
ಬೆಂಗಳೂರು: ಬೆಂಗಳೂರೆಂಬ ಮಹಾನಗರದಲ್ಲಿ ಕೊಲೆ, ಸುಲಿಗೆ, ಆತ್ಮಹತ್ಯೆ, ನಾಪತ್ತೆ, ಅತ್ಯಾಚಾರ, ಅಪಘಾತ ಇಂತಹ ಘಟನೆಗಳೆಲ್ಲ ದಿನವೂ ನಡೆಯುತ್ತಿರುತ್ತದೆ. ಈ ಅಪರಾಧ ಜಗತ್ತಿನ ಮಧ್ಯೆಯೇ ಜನರು ತಮಗೂ ಇದಕ್ಕೂ ಸಂಬಂಧವೇ ಇಲ್ಲ ಎನ್ನುವಂತೆ ಆರಾಮಾಗಿ ಬದುಕುತ್ತಿರುತ್ತಾರೆ. ಆದರೆ, ಬೆಂಗಳೂರಿನ 17 ವರ್ಷದ ಅನುಷ್ಕಾ ಎಂಬ ಯುವತಿಯ ನಾಪತ್ತೆ ಪ್ರಕರಣ ಇಡೀ ರಾಜ್ಯವನ್ನೇ ಆತಂಕಕ್ಕೀಡು ಮಾಡಿದೆ. 17 ವರ್ಷದ ಅನುಷ್ಕಾ ಎಂಬ ಯುವತಿ 2 ತಿಂಗಳ ಹಿಂದೆ ಬೆಂಗಳೂರಿನ ಮನೆಯಿಂದ ನಾಪತ್ತೆಯಾಗಿದ್ದಾರೆ. ತಮ್ಮ ಮಗಳ ನಾಪತ್ತೆಯ ಹಿಂದೆ ಮಾಟ-ಮಂತ್ರ (ವಾಮಾಚಾರ)ದ ಕೈವಾಡವಿದೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.

ಶಾಮನಿಸಂ (ಆತ್ಮಗಳೊಂದಿಗೆ ಮಾತನಾಡುವುದು) ಎನ್ನುವುದು ಧಾರ್ಮಿಕ ಆಚರಣೆಯಾಗಿದ್ದು, ಅದರ ಅಭ್ಯಾಸ ಮಾಡುವವರು ಅರೆಪ್ರಜ್ಞಾವಸ್ಥ ಸ್ಥಿತಿಯಲ್ಲಿ ಆತ್ಮಗಳೊಂದಿಗೆ ಮಾತುಕತೆ ನಡೆಸುತ್ತಾರೆ ಎಂಬ ನಂಬಿಕೆಯ ಮೇಲೆ ಆಧಾರಿತವಾಗಿದೆ. ಇದು ಪುರಾತನ ಹೀಲಿಂಗ್ ವಿಧಾನ ಎನ್ನಲಾಗಿದೆ. ಅನುಷ್ಕಾ ನಾಪತ್ತೆಯಾಗಿ ಸುಮಾರು ಎರಡು ತಿಂಗಳಾಗಿದೆ. ಆಕೆ ಅಕ್ಟೋಬರ್ 31ರಂದು ಎರಡು ಜೊತೆ ಬಟ್ಟೆ ಮತ್ತು 2,500 ರೂ. ನಗದು ಸಮೇತ ತನ್ನ ಮನೆಯಿಂದ ಹೊರಟಿದ್ದಳು. ಅಭ್ಯಾಸದ ಬಗ್ಗೆ ಆನ್ಲೈನ್ ಓದುವ ಮೂಲಕ ಅವಳು ಶಾಮನಿಸಂಗೆ ಆಕರ್ಷಿತಳಾಗಿದ್ದಳು ಎಂದು ಆಕೆಯ ಪೋಷಕರು ಹೇಳಿದ್ದಾರೆ.

ಕೆಲವರಿಗೆ, ಮಾಟ-ಮಂತ್ರ (ಶಾಮನಿಸಂ) ಎಂಬುದು ಆತ್ಮಗಳ ಪ್ರಪಂಚದ ಮೂಲಕ ಆಧ್ಯಾತ್ಮಿಕ ಮತ್ತು ದೈಹಿಕ ಸಮಸ್ಯೆಗಳನ್ನು ಗುಣಪಡಿಸುವ ಪ್ರಾಚೀನ ಅಭ್ಯಾಸವಾಗಿದೆ. ಅನುಷ್ಕಾ 12ನೇ ತರಗತಿಯಲ್ಲಿ ಉತ್ತೀರ್ಣರಾದ ನಂತರ ಶಾಮನಿಸಂನತ್ತ ಆಕರ್ಷಿತರಾದರು. ಆಕೆಯ ಪೋಷಕರು ಆಧ್ಯಾತ್ಮಿಕ ಜೀವನ ತರಬೇತುದಾರರಾಗಿದ್ದು, ಸೈಕೆಡೆಲಿಕ್ ಶಿಕ್ಷಣ ತಜ್ಞರಿಂದ ಪ್ರಭಾವಿತಳಾಗಿದ್ದರು. ಆ ಯುವತಿ ಶಾಮನಿಸಂ ಅನ್ನು ಅಭ್ಯಾಸ ಮಾಡುವ ಬಯಕೆಯ ಬಗ್ಗೆ ತನ್ನ ತಂದೆ-ತಾಯಿಯ ಜೊತೆ ಮಾತನಾಡಿದ್ದಳು.
ನಮ್ಮ ಮಗಳಿಗೆ ಮನೆ ತೊರೆಯುವ ನಿರ್ಧಾರ ತೆಗೆದುಕೊಳ್ಳುವಂತೆ ಯಾರೋ ಪ್ರಭಾವ ಮಾಡಿದ್ದಾರೆ ಎಂದು ಆಕೆಯ ತಂದೆ ಅಭಿಷೇಕ್ ಹೇಳಿದ್ದಾರೆ. ಆಕೆ ಅಪ್ರಾಪ್ತಳಾಗಿದ್ದು, ಅವಳು ತನ್ನ ಸ್ವಂತ ನಿರ್ಣಯದ ನಿರ್ಧಾರವನ್ನು ತೆಗೆದುಕೊಳ್ಳುವ ಸ್ಥಿತಿಯಲ್ಲಿಲ್ಲದಿರಬಹುದು. ಅವಳನ್ನು ಯಾರೋ ಪ್ರಭಾವಿಸಿದ್ದಾರೆ ಎಂದು ಅವರು ಅನುಮಾನ ವ್ಯಕ್ತಪಡಿಸಿದ್ದಾರೆ.

