ಮೂಡುಬಿದಿರೆ: ಪಡು ಮಾರ್ನಾಡು ಗ್ರಾಮ ಪಂಚಾಯತ್ ವ್ಯಾಪ್ತಿಯ ತಂದ್ರಕೆರೆ ಗಂಪದದ್ದ ಎಂಬಲ್ಲಿ ಅಕ್ರಮವಾಗಿ ಗಣಿಗಾರಿಕೆ ನಡೆಯುತ್ತಿತ್ತು ಎನ್ನಲಾದ ಗ್ರಾನೈಟ್ ಕಲ್ಲಿನ ಕೋರೆಗೆ ತಹಶೀಲ್ದಾರ್ ನೇತೃತ್ವದಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ದಾಳಿಯ ವೇಳೆ ಗ್ರಾನೈಟ್ ಕಲ್ಲು ಲೋಡ್ ಹೊಂದಿದ್ದ ಒಂದು ಲಾರಿ, ಒಂದು ಹಿಟಾಚಿ ಮತ್ತು ಗ್ರಾನೈಟ್ ಕಟ್ಟಿಂಗ್ ಬ್ಲಾಸ್ಟಿಂಗ್ ಯಂತ್ರವೊಂದನ್ನು ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ.
ಸರಕಾರಿ ಜಾಗವೊಂದರಲ್ಲಿ ಹಾಸನ ಮೂಲದ ವ್ಯಕ್ತಿಯೋರ್ವರು ಕಳೆದ ಕೆಲವು ಸಮಯಗಳಿಂದ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದರು. ಸಾರ್ವಜನಿಕರ ದೂರಿನ ಆಧಾರದಲ್ಲಿ ರವಿವಾರ ರಾತ್ರಿ 10 ಗಂಟೆಯ ವೇಳೆಗೆ ತಹಶೀಲ್ದಾರ್ ನೇತೃತ್ವದಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ದಿಢೀರ್ ದಾಳಿ ನಡೆಸಿದ್ದಾರೆ. ಈ ವೇಳೆ ಮುಗೇರಕ್ಲ ರಸ್ತೆಯಲ್ಲಿ ಎರಡು ಬೃಹತ್ ಗ್ರಾನೈಟ್ ಕಲ್ಲುಗಳನ್ನು ಹೇರಿದ್ದ ಲಾರಿ ಪತ್ತೆಯಾಗಿದ್ದು, ಅವುಗಳನ್ನು ತಹಶೀಲ್ದಾರ್ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.