ವಿಟ್ಲ: ಸಾರ್ವಜನಿಕರಿಗೆ ವಿತರಿಸಲ್ಪಡುವ ಉಚಿತ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಲಾರಿಯನ್ನು ವಿಟ್ಲ ಪೊಲೀಸರು ತಡೆದು ನಿಲ್ಲಿಸಿದ ಘಟನೆ ಬೋಳಂತೂರು ಗ್ರಾಮದ ಎನ್ ಸಿ ರೋಡ್ ಬಳಿ ನಡೆದಿದೆ.
ಪ್ರಕರಣಕ್ಕೆ ಸಂಬಂಧಿಸಿ ಚಾಲಕನ ವಿರುದ್ಧ ಹಾಗೂ ನ್ಯಾಯಬೆಲೆ ಅಂಗಡಿಗಳ ಮಾಲೀಕರಾದ ಅಬೂಬಕ್ಕರ್ ಬಿ.ಬೋಳಂತೂರು ಮತ್ತು ಹಮೀದ್ ನಾರ್ಶ ಕೊಲ್ನಾಡು ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಾಗಿದ್ದು, ಇವರಿಗೆ ನೀಡಲಾದ ನ್ಯಾಯಬೆಲೆ ಅಂಗಡಿ ಪ್ರಾಧಿಕಾರವನ್ನು ಅಮಾನತ್ತು ಪಡಿಸಲಾಗುವುದು ಎಂದು ತಿಳಿದು ಬಂದಿದೆ. ದಿನಾಂಕ 02.06.2022 ರಂದು ಸರಕು ಹೇರಿಕೊಂಡು ಹೋಗುತ್ತಿದ್ದ ಲಾರಿಯನ್ನು ತಡೆದು ನಿಲ್ಲಿಸಿ ತಪಾಸಣೆ ಮಾಡಿದಾಗ ಸರ್ಕಾರದದಿಂದ ಸಾರ್ವಜನಿಕರಿಗೆ ವಿತರಿಸಲ್ಪಡುವ ಉಚಿತ ಪಡಿತರ ಅಕ್ಕಿಯ 313 ಚೀಲಗಳನ್ನು ಅಕ್ರಮವಾಗಿ ದಾಖಲೆಗಳಿಲ್ಲದೇ ಸಾಗಾಟ ಮಾಡುತ್ತಿರುವುದು ಕಂಡುಬಂದಿದೆ.
ಲಾರಿ ಚಾಲಕ ಚಂದ್ರೇಶ್ ಇವರಲ್ಲಿ ಈ ಬಗ್ಗೆ ವಿಚಾರಿಸಿದಾಗ ವಿಟ್ಲ ಹೋಬಳಿಯ ಬೋಳಂತೂರು ಗ್ರಾಮದ ನ್ಯಾಯಬೆಲೆ ಅಂಗಡಿ ಸಂಖ್ಯೆ 68 – ಅಬೂಬಕ್ಕರ್ ಬಿ.ಬೋಳಂತೂರು ಇಲ್ಲಿಂದ 232 ಚೀಲ ಅಕ್ಕಿ ಹಾಗೂ ಅಂಗಡಿ ಸಂಖ್ಯೆ 105 ಹಮೀದ್ ನಾರ್ಶ, ಕೊಲ್ನಾಡು ಇವರಿಂದ 78 ಚೀಲ ಅಕ್ಕಿಯನ್ನು ಪಡೆದುಕೊಂಡು ಬಂದಿರುವುದಾಗಿ ತಿಳಿಸಿದ್ದು, ಯಾವುದೇ ದಾಖಲೆಗಳು ಇಲ್ಲವೆಂದು ತಿಳಿದುಬಂದಿದೆ. ಅಕ್ರಮವಾಗಿ ಪಡಿತರ ಅಕ್ಕಿಯನ್ನು ಸಾಗಾಟ ಮಾಡುತ್ತಿದ್ದ ಚಾಲಕನ ವಿರುದ್ಧ ಹಾಗೂ ನ್ಯಾಯಬೆಲೆ ಅಂಗಡಿಗಳ ಮಾಲೀಕರಾದ ಅಬೂಬಕ್ಕರ್ ಬಿ.ಬೋಳಂತೂರು ಮತ್ತು ಹಮೀದ್ ನಾರ್ಶ ಕೊಲ್ನಾಡು ವಿರುದ್ಧ ಕ್ರಿಮಿನಲ್ ಮೊಕದ್ದಮೆಯನ್ನು ದಾಖಲಿಸಿ, ಅಕ್ಕಿಯನ್ನು ಹಾಗೂ ಲಾರಿಯನ್ನು ಸರಕಾರದ ಪರ ಜಪ್ತಿ ಮಾಡಲಾಗಿದೆ ಎಂದು ತಿಳಿದು ಬಂದಿದೆ.