ಸಸ್ಯಗಳೆಂದರೆ ಮಣ್ಣಿನ ಸಾರ ಸತ್ವವನ್ನು ಬೇರಿನಲ್ಲಿ ಹೀರಿ ಎಲೆಗಳ ಪತ್ರಹರಿತ್ತಿನಿಂದ ತನಗೆ ಬೇಕಾದ ಆಹಾರ ತಾನೇ ತಯಾರಿಸುವ ಸಾಮಾರ್ಥ್ಯ ಹೊಂದಿದೆ. ಸಸ್ಯಗಳೆಂದರೆ ಬೇರೆ ಜೀವಿಗಳ ಅಮೃತದ ಬಟ್ಟಲು. ಇಂಗಾಲದ ಡೈ ಆಕ್ಸೈಡ್ ಹೀರಿ ಆಮ್ಲಜನಕ ಹೊರಸೂಸುವ ಗುಣ ಎಲ್ಲರಿಗೂ ತಿಳಿದಿರುವ ವಿಚಾರ. ಆದ್ರೆ ಕೆಲವೊಂದು ಸಸ್ಯಗಳು ತನ್ನ ವಿಶೇಷ ಸಾಮಾರ್ಥ್ಯದಿಂದಲೇ ಎಲ್ಲರನ್ನೂ ಆಕರ್ಷಿಸುತ್ತದೆ.
ಡೈನೋಸಾರ್ ಕಾಲದಲ್ಲಿ ಹೊಸ ಸಸ್ಯಗಳ ಉದಯ..!
ಸಸ್ಯ ಪ್ರಪಂಚಕ್ಕೆ ಕೋಟ್ಯಾಂತರ ವರ್ಷಗಳ ಇತಿಹಾಸವಿದೆ. ಹಿಂದೆ ಇದ್ದ ಸಸ್ಯಗಳು ಕಾಲಕ್ಕೆ ತಕ್ಕಂತೆ ತನ್ನ ರೂಪವನ್ನು ಬದಲಿಸಿದೆ. ಮುಂದೆಯೂ ಕಾಲಚಕ್ರಕ್ಕೆ ಸಿಲುಕಿ ತನ್ನ ರೂಪ, ಗುಣವನ್ನು ಬಲಿಸುವಲ್ಲಿ ಯಾವುದೇ ಅನುಮಾನವಿಲ್ಲ. ಅಂತೆಯೇ ಹೊಸ ಸಸ್ಯಗಳು ಕೂಡ ಉದಯವಾಗುತ್ತದೆ.
ಮಾಂಸಹಾರಿ ಸಸ್ಯಗಳು..!
ಸಸ್ಯಗಳು ತನ್ನ ಆಹಾರವನ್ನು ತಾನೇ ತಯಾರಿಸುವ ಗುಣವನ್ನು ನಾವು ಪ್ರಾಥಮಿಕ ಶಿಕ್ಷಣ ಹಂತದಲ್ಲಿಯೇ ತಿಳಿದುಕೊಂಡಿದ್ದೇವೆ. ಇನ್ನು ಮಾಂಸಹಾರಿ ಸಸ್ಯಗಳ ಬಗ್ಗೆಯೂ ತಿಳಿದುಕೊಂಡಿದ್ದೇವೆ. ಸಾಮಾನ್ಯವಾಗಿ ಕಳಪೆ ಪೌಷ್ಟಿಕಾಂಶದ ಮಣ್ಣಿನಲ್ಲಿ ಬೆಳೆಯುವ ಈ ಸಸ್ಯಗಳು ತಮಗೆ ಆಹಾರ ಸಿಗದೇ ಇದ್ದಾಗ ಬೇರೆ ಜೀವಿಗಳನ್ನು ಕೊಂದು ಅದರ ಪೋಷಕಾಂಶವನ್ನ ಹೀರುತ್ತದೆ. ವಿಜ್ಞಾನಿಗಳ ಸಂಶೋಧನೆಯ ಪ್ರಕಾರ ಈ ಮಾಂಸಾಹಾರಿ ಸಸ್ಯಗಳ ಉದಯದ ಲಕ್ಷಣ ನಿಜಕ್ಕೂ ಸೋಜಿಗ. ಸಸ್ಯಗಳಿಗೆ ತಮಗೆ ಬೇಕಾದ ಪೋಷಕಾಂಶ ಮಣ್ಣಿನ ಮೂಲದಲ್ಲಿ ಸಿಗದೇ ಇದ್ದಾಗ ತನ್ನ ಆಹಾರ ಪದ್ಧತಿಯನ್ನೇ ಬದಲಾಯಿಸಿತ್ತು. ಇದು ವರ್ಷಗಳ ಪ್ರಕ್ರಿಯೆಯಲ್ಲ. ಬದಲಾಗಿ ಸಾವಿರಾರು ವರ್ಷಗಳ ಕಾಲ ನಡೆದ ಬೆಳವಣಿಯಾಗಿದೆ. ಈಗ ಜಗತ್ತಿನಲ್ಲಿ ಲಭ್ಯವಿರುವ ಪ್ರಮುಖ ಮಾಂಸಹಾರಿ ಸಸ್ಯಗಳೆಂದರೆ ಡ್ರಸೆರಾ (Drosera) , ವೇನಸ್ ಫ್ಲೈ ಟ್ರಾಪ್ (venus flytrap), ನೆಪೆಂಥೀಸ್ (nepenthes), ಹೀಗೆ ವಿವಿಧ ಗಿಡಗಳು ಮಾಂಸಹಾರಿ ಸಸ್ಯಗಳಾಗಿದೆ.
ಪಶ್ಚಿಮ ಹಿಮಾಲಯ ಪ್ರದೇಶದಲ್ಲಿ ಮತ್ತೊಂದು ಮಾಂಸಾಹಾರಿ ಸಸ್ಯ ಪತ್ತೆ..!
ಪಶ್ಚಿಮ ಹಿಮಾಲಯ ಪ್ರದೇಶದಲ್ಲಿ ಮೊದಲ ಬಾರಿಗೆ ಯುಟ್ರಿಕ್ಯುಲೇರಿಯಾ ಫರ್ಸೆಲ್ಲಾಟಾ ಎಂಬ ಅಪರೂಪದ ಮಾಂಸಾಹಾರಿ ಸಸ್ಯ ಪ್ರಭೇದ ಕಂಡುಬಂದಿದೆ. ಉತ್ತರಾಖಂಡ ಅರಣ್ಯ ಇಲಾಖೆಯ ಸಂಶೋಧನಾ ತಂಡವು ಚಮೋಲಿ ಜಿಲ್ಲೆಯಲ್ಲಿರುವ ಸುಂದರವಾದ ಮಂಡಲ ಕಣಿವೆಯಲ್ಲಿ ಅಪರೂಪದ ಪ್ರಭೇದಗಳನ್ನು ಪತ್ತೆ ಮಾಡಿದೆ. ಈ ಬಗ್ಗೆ ಪ್ರತಿಷ್ಠಿತ ‘ಜರ್ನಲ್ ಆಫ್ ಜಪಾನೀಸ್ ಬಾಟನಿ’ ನಲ್ಲಿ ಈ ಬಗ್ಗೆ ಲೇಖನ ಪ್ರಕಟವಾಗಿದೆ. ಈ ಬಗ್ಗೆ ಅಧೀಕೃತವಾಗಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಸಂಶೋಧನೆ) ಸಂಜೀವ್ ಚತುರ್ವೇದಿ ತಿಳಿಸಿದ್ದಾರೆ.
ಕೀಟಗಳನ್ನು ಭಕ್ಷಿಸುವ ಸಸ್ಯ..! ಏನಿದರ ವಿಶೇಷತೆ…???
