ಮಂಗಳೂರು: ಅಪ್ರಾಪ್ತ ಬಾಲಕಿಯ ಸಾಮೂಹಿಕ ಅತ್ಯಾಚಾರ ನಡೆದ ಘಟನೆ ಉಳ್ಳಾಲ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ. ಈ ಸಂಬಂಧ ಮೂವರ ಬಂಧನ ಆಗಿದೆ.
ಬಂಧಿತರಲ್ಲಿ ಇಬ್ಬರು ಅನ್ಯಕೋಮಿನ ಯುವಕರು ಹಾಗೂ ಓರ್ವ ಯುವತಿಯದ್ದೇ ಕೋಮಿನ ಹುಡುಗ ಎಂದು ಪೊಲೀಸ್ ಕಮಿಷನರ್ ಶಶಿಕುಮಾರ್ ಮಾಹಿತಿ ನೀಡಿದ್ದಾರೆ.
ಅಪ್ರಾಪ್ತ ಬಾಲಕಿಗೆ ಸಾರಾಯಿ ಕುಡಿಸಿ ಮತ್ತು ಬರುವ ಔಷಧಿ ನೀಡಿ ಮುಡಿಪು ಸಮೀಪದ ಲಾಡ್ಜ್ ನಲ್ಲಿ ಮೂವರು ಅತ್ಯಾಚಾರ ಮಾಡಿದ್ದಾರೆ ಎಂದು ಯುವತಿಯ ತಾಯಿ ಕೇಸ್ ದಾಖಲಿಸಿದ್ದಾರೆ.
ಇದೇ ಅಕ್ಟೋಬರ್ ತಿಂಗಳಿನಲ್ಲಿ ಇದೇ ಯುವತಿ ಮಂಗಳೂರಿನ ಚಿಲಿಂಬಿಗುಡ್ಡದಲ್ಲಿ ಅನ್ಯಧರ್ಮದ ಯುವಕನೊಬ್ಬ ಹಾಗೂ ಇನ್ನೋರ್ವ ಯುವಕನ ಜೊತೆ ಹಿಂದೂ ಸಂಘಟನೆಗಳ ಕೈಗೆ ಸಿಕ್ಕಿಬಿದ್ದಿದ್ದು ಈ ವೇಳೆ ಯುವಕರು ಡ್ರಗ್ಸ್ ಸೇವಿಸಿರೋದು ಬೆಳಕಿಗೆ ಬಂದಿತು.
ಕಮಿಷನರ್ ಮಾಹಿತಿ
ಮಂಗಳೂರು ಹೊರವಲಯದ ಗುರುಪುರ ಬಳಿಯ ಚಿಲಿಂಬಿಗುಡ್ಡೆ ಎಂಬ ನಿರ್ಜನ ಪ್ರದೇಶದಲ್ಲಿ ಇಬ್ಬರು ಯುವಕರ ಜೊತೆ ಓರ್ವಳು ಯುವತಿ, ಓರ್ವಳು ಬಾಲಕಿ ಪತ್ತೆಯಾಗಿದ್ದರು. ಇಬ್ಬರು ಯುವಕರಲ್ಲಿ ಓರ್ವ ಮುಸ್ಲಿಂ ಸಮುದಾಯಕ್ಕೆ ಸೇರಿದ್ದ ಯುವಕನಿದ್ದು ಈ ಬಗ್ಗೆ ಹಿಂದೂಪರ ಸಂಘಟನೆ ಕಾರ್ಯಕರ್ತರು ಬಜ್ಪೆ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಹೀಗಾಗಿ ಆಗ ಡ್ರಗ್ಸ್ ಸೇವಿಸಿರುವ ಆರೋಪದಡಿಯಲ್ಲಿ ಬಜ್ಪೆ ಠಾಣಾ ಪೊಲೀಸರು ಶಾಕೀರ್, ಧೀರಜ್ ಮೇಲೆ ಪ್ರಕರಣ ದಾಖಲಿಸಿದ್ದರು.
ಇದೇ ಬಾಲಕಿ ಮನೆಯವರು ನೀಡಿದ ದೂರಿನ ಆಧಾರದ ಮೇಲೆ ಪೋಕ್ಸೋ ಪ್ರಕರಣ ದಾಖಲಾಗಿದೆ.
ಹೀಗಾಗಿ ಇಬ್ಬರು ಯುವಕರ ವಿರುದ್ದ ಮಾದಕವಸ್ತು ಸೇವನೆಯ ಕೇಸ್ ಜೊತೆ ಪೋಕ್ಸೋ ಪ್ರಕರಣವೂ ದಾಖಲಿಸಲಾಗಿತ್ತು.
ಈ ಯುವತಿ ಹಿಂದೊಮ್ಮೆ ನಾಪತ್ತೆಯಾಗಿದ್ದಳು. ಪ್ರಕರಣ ದಾಖಲಾಗಿತ್ತು. ಪತ್ತೆಯಾದ ಬಳಿಕ ಪೊಲೀಸ್ ಸಿಬ್ಬಂದಿಯೋರ್ವರು ಈಕೆಯ ನಂಬರ್ ಪಡೆದು ಮೆಸೇಜ್ ಮಾಡಿ ಅನುಚಿತವಾಗಿ ವರ್ತಿಸಿದ್ದರು. ಈ ಬಗ್ಗೆ ಅವರನ್ನೂ ಸೇವೆಯಿಂದ ಅಮಾನತು ಮಾಡಿ ಅವರ ಮೇಲೂ ಪೋಕ್ಸೋ ಪ್ರಕರಣ ದಾಖಲಾಗಿದೆ ಎಂದು ಕಮಿಷನರ್ ಮಾಹಿತಿ ನೀಡಿದರು.
ಆರೋಪಿಗಳಲ್ಲಿ ಓರ್ವ ನಾಗಬನ ಧ್ವಂಸ ಪ್ರಕರಣದಲ್ಲೂ ಇದ್ದ ಎಂದು ಕಮಿಷನರ್ ತಿಳಿಸಿದ್ದಾರೆ.