ವಿಟ್ಲ: ಗ್ರಾಹಕರಿಗೆ ಪ್ರಾಮಾಣಿಕ ಸೇವೆ ನೀಡಿದಾಗ ಬ್ಯಾಂಕ್ ಗಳು ಯಶಸ್ವಿಯಾಗುತ್ತದೆ. ಸಹಕಾರಿ ತತ್ವ ಬದುಕಿನ ಉಸಿರು ಇದ್ದಂತೆ, ಸಹಕಾರಿಯ ಮೂಲಕ ಆದರ್ಶವಾದ ಸಮಾಜ ನಿರ್ಮಾಣವಾಗುತ್ತದೆ ಎಂದು ಒಡಿಯೂರು ಶ್ರೀಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.
ಅವರು ವಿಟ್ಲ ಹರಿಹರ ಕಾಂಪ್ಲೆಕ್ಸ್ ನಲ್ಲಿ ಆದರ್ಶ ವಿವಿಧೋದ್ದೇಶ ಸಹಕಾರ ಸಂಘದ ವಿಟ್ಲ ಶಾಖೆಯ ಸ್ಥಳಾಂತರ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.
ಉದ್ಘಾಟನೆ ನಡೆಸಿದ ಪುತ್ತೂರು ಶಾಸಕ ಸಂಜೀವ ಮಠಂದೂರು ಮಾತನಾಡಿ ರಾಷ್ಟ್ರೀಕೃತ ಬ್ಯಾಂಕ್ ಗಳಿಗಿಂತ ಉತ್ತಮ ಸೇವೆಯನ್ನು ಸಹಕಾರಿ ಸಂಘಗಳು ನೀಡುತ್ತಿದೆ. ಸಮಾಜಿಕ ಪರಿವರ್ತನಾ ಕೇಂದ್ರಳಾಗುವ ಜತೆಗೆ ವ್ಯಕ್ತಿ ಅವಿಭಾಜ್ಯ ಅಂಗವಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಉಳಿಪ್ಪಾಡಿಗುತ್ತು ಮಾತನಾಡಿ ದಕ್ಷಿಣ ಕನ್ನಡ ಜಿಲ್ಲೆ ಆತೀ ಹೆಚ್ಚು ಬ್ಯಾಂಕ್ ಗಳ ಮೂಲಕ ಆರ್ಥಿಕ ವ್ಯವಸ್ಥೆಯಲ್ಲಿ ದೇಶದಲ್ಲೇ ಹೆಸರುವಾಸಿಯಾಗಿದೆ. ಆದರ್ಶ ವ್ಯಕ್ತಿಗಳು ಗ್ರಾಮದಲ್ಲಿದ್ದಾಗ ದೇಶ ಮುನ್ನಡೆಯಲು ಸಾಧ್ಯ ಎಂದರು.
ವಿಟ್ಲ ಶೋಕ ಮಾತಾ ದೇವಾಲಯದ ಧರ್ಮಗುರುಗಳಾದ ಐವನ್ ಮೈಕಲ್ ರೋಡ್ರಿಗಸ್ ಗಣಕೀಕರಣ ವ್ಯವಸ್ಥೆಯನ್ನು ಉದ್ಘಾಟಿಸಿದರು. ವಿಟ್ಲ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ವಿ. ಎಸ್. ಇಬ್ರಾಹಿಂ, ಕಟ್ಟಡ ಮಾಲಕ ಸುರೇಶ್ ಬನಾರಿ, ಉದ್ಯಮಿ ಸತೀಶ್ ಕುಮಾರ್ ಆಳ್ವ ಇರಾಬಾಳಿಕೆ, ಸಂಘದ ಉಪಾಧ್ಯಕ್ಷ ಎನ್. ಸುಂದರ ರೈ ಮತ್ತಿತರರು ಉಪಸ್ಥಿತರಿದ್ದರು.
ಪ್ರಜ್ಞಾಶ್ರೀ ಪಿ. ಪ್ರಾರ್ಥಿಸಿದರು. ಆದರ್ಶ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಕೆ. ಸೀತಾರಾಮ ರೈ ಸವಣೂರು ಸ್ವಾಗತಿಸಿದರು. ಮಹಾಪ್ರಬಂಧಕ ವಸಂತ್ ಜಾಲಾಡಿ ವಂದಿಸಿದರು. ಪ್ರಾಂಶುಪಾಲ ಸೀತಾರಾಮ ಕೇವಳ ಕಾರ್ಯಕ್ರಮ ನಿರೂಪಿಸಿದರು.