ಮುಚ್ಚಿರಪದವು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ವಾರ್ಷಿಕೋತ್ಸವ ಡಿ.೩೧ರಂದು ಶಾಲಾ ವಿದ್ಯಾಕಿರಣ ಬಯಲು ರಂಗ ಮಂದಿರದಲ್ಲಿ ಬಹಳ ವಿಜೃಂಭಣೆಯಿಂದ ನಡೆಯಿತು.
ಬೆಳಗ್ಗೆ ಧ್ವಜಾರೋಹಣ ಬಳಿಕ ಮಕ್ಕಳಿಂದ ಸಾಮೂಹಿಕ ವ್ಯಾಯಾಮ, ಬಳಿಕ ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು. ಸಂಜೆ ಮುಚ್ಚಿರಪದವು ಹಾಗೂ ಬೆರಿಪದವು ಅಂಗನವಾಡಿ ಪುಟಾಣಿಗಳಿಂದ ಸಾಂಸ್ಕೃತಿಕ ವೈಭವ ನಡೆಯಿತು.
ಬಳಿಕ ಶಾಲೆಯ ಅಭಿವೃದ್ಧಿಗಾಗಿ ಊರ ಪರವೂರ ಶಾಲಾಭಿಮಾನಿಗಳು ಕೊಡುಗೆಯಾಗಿ ನಿರ್ಮಿಸಿದ ನೂತನ ಶೌಚಾಲಯದ ಉದ್ಘಾಟನಾ ಕಾರ್ಯಕ್ರಮ ನಡೆಯಿತು.
ಹರೀಶ್ ಕುಮಾರ್ ಉಳ್ಳಾಲ ಉದ್ಯಮಿ ಮಂಗಳೂರು ಇವರ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ವರ್ಧಮಾನ ಜೈನ್, ಜ್ಯೋತಿಷರು ಪುರುಷರ ಕಟ್ಟೆ, ಪ್ರಕಾಶ್ ಶೆಟ್ಟಿಮಜಲು ಉದ್ಯಮಿ ವಾಸ್ತುನಿವಾಸ ಡೆವಲಪರ್ಸ್ & ಬಿಲ್ಡರ್ಸ್ ಪ್ರೈ. ಲಿಮಿಟೆಡ್ ಬೆಂಗಳೂರು, ಸಯ್ಯಿದ್ ಹಬೀಬುಲ್ಲ ಪೊಕೋಯ ತಂಗಳ್ ಧರ್ಮಗುರು ಮುಚ್ಚಿರಪದವು ಮುದರಿಸ್, ಶಾಲಾ ಸಂಚಾಲಕಿ ತಾರಾ ಕಿರಣ್, ಪೆರುವಾಯಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ನೆಫೀಸಾ ಪೆರುವಾಯಿ, ಪೆರುವಾಯಿ ಗ್ರಾಮ ಪಂಚಾಯತ್ ಸದಸ್ಯೆ ರಶ್ಮಿ ಪೆರುವಾಯಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಶಾಲಾ ವಾರ್ಷಿಕೋತ್ಸವದ ಪ್ರಯುಕ್ತ ಏರ್ಪಡಿಸಲಾದ ಆಟೋಟ ಸ್ಪರ್ಧೆಗಳ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಿತು. ಶಾಲಾ ಮುಖೋಪಾಧ್ಯಾಯರಾದ ನಾಗೇಶ್ ಮಾಸ್ಟರ್ ಸ್ವಾಗತಿಸಿ ಪ್ರಾಸ್ತಾವಿಕ ವರದಿ ಮಂಡಿಸಿದರು. ಶಾಲಾ ಸಹಶಿಕ್ಷಕಿ ಸೌಮ್ಯ ವಂದಿಸಿ ಅಶ್ವಿನಿ ಪೆರುವಾಯಿ ಕಾರ್ಯಕ್ರಮ ನಿರೂಪಿಸಿದರು. ಶಾಲಾ ವಿದ್ಯಾರ್ಥಿ ಶ್ರಾವ್ಯ, ನಿಶ್ಮಿತಾ ಪ್ರಾರ್ಥಿಸಿದರು.
ಬಳಿಕ ಶಾಲಾ ವಿದ್ಯಾರ್ಥಿಗಳಿಂದ, ಹಳೆ ವಿದ್ಯಾರ್ಥಿಗಳಿಂದ ಹಾಗೂ ಊರ ಪ್ರತಿಭೆಗಳಿಂದ ಸಾಂಸ್ಕೃತಿಕ ವೈಭವ ನಡೆಯಿತು. ಶಾಲಾ ಹಳೆವಿದ್ಯಾರ್ಥಿ ಅಶ್ರಫ್ ಮುಚ್ಚಿರಪದವು ಇವರ ನಿರೂಪಣೆಯಲ್ಲಿ ಮೂಡಿಬಂದ ಸಾಂಸ್ಕೃತಿಕ ಕಾರ್ಯಕ್ರಮ ಹಲವು ವೈಭವಗಳ ಆಕರ್ಷಣೆಯಾಗಿತ್ತು. ಮಧ್ಯರಾತ್ರಿ ೧೨ ಗಂಟೆಗೆ ದೀಪ ಬೆಳಗಿಸಿ ಸಿಹಿತಿಂಡಿ ಹಂಚುವ ಮೂಲಕ ೨೦೨೩ರ ವರ್ಷವನ್ನು ಸ್ವಾಗತಿಸಲಾಯಿತು.
ಬಂಗಾರ್ ಕಲಾವಿದೆರ್ ಪುರುಷರಕಟ್ಟೆ ಪುತ್ತೂರು ಅಭಿನಯಿಸುವ ಬಲೆ ತೆಲಿಪಾಲೆ ಖ್ಯಾತಿಯ ಕುಸಾಲ್ದ ಮುತ್ತು ಅರುಣ್ಚಂದ್ರ ಬಿ ಸಿ ರೋಡ್ ರಚಿಸಿ ನಿರ್ದೇಶಿಸಿರುವ ಖ್ಯಾತ ರಂಗಭೂಮಿ ಕಲಾವಿದ ರಮಾ ಬಿ.ಸಿ ರೋಡ್ ಹಾಗೂ ಎದೆತುಂಬಿ ಹಾಡುವೆನು ಖ್ಯಾತಿಯ ಗಾಯಕ ಸಂದೇಶ್ ನೀರ್ಮಾರ್ಗ ಇವರ ಸಂಪೂರ್ಣ ಸಹಕಾರದಲ್ಲಿ ಮೂಡಿಬಂದ “ನಾಡ್ಂಡಲ ತಿಕ್ಕಂದ್” ಎಂಬ ತುಳು ಸಾಮಾಜಿಕ ಹಾಸ್ಯಮಯ ನಾಟಕ ಪ್ರದರ್ಶನಗೊಂಡಿತು.ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿಗಳು, ಪೋಷಕರು, ಹಳೆ ವಿದ್ಯಾರ್ಥಿಗಳು, ಶಾಲಾಭಿಮಾನಿಗಳು ಸೇರಿದಂತೆ ನೂರಾರು ಜನರು ಭಾಗವಹಿಸಿದ್ದರು.