ಮಡಿಕೇರಿ: ರಸ್ತೆ ಬದಿ ನಿಂತಿದ್ದ ಯುವತಿಯನ್ನು ಬಲವಂತವಾಗಿ ಎಳೆದೊಯ್ದ ಪ್ರಕರಣವು ಸಾರ್ವಜನಿಕರಿಗೆ ಅಪಹರಣದಂತೆ ಕಂಡು ಕೊನೆಯಲ್ಲಿ ಸ್ನೇಹಿತರೇ ಬೆಟ್ಟಿಂಗ್ ಗಾಗಿ ತಮಾಷೆ ನಡೆಸಿದ ಪ್ರಕರಣವು ಸುಖಾಂತ್ಯ ಕಂಡಿದೆ.
ಮಂಡ್ಯ ಜಿಲ್ಲೆಯ ಎಂಜಿನಿಯರಿಂಗ್ ವಿದ್ಯಾರ್ಥಿನಿಯಾದ ಈ ಯುವತಿಯು ತನ್ನ ನಾಲ್ವರು ಸ್ನೇ ಹಿತರೊಂದಿಗೆ ಮಡಿಕೇರಿಗೆ ಪ್ರವಾಸಕ್ಕಾಗಿ ಬಂದಿದ್ದರು. ಈ ವೇಳೆ ಸ್ನೇಹಿತರೊಂದಿಗೆ ತಾನು ಹಣ ಇಲ್ಲದಿದ್ದರೂ ಊರು ತಲುಪುತ್ತೇನೆ ಎಂದು ಮೋಜಿಗಾಗಿ ಬೆಟ್ಟಿಂಗ್ ಕಟ್ಟಿ, ಕಾರಿನಿಂದಿಳಿದು ಹೊರಟರು.
ಸಂಪಿಗೆಕಟ್ಟೆ ಸಮೀಪ ಗೂಗಲ್ ಪೇ ಮಾಡಿ ಅಂಗಡಿಯೊಂದರ ಮಾಲೀಕರಿಂದ 500 ರೂ ನಗದು ಪಡೆದು, ಬಸ್ ನಲ್ಲಿ ಹೊರಡಲು ಸಿದ್ಧವಾಗಿದ್ದರು. ಈ ವೇಳೆ ಯುವತಿಯನ್ನು ಹುಡುಕುತ್ತ ಬಂದ ಸ್ನೇಹಿತರು ಆಕೆಯನ್ನು ಎಳೆದೊಯ್ದರು. ಇದು ಸಾರ್ವಜನಿಕರಿಗೆ ಅಪಹರಣದಂತೆ ಕಂಡಿತು ಎಂದು ಪೊಲೀಸರು ತಿಳಿಸಿದ್ದಾರೆ.
ಯುವತಿಯನ್ನು ಬಲವಂತವಾಗಿ ಎಳೆದೊಯ್ದ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಯುವತಿಯ ಹೇಳಿಕೆ ಪಡೆಯಲಾಗಿದೆ. ಅಪಹರಣ ಪ್ರಕರಣ ಇದಾಗದೇ ಇರುವುದರಿಂದ ಪ್ರಕರಣವನ್ನು ಮುಕ್ತಾಯಗೊಳಿಸಲಾಗುವುದು ಎಂದು ಹೇಳಿದ್ದಾರೆ.