ಮಂಗಳೂರು: ಕರ್ತವ್ಯದಲ್ಲಿದ್ದ ಪೊಲೀಸ್ ಹೆಡ್ ಕಾನ್ಸ್ ಟೇಬಲ್ ಒಬ್ಬರಿಗೆ ದುಷ್ಕರ್ಮಿಯೊಬ್ಬ ತಲವಾರಿನಲ್ಲಿ ಕಡಿದು ಪರಾರಿಯಾದ ಘಟನೆ ಮಂಗಳೂರು ನಗರದಲ್ಲಿ ನಡೆದಿದೆ.
ಮಂಗಳೂರಿನ ರಥಬೀದಿ ಬಳಿಯ ನ್ಯೂ ಚಿತ್ರಾ ಟಾಕೀಸ್ ಮುಂಭಾಗದಲ್ಲಿ ಸುಮಾರು 11 ಗಂಟೆಗೆ ಹೊತ್ತಿಗೆ ಈ ಘಟನೆ ನಡೆದಿದೆ. ಬಂದರು ಠಾಣೆಯ ಹೆಡ್ ಕಾನ್ಸ್ ಟೇಬಲ್ ಗಣೇಶ್ ಕಾಮತ್ ಮತ್ತು ಇಬ್ಬರು ಸಿಬ್ಬಂದಿ ತಪಾಸಣೆ ನಿರತರಾಗಿದ್ದರು. ಈ ವೇಳೆ ಬೈಕಿನಲ್ಲಿ ಬಂದ ಅಪರಿಚಿತ ದುಷ್ಕರ್ಮಿಯೊಬ್ಬ ಮುಖ್ಯ ಪೇದೆ ಗಣೇಶ್ ಕಾಮತ್ ಮೇಲೆ ಹಲ್ಲೆ ಮಾಡಿದ್ದಾನೆ. ಗಣೇಶ್ ಕಾಮತ್ ಕೈಗೆ ತಲವಾರು ಏಟು ಬಿದ್ದಿದ್ದು ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾಮತ್ ಅಪಾಯದಿಂದ ಪಾರಾಗಿದ್ದಾರೆ.
ಬಂದರು ಠಾಣೆ ವ್ಯಾಪ್ತಿಯಲ್ಲೇ ಘಟನೆ ನಡೆದಿದ್ದು ಯಾವುದೋ ದ್ವೇಷದಿಂದ ಹಲ್ಲೆ ನಡೆಸಿರುವ ಸಾಧ್ಯತೆಯಿದೆ. ಆರೋಪಿಯನ್ನು ಪೊಲೀಸರು ಹುಡುಕಾಡುತ್ತಿದ್ದಾರೆ. ಆರೋಪಿ ಸ್ಥಳೀಯನೇ ಆಗಿರುವ ಬಗ್ಗೆ ಶಂಕೆಯಿದೆ.
ಮೂರು ವರ್ಷಗಳ ಹಿಂದೆಯೂ ಹಲ್ಲೆ: ಕರ್ತವ್ಯದಲ್ಲಿದ್ದ ಪೊಲೀಸ್ ಮೇಲೆ ಈ ಹಿಂದೆಯೂ ಹಲ್ಲೆ ನಡೆದಿತ್ತು. 2017 ಎಪ್ರಿಲ್ 5ರಂದು ಉರ್ವಾ ಠಾಣೆಯ ಎಎಸ್ಐ ಐತಪ್ಪ ಎಂಬವರ ಮೇಲೆ ಲೇಡಿಹಿಲ್ ಸರ್ಕಲ್ ನಲ್ಲಿ ಹಲ್ಲೆ ನಡೆದಿತ್ತು. ರಾತ್ರಿ ವೇಳೆ ಕರ್ತವ್ಯದಲ್ಲಿದ್ದ ಐತಪ್ಪ ಅವರಿಗೆ ನಸುಕಿನಲ್ಲಿ ದಾಳಿ ನಡೆದಿತ್ತು. ಬೈಕಿನಲ್ಲಿ ಬಂದಿದ್ದ ಇಬ್ಬರು ಕಬ್ಬಿಣದ ರಾಡ್ ನಲ್ಲಿ ಹೊಡೆದು ಹಲ್ಲೆ ನಡೆಸಿದ್ದರು.