6ನೇ ವೇತನ ಆಯೋಗದಂತೆ ಸಂಬಳ ನೀಡಬೇಕು ಹಾಗೂ ತಮ್ಮನ್ನು ಸರ್ಕಾರಿ ನೌಕರರೆಂದು ಪರಿಣಿಸಬೇಕೆಂಬ ಬೇಡಿಕೆ ಮುಂದಿಟ್ಟು ಸಾರಿಗೆ ನೌಕರರು ಇಂದು ಮುಷ್ಕರ ನಡೆಸುತ್ತಿದ್ದಾರೆ. ಈ ಹಿನ್ನೆಲೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಯಾಣಿಕರು ಬಸ್ಗಳಿಲ್ಲದೆ ಪರದಾಡುತ್ತಿದ್ದಾರೆ.
ಗದಗ್ನಲ್ಲಿ ಪುಟ್ಟರಾಜ ಗವಾಯಿಗಳ ನಿಲ್ದಾಣ ಬಿಕೋ ಎನ್ನುತ್ತಿದೆ. ಕೆಎಸ್.ಆರ್.ಟಿಸಿ ನೌಕರರು ಬಂದ್ಗೆ ಬೆಂಬಲ ವ್ಯಕ್ತಪಡಿಸಿದ್ದು ಬಸ್ಗಳನ್ನ ರಸ್ತೆಗಿಳಿಸಿಲ್ಲ. ಹೀಗಾಗಿ ಪ್ರಯಾಣಿಕರು ಖಾಸಾಗಿ ಬಸ್ ಮತ್ತು ಆಟೋಗಳ ಮೊರೆ ಹೋಗುತ್ತಿದ್ದಾರೆ.
ಚಿಕ್ಕಬಳ್ಳಾಪುರದಲ್ಲೂ ಸಾರಿಗೆ ನೌಕರರು ಕರ್ತವ್ಯಕ್ಕೆ ಗೈರುಹಾಜರಾಗಿದ್ದಾರೆ. ಜಿಲ್ಲೆಯಾದ್ಯಾಂತ KSRTC ಬಸ್ ಸಂಚಾರ ಸ್ಥಬ್ದವಾಗಿದ್ದು, KSRTC ಬಸ್ ನಿಲ್ದಾಣಗಳು ಖಾಲಿ ಹೊಡೆಯುತ್ತಿವೆ. KSRTC ಬಸ್ ಘಟಕಗಳ ಸುತ್ತ 500 ಮೀಟರ್ ನಿಷೇಧಾಜ್ಞೆ ಜಾರಿ ಮಾಡಿ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಆರ್ ಲತಾ ಆದೇಶ ಹೊರಡಿಸಿದ್ದಾರೆ. KSRTC ಬಸ್ ನಿಲ್ದಾಣಗಳ ಬಳಿ ಪೊಲೀಸರ ನಿಯೋಜನೆ ಮಾಡಲಾಗಿದೆ.
ಗಡಿ ಜಿಲ್ಲೆ ಬೀದರ್ನಲ್ಲಿ ಸಾರಿಗೆ ಮುಷ್ಕರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಭಾಗಶಃ ಬಸ್ಗಳ ಓಡಾಟ ನಡೆಯುತ್ತಿದೆ. ಶೇಕಡಾ 60 ರಷ್ಟು ಬಸ್ ಸಂಚಾರ ಬಂದ್ ಆಗಿದ್ದು, 40 ರಷ್ಟು ಬಸ್ ಸೇವೆ ಲಭ್ಯವಿದೆ. ಪಕ್ಕದ ತೆಲಂಗಾಣ – ಮಹರಾಷ್ಟ್ರದಿಂದ ಹೆಚ್ಚಿನ ಸಂಖ್ಯೆಯಲ್ಲಿ ಬಸ್ಗಳು ಓಡಾಟ ನಡೆಸುತ್ತಿವೆ.
ಖಾಸಗಿ ಬಸ್ ಗಳು ಕೇಂದ್ರ ಬಸ್ ನಿಲ್ದಾಣ ಪ್ರವೇಶ ಮಾಡಿದ್ದು, ಪ್ರಯಾಣಿಕರು ನಿಟ್ಟುಸಿರುಬಿಟ್ಟಿದ್ದಾರೆ. ಆದರೆ ಸರ್ಕಾರಿ ಬಸ್ ದರಕ್ಕಿಂತ ಖಾಸಗಿ ಬಸ್ಗಳು 20-50 ರೂ. ಹೆಚ್ಚು ಹಣ ಪಡೆಯುತ್ತಿವೆ ಎನ್ನಲಾಗಿದೆ. ಕಲಬುರಗಿ- ಬೀದರ್ಗೆ ಸಾರಿಗೆ ಬಸ್ ದರ 120 ರೂ., ಆದ್ರೆ ಖಾಸಗಿ ವಾಹನದವರು 150 ರೂ. ಪಡೆಯುತ್ತಿದ್ದಾರೆ. ಆದ್ರೂ ಹೆಚ್ಚು ಹಣ ಕೊಟ್ಟು ಪ್ರಯಾಣಿಸುವ ಅನಿವಾರ್ಯತೆ ಪ್ರಯಾಣಿಕರಿಗೆ ಬಂದೊದಗಿದೆ.
ದಾವಣೆಗೆರೆಯಲ್ಲಿ 262 ಸಾಮಾನ್ಯ ಸಾರಿಗೆ, 102 ಎಕ್ಸ್ಪ್ರೆಸ್ ಹಾಗು 40 ನಗರ ಸಾರಿಗೆ ಬಸ್ ಸಂಚಾರ ಸ್ಥಗಿತವಾಗಿದೆ. ಈ ಹಿನ್ನೆಲೆ ಬಸ್ ನಿಲ್ದಾಣದತ್ತ ಪ್ರಯಾಣಿಕರು ಬಾರುತ್ತಿಲ್ಲ. ಧಾರವಾಡದಲ್ಲಿ NWKSRTC ಹಾಗೂ BRTS ಬಸ್ಗಳ ಸಂಚಾರ ಸಂಪೂರ್ಣ ಸ್ಥಗಿತವಾಗಿದೆ.
ಚಿತ್ರದುರ್ಗ ಬಸ್ ನಿಲ್ದಾಣದಿಂದ ವೋಲ್ವೋ ಬಸ್, ಪೋಲಿಸ್ ಎಸ್ಕಾರ್ಟ್ ಭದ್ರತೆಯಲ್ಲಿ ಸಂಚಾರ ಆರಂಭಿಸಿದೆ. ಮೈಸೂರು, ಚಿಕ್ಕಮಗಳೂರು, ದಕ್ಷಿಣ ಕನ್ನಡ ಹಾಗೂ ಉತ್ತರಕನ್ನಡ ಜಿಲ್ಲೆಯಲ್ಲೂ ಕೂಡ ಸಾರಿಗೆ ಮುಷ್ಕರದ ಎಫೆಕ್ಟ್ ತಟ್ಟಿದೆ.