ಮೂಡಬಿದಿರೆ: ನವೆಂಬರ್ ತಿಂಗಳ 4ನೇ ಆದಿತ್ಯವಾರವನ್ನು ಎನ್ ಸಿ ಸಿ ದಿನವನ್ನಾಗಿ ಪ್ರತಿವರ್ಷವೂ ಆಚರಿಸಲಾಗುತ್ತಿದ್ದು, 73 ನೇ ವರ್ಷದ ಎನ್ ಸಿ ಸಿ ದಿನಾಚರಣೆಯನ್ನು ಈ ವರ್ಷ ನ.28ರಂದು ದೇಶದಲ್ಲೆಲ್ಲೆಡೆ ಆಚರಿಸಲಾಗುತ್ತಿದೆ. ಆ ಪ್ರಯುಕ್ತ ಶ್ರೀ ಮಹಾವೀರ ಕಾಲೇಜಿನ ಎನ್ ಸಿ ಸಿ ಘಟಕದಿಂದ ಎನ್ ಸಿ ಸಿ ದಿನಾಚರಣೆಯನ್ನು ವೇಣೂರಿನ ಕ್ರಿಸ್ತರಾಜ ನವಚೇತನ ವಿಶೇಷ ಮಕ್ಕಳ ಶಾಲೆಯಲ್ಲಿ ಆಚರಿಸಲಾಯಿತು.
ಕಾಲೇಜಿನ ಪ್ರಾಂಶುಪಾಲರಾದ ಡಾ ರಾಧಾಕೃಷ್ಣ ಶೆಟ್ಟಿ ಇವರ ಮಾರ್ಗದರ್ಶನದಲ್ಲಿ ನಡೆದ ಈ ಕಾರ್ಯಕ್ರಮವನ್ನು ಕ್ರಿಸ್ತರಾಜ ನವಚೇತನ ವಿಶೇಷ ಮಕ್ಕಳ ಶಾಲೆಗೆ ದಿನಬಳಕೆಯ ವಸ್ತುಗಳನ್ನು ನೀಡುವ ಮುಖಾಂತರ ಹಾಗೂ ಶಾಲೆಯಲ್ಲಿ ಎನ್ ಸಿ ಸಿ ಕೆಡೆಟ್ ಗಳು ಸಾಂಸ್ಕೃತಿಕ ಕಾರ್ಯಕ್ರಮವನ್ನು ನೀಡುವ ಮೂಲಕ ಎನ್ ಸಿ ಸಿ ದಿನಾಚರಣೆಯನ್ನು ವಿಶೇಷ ರೀತಿಯಲ್ಲಿ ಆಚರಿಸಲಾಯಿತು.
ಕ್ರಿಸ್ತರಾಜ ಶಾಲೆಯ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಶಲೆಟ್ ಸ್ವಾಗತಿಸಿ ಶಾಲೆಯ ಶಿಕ್ಷಕಿ ಶಾಂತ ಮಾರ್ಟಿಸ್ ವಂದಿಸಿದರು. ಕೆಡೆಟ್ ಪ್ರಣಮ್ಯ ಜೈನ್ ಕಾರ್ಯಕ್ರಮ ನಿರೂಪಿಸಿದರು. ಕಾಲೇಜಿನ ಎನ್ ಸಿ ಸಿ ಘಟಕದ ಅಧಿಕಾರಿ ಶಿವಪ್ರಸಾದ್ ಉಪಸ್ಥಿತರಿದ್ದರು.