ಮೀರತ್: ಮತ್ತೊಂದು ಹತ್ರಾಸ್ ರೀತಿಯ ಘಟನೆ ಮರುಕಳಿಸಿದೆ. 16 ವರ್ಷದ ಬಾಲಕಿಯನ್ನು ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ಬುಲಂದ್ ಶಹರ್ನಲ್ಲಿ ನಡೆದಿದೆ.
ಪೊಲೀಸರು ಸಂತ್ರಸ್ತ ಬಾಲಕಿಯ ಅಂತ್ಯಸಂಸ್ಕಾರವನ್ನು ತರಾತುರಿಯಲ್ಲಿ ನಡೆಸಿದ್ದು, ಬಾಲಕಿಯ ಅಂತಿಮ ದರ್ಶನಕ್ಕೂ ಅವಕಾಶ ನೀಡಿಲ್ಲ ಎಂದು ಕುಟುಂಬದವರು ಆರೋಪಿಸಿದ್ದಾರೆ.
ಈ ಘಟನೆ ಜನವರಿ 21ರಂದು ನಡೆದಿದೆ. ಆದರೆ ಪೊಲೀಸರು ಬೆದರಿಕೆ ಹಾಕಿ ಕುಟುಂಬದವರ ಬಾಯಿ ಮುಚ್ಚಿಸಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.
ಸಂತ್ರಸ್ತ ಬಾಲಕಿಯ ತಂದೆ ಈ ಬಗ್ಗೆ ಪ್ರತಿಕ್ರಿಯಿಸಿ, ಮಗಳನ್ನು ಮೇಲ್ಜಾತಿಗ ಯುವಕ ಗ್ರಾಮಕ್ಕೆ ಹೊರಗೆ ಸುತ್ತಾಡಿಕೊಂಡು ಬರಲು ಕರೆದಿದ್ದಾನೆ. ಇದಕ್ಕೆ ಒಪ್ಪಿ ಬೈಕಿನಲ್ಲಿ ಬಾಲಕಿ ತೆರಳಿದ್ದಾಳೆ. ಆ ಬಳಿಕ ಮಗಳ ಶವ ಗ್ರಾಮದ ಹೊರವಲಯದ ಕೊಳವೆಬಾವಿ ಬಳಿ ಬಿದ್ದಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದು. ನಾನು ಸ್ಥಳಕ್ಕೆ ಹೋಗಿ ನೋಡಿದಾಗ, ದೇಹವನ್ನು ಮರಣೋತ್ತರ ಪರೀಕ್ಷೆಗೆ ಕೊಂಡೊಯ್ಯಲಾಗಿದೆ. 24 ಗಂಟೆ ಬಳಿಕ ನಮಗೆ ದೇಹ ಹಸ್ತಾಂತರಿಸಿ ತಕ್ಷಣ ಅಂತ್ಯಸಂಸ್ಕಾರ ನಡೆಸುವಂತೆ ಬಲವಂತ ಮಾಡಿದ್ದಾರೆ. ಕುಟುಂಬಸ್ಥರು ಕೂಡ ಸರಿಯಾಗಿ ನೋಡಲು ಬಿಟ್ಟಿಲ್ಲ ಎಂದು ಆರೋಪಿಸಿದ್ದಾರೆ.
ಈ ಬಗ್ಗೆ ಬಾಲಕಿಯ ತಂದೆ ದೂರು ನೀಡಿದ್ದು, ಐಪಿಸಿ ಮತ್ತು ಪೋಕ್ಸೊ ಕಾಯ್ದೆ ಅನ್ವಯ ಎಫ್ಐಆರ್ ದಾಖಲಿಸಲಾಗಿದೆ. ನಾಲ್ವರು ಆರೋಪಿಗಳ ಪೈಕಿ ಇಬ್ಬರನ್ನು ಬಂಧಿಸಲಾಗಿದೆ.
ಪ್ರಕರಣ ಮುಚ್ಚಿ ಹಾಕಲು ಪೊಲೀಸರು ಪ್ರಯತ್ನಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಇದೀಗ ಘಟನೆ ದೇಶದಾದ್ಯಂತ ಸಂಚಲನ ಮೂಡಿಸಿದೆ.