ಉತ್ತರಾಖಂಡದಲ್ಲಿ ಕೀಟನಾಶಕ ಸಸ್ಯಗಳ ಯೋಜನಾ ಅಧ್ಯಯನದ ಭಾಗವಾಗಿ ಈ ಸಂಶೋಧನೆ ನಡೆದಿದೆ. ಈ ಮಾಂಸಾಹಾರಿ ಸಸ್ಯವು ಸಾಮಾನ್ಯವಾಗಿ ಬ್ಲಾಡರ್ ವರ್ಟ್ಸ್ (bladderworts) ಎಂದು ಕರೆಯಲ್ಪಡುವ ಒಂದು ಕುಲಕ್ಕೆ ಸೇರಿದೆ. ಇದು ಬೇಟೆಗಾಗಿ ಅತ್ಯಾಧುನಿಕ ಮತ್ತು ಅಭಿವೃದ್ಧಿ ಹೊಂದಿದ ಸಸ್ಯ ರಚನೆಯನ್ನು ಬಳಸುತ್ತದೆ ಮತ್ತು ಕೀಟಗಳು, ಸೊಳ್ಳೆ ಲಾರ್ವಾಗಳು ಮತ್ತು ಎಳೆಯ ಗೊದಮೊಟ್ಟೆಗಳನ್ನು ಭಕ್ಷಿಸುತ್ತದೆ.
ಕೀಟ ಭಕ್ಷಿಸುವ ಬಗೆ ಹೇಗೆ..?
ಕಾರ್ಯಾಚರಣೆಯು ಬಲೆಯ ಬಾಗಿಲಿನೊಳಗೆ ಬೇಟೆಯನ್ನು ಸೆಳೆಯಲು ನಿರ್ವಾತ ಅಥವಾ ಋಣಾತ್ಮಕ ಒತ್ತಡದ ಪ್ರದೇಶವನ್ನು ರಚಿಸುವ ಮೂಲಕ ಯಾಂತ್ರಿಕ ಪ್ರಕ್ರಿಯೆಯನ್ನು ಆಧರಿಸಿದೆ. ಮಾಂಸಾಹಾರಿ ಸಸ್ಯಗಳು ಹೆಚ್ಚಾಗಿ ತಾಜಾ ನೀರು ಮತ್ತು ಆರ್ದ್ರ ಮಣ್ಣಿನಲ್ಲಿ ಕಂಡುಬರುತ್ತವೆ. ಸಾಮಾನ್ಯ ಸಸ್ಯಗಳ ದ್ಯುತಿಸಂಶ್ಲೇಷಣೆ ವಿಧಾನಕ್ಕೆ ಹೋಲಿಸಿದರೆ, ಬುದ್ಧಿವಂತ ಬಲೆಯ ಕಾರ್ಯವಿಧಾನಗಳ ಮೂಲಕ ಆಹಾರ ಮತ್ತು ಪೋಷಣೆಯನ್ನು ವ್ಯವಸ್ಥೆಗೊಳಿಸುವ ಸಂಪೂರ್ಣ ವಿಭಿನ್ನ ವಿಧಾನವನ್ನು ಅವು ಹೊಂದಿವೆ.
ಸಾಮಾನ್ಯವಾಗಿ ಕಳಪೆ ಪೌಷ್ಟಿಕಾಂಶದ ಮಣ್ಣಿನಲ್ಲಿ ಬೆಳೆಯುವ ಈ ಮಾಂಸಾಹಾರಿ ಸಸ್ಯಗಳು ತಮ್ಮ ಸಂಭಾವ್ಯ ಔಷಧೀಯ ಪ್ರಯೋಜನಗಳಿಂದಾಗಿ ಪ್ರಪಂಚದಾದ್ಯಂತ ವೈಜ್ಞಾನಿಕ ಸಮುದಾಯದಲ್ಲಿ ಹೊಸ ಆಸಕ್ತಿಯನ್ನು ಹುಟ್ಟುಹಾಕಿವೆ. ಈ ಬಗ್ಗೆ ಹೆಚ್ಚಿನ ಅಧ್ಯಯನಗಳೂ ಸಹ ನಡೆಯುತ್ತಿದೆ. ಈಗ ಲಭ್ಯವಾದ ಈ ಮಾಂಸಹಾರಿ ಗಿಡ ಭಾರತೀಯ ಸಸ್ಯ ಲೋಕದಲ್ಲಿ ಹೊಸ ಪರಿಚಯವಾಗಿದೆ.
ಬರಹ: ದಿನೇಶ್ ಸಿ.ಎಚ್ ವಿಟ್ಲ