ನವದೆಹಲಿ: ತನ್ನೊಂದಿಗೆ ಲಿವ್ ಇನ್ ರಿಲೇಶನ್ಶಿಪ್ನಲ್ಲಿದ್ದ ಗೆಳತಿಯ ಹತ್ಯೆ ನಡೆಸಿ, ದೇಹವನ್ನು 35 ತುಂಡುಗಳನ್ನಾಗಿ ಮಾಡಿ, ಬೇರೆ ಬೇರೆ ಪ್ರದೇಶಗಳಲ್ಲಿ ದೇಹದ ಭಾಗಗಳನ್ನು ಹೂತು ಹಾಕಿರುವ ಭಯಾನಕ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ. ಈ ಅಮಾನುಷ ಕೃತ್ಯ ಎಸಗಿದ 5 ತಿಂಗಳ ಬಳಿಕ ಕೊಲೆಗಡುಕನನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಯನ್ನು ಅಫ್ತಾಬ್ ಅಮೀನ್ ಪೂನವಾಲಾ ಎಂದು ಗುರುತಿಸಲಾಗಿದೆ. ಆತ ಹತ್ಯೆಗೀಡಾದ ಯುವತಿ ಶ್ರದ್ಧಾ (26) ಜೊತೆ ಲಿವ್ ಇನ್ ರಿಲೇಶನ್ನಲ್ಲಿ ಇದ್ದ. ಯುವತಿ ತನಗೆ ಯಾವಾಗಲೂ ಮದುವೆಯಾಗುವಂತೆ ಪೀಡಿಸುತ್ತಿದ್ದಳು. ಈ ವಿಚಾರವಾಗಿ ಆಗಾಗ ಜಗಳವಾಗುತ್ತಿದ್ದರಿಂದ ಮೇ 18 ರಂದು ಆತ ಯುವತಿಯ ಕತ್ತು ಹಿಸುಕಿ ಕೊಲೆ ಮಾಡಿರುವುದಾಗಿ ಆರೋಪಿ ಬಹಿರಂಗಪಡಿಸಿದ್ದಾನೆ.
ಕೊಲೆ ಬಳಿಕ ಆರೋಪಿ ಯುವತಿಯ ದೇಹವನ್ನು ಹರಿತವಾದ ಆಯುಧಗಳಿಂದ 35 ತುಂಡುಗಳನ್ನಾಗಿ ಕತ್ತರಿಸಿದ್ದಾನೆ. ಅವುಗಳನ್ನು ದೆಹಲಿಯ ಮೆಹ್ರೌಲಿಅರಣ್ಯದ ವಿವಿಧ ಪ್ರದೇಶಗಳಲ್ಲಿ ಹೂತುಹಾಕಿದ್ದಾನೆ. ದೇಹದ ಭಾಗಗಳನ್ನು ಎಸೆಯಲು ಆತ ಪ್ರತಿ ದಿನ ಮುಂಜಾನೆ 2 ಗಂಟೆ ವೇಳೆ ಮನೆಯಿಂದ ಹೊರ ಹೋಗುತ್ತಿದ್ದ. ಆತ ಎಲ್ಲಾ ತುಂಡುಗಳನ್ನು ಎಸೆಯಲು 18 ದಿನಗಳನ್ನು ತೆಗೆದುಕೊಂಡಿದ್ದಾನೆ. ಮಾತ್ರವಲ್ಲದೇ ದೇಹದ ತುಂಡುಗಳನ್ನು ಇಡಲು ಆತ ಫ್ರಿಡ್ಜ್ ಅನ್ನು ಖರೀದಿಸಿದ್ದ ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ.
ವರದಿಗಳ ಪ್ರಕಾರ ಶ್ರದ್ಧಾ ಮುಂಬೈನ ಮಲ್ಟಿನ್ಯಾಶನಲ್ ಕಂಪನಿಯ ಕಾಲ್ ಸೆಂಟರ್ನಲ್ಲಿ ಕೆಲಸ ಮಾಡುತ್ತಿದ್ದಳು. ಅಲ್ಲಿ ಆಕೆ ಪೂನವಾಲಾನನ್ನು ಭೇಟಿಯಾಗಿ, ಇಬ್ಬರೂ ಡೇಟಿಂಗ್ ಮಾಡಲು ಪ್ರಾರಂಭಿಸಿದ್ದರು. ಅವರಿಬ್ಬರ ಸಂಬಂಧವನ್ನು ಕುಟುಂಬ ಒಪ್ಪದ ಕಾರಣ ಇಬ್ಬರೂ ದೆಹಲಿಗೆ ಓಡಿ ಹೋಗಿ, ಮೆಹ್ರೌಲಿಯ ಫ್ಲಾಟ್ನಲ್ಲಿ ವಾಸಿಸಲು ಪ್ರಾರಂಭಿಸಿದ್ದರು.
ಕೆಲ ದಿನಗಳ ಬಳಿಕ ಶ್ರದ್ಧಾ ತನ್ನ ಕುಟುಂಬದವರ ಫೋನ್ ಕರೆಗಳಿಗೆ ಪ್ರತಿಕ್ರಿಯಿಸುವುದನ್ನು ನಿಲ್ಲಿಸಿದ್ದರಿಂದ ಆಕೆಯ ತಂದೆ ವಿಕಾಸ್ ಮದನ್ ನವೆಂಬರ್ 8 ರಂದು ಆಕೆಯನ್ನು ನೋಡಲು ದೆಹಲಿಗೆ ತೆರಳಿದ್ದರು. ಅವರಿದ್ದ ಫ್ಲಾಟ್ ಲಾಕ್ ಆಗಿದ್ದರಿಂದ ಬಳಿಕ ಅವರು ಪೊಲೀಸರನ್ನು ಸಂಪರ್ಕಿಸಿ, ಅಪಹರಣದ ಆರೋಪದ ಮೇಲೆ ದೂರು ದಾಖಲಿಸಿದರು.
ಯುವತಿಯ ತಂದೆಯ ದೂರಿನ ಆಧಾರದ ಮೇಲೆ ಪೊಲೀಸರು ಪೂನಾವಾಲಾನನ್ನು ಶನಿವಾರ ಬಂಧಿಸಿದ್ದಾರೆ. ಬಳಿಕ ನಡೆದ ಘಟನೆಯನ್ನೆಲ್ಲಾ ಆತ ಬಾಯಿಬಿಟ್ಟಿದ್ದಾನೆ. ಇದೀಗ ಪೊಲೀಸರು ಆತನ ವಿರುದ್ಧ ಕೊಲೆ ಪ್ರಕರಣವನ್ನು ದಾಖಲಿಸಿಕೊಂಡು, ಶ್ರದ್ಧಾ ಶವಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ.