ಮಣಿಪಾಲ: ವೇಗವಾಗಿ ಬಂದ ಕಾರೊಂದು ಪಾದಚಾರಿಗಳಿಗೆ ಡಿಕ್ಕಿ ಹೊಡೆದು ಓರ್ವ ಮೃತಪಟ್ಟು ಹಲವು ಮಂದಿ ಗಾಯಗೊಂಡ ಘಟನೆ ಮಣಿಪಾಲ ಸೆಂಟ್ರಲ್ ಪಾರ್ಕ್ ಹೊಟೇಲ್ ಬಳಿಯ ಇಳಿಜಾರು ರಸ್ತೆಯಲ್ಲಿ ಶನಿವಾರ ತಡರಾತ್ರಿ ನಡೆದಿದೆ.
ಹೊಟೇಲ್ ಒಂದರಲ್ಲಿ ತಡರಾತ್ರಿ ಕೆಲಸ ಮುಗಿಸಿ ಬರುತ್ತಿದ್ದ ಪಶ್ಚಿಮ ಬಂಗಾಲದ ನಿವಾಸಿ ಸಾಹಿನ್ ಎಸ್.ಕೆ (18) ಮೃತಪಟ್ಟ ಯುವಕ. ಅಪಘಾತದಲ್ಲಿ ಸುಮಿತ್ ಜಸ್ವಾಲ್, ಸಂಸುಲ್ ಆರೀಫ್ ಹೋಕ್ಯೂ, ಲತೀಪುಲ್ ಚೌದುರಿ, ಸುಕ್ದೇಬ್ ಕರ್ಮಾಕರ್
ಮತ್ತು ಸಾಹಿನ್ ಎಸ್.ಕೆ. ಎಂಬವರು ಗಾಯಗೊಂಡಿದ್ದು, ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಪೈಕಿ ಗಂಭೀರವಾಗಿ ಗಾಯಗೊಂಡಿದ್ದ ಸಾಹಿನ್ ಎಸ್.ಕೆ ಚಿಕಿತ್ಸೆಗೆ ಸ್ಪಂದಿಸದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಅಪಘಾತ ವೇಳೆ ಸಮೀಪದಲ್ಲಿ ನಿಲ್ಲಿಸಿದ್ದ ಪೆರ್ಡೂರಿನ ಸಂತೋಷ್ ಕುಲಾಲ್ ಅವರ ಆಟೋ ರಿಕ್ಷಾಕ್ಕೂ ಕಾರು ಡಿಕ್ಕಿಯಾಗಿ ಹಾನಿ ಸಂಭವಿಸಿದೆ ಎಂದು ತಿಳಿದು ಬಂದಿದೆ.
ಅಪಘಾತ ನಡೆಸಿದ ಕಾರು ಚಾಲಕ ಸ್ಥಳದಿಂದ ಪರಾರಿಯಾಗಿದ್ದು, ಬಳಿಕ ಕಾರು ಚಾಲಕ ದೀಕ್ಷಿತ್ ರಾಜ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.