


ಮಡಿಕೇರಿ: ವೀರಾಜಪೇಟೆಯ ಬಿಟ್ಟಂಗಾಲ ಸಮೀಪದ ನಾಂಗಾಲ ಗ್ರಾಮದಲ್ಲಿ ಯುವತಿಯೊಬ್ಬಳನ್ನು ಹತ್ಯೆ ಮಾಡಿ ನಾಪತ್ತೆಯಾಗಿದ್ದ ವ್ಯಕ್ತಿಯ ಶವ ಬುಧವಾರ ಬೆಳಗಿನ ಜಾವ ಪತ್ತೆಯಾಗಿದೆ. ನಾಂಗಾಲ ಗ್ರಾಮದ ಬುಟ್ಟಿಯಂಡ ಮಾದಪ್ಪ ಅಲಿಯಾಸ್ ಸುನಂದ ಅವರ ಪುತ್ರಿ ಆರತಿ (24) ಎಂಬಾಕೆಯನ್ನು ಭಾನುವಾರ ಕತ್ತಿಯಿಂದ ಕಡಿದು ಹತ್ಯೆ ಮಾಡಲಾಗಿತ್ತು.

ಕಂಡಂಗಾಲ ಗ್ರಾಮ ಕೆ. ತಿಮ್ಮಯ್ಯ ಎಂಬಾತನೇ ಈಕೆಯನ್ನು ಕೊಲೆ ಮಾಡಿರಬೇಕೆಂದು ಶಂಕಿಸಲಾಗಿತ್ತು.ಇದಕ್ಕೆ ಪೂರಕವಾಗಿ ಆರತಿಯ ಶವದ ಸಮೀಪದಲ್ಲೇ ಆತನದ್ದೆನ್ನಲಾದ ಹೆಲ್ಮೆಟ್ ಪತ್ತೆಯಾಗಿದೆ. ಘಟನೆಯ ಬಳಿಕ ಆತ ಕಂಡಂಗಾಲದ ತನ್ನ ಮನೆಯ ಬಳಿಯ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಶಂಕೆ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಸೋಮವಾರ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳು ಆತನ ಶವಕ್ಕಾಗಿ ಶೋಧ ನಡೆಸಿದ್ದರು. ಆದರೆ ಯಾವುದೇ ಪ್ರಯೋಜನವಾಗಿರಲಿಲ್ಲ. ಮಂಗಳವಾರ ಕೆರೆಯ ನೀರನ್ನು ಖಾಲಿ ಮಾಡಿ ಶೋಧಿಸಿದ್ದರೂ ಶವ ಪತ್ತೆಯಾಗದ ಹಿನ್ನೆಲೆಯಲ್ಲಿ ಕೆರೆಯ ಬಳಿ ಪೊಲೀಸ್ ಪಹರೆ ಹಾಕಲಾಗಿತ್ತು. ಬುಧವಾರ ಬೆಳಗಿನ ಜಾವ ಆತನ ಶವ ಕೆರೆಯಲ್ಲಿ ತೇಲುತ್ತಿದ್ದುದು ಪತ್ತೆಯಾಗಿದೆ.








