ಬೆಂಗಳೂರು: ಯುವನಟ ಪುನೀತ್ ರಾಜ್ಕುಮಾರ್ ಹೃದಯಾಘಾತದಿಂದ ನಿಧನ ಹೊಂದಿದ ಹಿನ್ನೆಲೆಯಲ್ಲಿ ಯುವ ಜನರಲ್ಲಿ ತಮ್ಮ ಆರೋಗ್ಯದ ಬಗ್ಗೆ ಆತಂಕ ಹೆಚ್ಚಾಗಿದ್ದು ಇದಕ್ಕೆ ನಿದರ್ಶನವೆಂಬಂತೆ ರಾಜ್ಯಾದ್ಯಂತ ಅನೇಕ ಆಸ್ಪತ್ರೆಗಳಲ್ಲಿ ಹೃದಯ ತಪಾಸಣೆ ಮಾಡಿಸಲು ಸಾವಿರಾರು ಜನರು ಮುಗಿಬಿದ್ದಿದ್ದಾರೆ.
ಹೃದಯ ಪರೀಕ್ಷೆಗೆ ಮುಂದಾಗಿರುವ ಜನಸಮೂಹದಿಂದಾಗಿ, ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿ ಮೇಲೆ ಒತ್ತಡ ಹೆಚ್ಚಾಗಿದೆ. ಕಳೆದ ದಿನಗಳಿಗೆ ಹೋಲಿಸಿದರೆ ಜನರ ಆಸ್ಪತ್ರೆ ಭೇಟಿಯಲ್ಲಿ ಹಲವು ಪಟ್ಟು ಹೆಚ್ಚಳವಾಗಿದೆ. 60 ಮಂದಿಯನ್ನು ನೋಡುತ್ತಿದ್ದ ಜಾಗದಲ್ಲಿ 800 ಮಂದಿಯ ತಪಾಸಣೆ ಮಾಡಬೇಕಾಗಿ ಬಂದಿದೆ ಎಂದು ಅಸ್ಪತ್ರ್ಯ ಮೂಲಗಳಿಂದ ತಿಳಿದು ಬಂದಿದೆ.
ಪುನೀತ್ ನಿಧನದ ನಂತರ ಜಯದೇವ ಆಸ್ಪತ್ರೆಗೆ ಚಿಕಿತ್ಸೆಗೆ ಬರುತ್ತಿರುವ ಜನರ ಸಂಖ್ಯೆ ಹೆಚ್ಚಾಗಿದೆ. ಹೃದಯ ತಪಾಸಣೆ ನಡೆಸುತ್ತಿರುವವರ ಸಂಖ್ಯೆಯಲ್ಲಿ ಭಾರೀ ಏರಿಕೆ ಕಂಡು ಬಂದಿದೆ. ಜಯದೇವ ಆಸ್ಪತ್ರೆಯ ಓಪಿಡಿ ಚಿಕಿತ್ಸೆಗೆ ಬರುವ ರೋಗಿಗಳ ಸಂಖ್ಯೆ ಧೀಡಿರ್ ಏರಿಕೆಯಾಗಿದೆ. ನಿನ್ನೆ ಮಧ್ಯಾಹ್ನ 1 ಗಂಟೆ 1,400 ಮಂದಿ OPD ಚಿಕಿತ್ಸೆಗೆ ಬಂದಿದ್ದಾರೆ. ಜಿಮ್ ಮಾಡುವವರೇ ಹೆಚ್ಚಿನ ಸಂಖ್ಯೆಯಲ್ಲಿ ಚಿಕಿತ್ಸೆಗೆ ಬರುತ್ತಿದ್ದಾರೆ ಎಂದು ಜಯದೇವ ಆಸ್ಪತ್ರೆಯ ನಿರ್ದೇಶಕ ಡಾ.ಮಂಜುನಾಥ್ ತಿಳಿಸಿದರು.
ಸದ್ಯ ಬರುತ್ತಿರುವ ಶೇಕಡ 90 ರಷ್ಟು ಜನರಲ್ಲಿ ಯಾವುದೇ ಸಮಸ್ಯೆ ಇಲ್ಲ. ಭಯಪಟ್ಟು ಎಲ್ಲರೂ ಪರೀಕ್ಷೆ ಮಾಡಿಸಿಕೊಳ್ಳುವ ಅವಶ್ಯಕತೆ ಇಲ್ಲ. ನಿಯಮಿತ ಮತ್ತು ಸೀಮಿತ ವ್ಯಾಯಾಮ, ಉತ್ತಮ ಆಹಾರ ಕ್ರಮ ರೂಢಿಸಿಕೊಳ್ಳಿ ಎಂದು ಮೈಸೂರಿನ ಜಯದೇವ ಹೃದ್ರೋಗ ಆಸ್ಪತ್ರೆ ಮುಖ್ಯಸ್ಥ ಡಾ. ಸದಾನಂದ ಸಲಹೆ ನೀಡಿದ್ದಾರೆ.