ಸೆಪ್ಟೆಂಬರ್ನಲ್ಲಿ ಅನುಷ್ಕಾ ಅವರ ನಡವಳಿಕೆಯಲ್ಲಿ ಕೆಲವು ಬದಲಾವಣೆಗಳನ್ನು ಗಮನಿಸಿದ್ದ ಅವರು ಆಕೆಯಲ್ಲಾದ ಬದಲಾವಣೆಯನ್ನು ನಾವು ಆಕೆಯ ವಯಸ್ಸಿನಿಂದಾದ ಬದಲಾವಣೆ ಇರಬಹುದು ಎಂದುಕೊಂಡಿದ್ದೆವು. ಆಕೆ ಯಾರೊಂದಿಗೂ ಬೆರೆಯುತ್ತಿರಲಿಲ್ಲ, ಒಬ್ಬಳೇ ಇರಲು ಇಷ್ಟಪಡುತ್ತಿದ್ದಳು. ಆಕೆಯನ್ನು ಕೌನ್ಸಿಲಿಂಗ್ಗೂ ಕರೆದುಕೊಂಡು ಹೋಗಿದ್ದೆವು. ಅದಾದ ಬಳಿಕ ಆಕೆ ನಮ್ಮೊಂದಿಗೆ ಮಾತನಾಡುವುದನ್ನೇ ನಿಲ್ಲಿಸಿದ್ದಳು. ಸದಾ ಆನ್ಲೈನ್ನಲ್ಲಿ ಮಾಟ-ಮಂತ್ರದ ಬಗ್ಗೆ ವಿಡಿಯೋ ನೋಡುತ್ತಿದ್ದಳು. ಗೂಗಲ್ನಲ್ಲಿ ಅದೇ ವಿಚಾರವಾಗಿ ಏನೇನೋ ಓದುತ್ತಿದ್ದಳು. ಇದೆಲ್ಲ ಆದ ಬಳಿಕ ನಾವೂ ಆಕೆಯನ್ನು ಆಕೆಯಷ್ಟಕ್ಕೆ ಬಿಟ್ಟಿದ್ದೆವು. ಆದರೆ, ಅಕ್ಟೋಬರ್ 31ರಂದು ಅನುಷ್ಕಾ ನಮ್ಮ ಮನೆಯಿಂದ ಹೋದವಳು ವಾಪಾಸ್ ಬರಲೇ ಇಲ್ಲ. ಹೋಗುವಾಗ ಹಣ ಹಾಗೂ ಬಟ್ಟೆಯನ್ನು ತೆಗೆದುಕೊಂಡು ಹೋಗಿದ್ದಾಳೆ ಎಂದು ಅನುಷ್ಕಾಳ ಪೋಷಕರು ತಿಳಿಸಿದ್ದಾರೆ.

ಈ ಘಟನೆಯ ಬಗ್ಗೆ ಪೊಲೀಸರು ಕೂಡ ತಲೆಕೆಡಿಸಿಕೊಂಡಿದ್ದು, ಪೊಲೀಸರು ಹಲವು ಸ್ಥಳಗಳ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ. ಆಕೆಯ ಚಲನವಲನವನ್ನು ಸಿಸಿಟಿವಿ ಕ್ಯಾಮೆರಾ ಮೂಲಕ ವಿಶ್ಲೇಷಿಸಿದ್ದೇವೆ ಎಂದು ಬೆಂಗಳೂರು ಉತ್ತರದ ಉಪ ಪೊಲೀಸ್ ಆಯುಕ್ತ ವಿನಾಯಕ ಪಾಟೀಲ್ ಹೇಳಿದ್ದಾರೆ. ಸುಮಾರು ಎರಡು ತಿಂಗಳಿನಿಂದ ತಮ್ಮ ಮಗಳ ಸುಳಿವಿಗಾಗಿ ಕಾಯುತ್ತಿದ್ದ ಅನುಷ್ಕಾ ಪೋಷಕರು ಇದೀಗ ಪೊಲೀಸರೊಂದಿಗೆ ಕೆಲಸ ಮಾಡುವುದರ ಜೊತೆಗೆ ಸಾರ್ವಜನಿಕರ ಮೊರೆ ಹೋಗಿದ್ದಾರೆ. ಅವರು ತಮ್ಮ ಮಗಳನ್ನು ಹುಡುಕಲು ಸಹಾಯ ಮಾಡುವಂತೆ ಟ್ವಿಟರ್ನಲ್ಲಿ ಮನವಿ ಮಾಡುವ ಮೂಲಕ ಸಾರ್ವಜನಿಕರಿಂದ ಸಹಾಯವನ್ನು ಕೋರಿದ್ದಾರೆ.










