳಲ್ಲಿ ಆಳ ಸಮುದ್ರ ಮೀನುಗಾರಿಕೆಗೆ ತೆರಳುವ ಮೀನುಗಾರರಿಗೆ ಹೆಚ್ಚಿನ ಉಪಯೋಗವಾಗಲಿದೆ. ಇನ್ನು ಸಮುದ್ರದ ಉಪ್ಪು ನೀರನ್ನು ಸಿಹಿ ನೀರನ್ನಾಗಿ ಮಾರ್ಪಡಿಸುವ ಈ ತಂತ್ರಜ್ಞಾನದ ಪ್ರಾತ್ಯಕ್ಷಿಕೆಯನ್ನು ಸಹ ಸಚಿವ ಅಂಗಾರ ಅವರೇ ಖುದ್ದು ಪರಿಶೀಲಿಸಿದ್ದಾರೆ.












