ವಿಟ್ಲ: ಮನೆಯ ಕಾಪಾಟಿನಲ್ಲಿದ್ದ ಲಕ್ಷಾಂತರ ರೂ ಮೌಲ್ಯದ ಚಿನ್ನಾಭರಣ ಕಳವುಗೈದ ಘಟನೆ ವಿಟ್ಲ ಮುಡ್ನೂರು ಗ್ರಾಮದ ದಂಬೆತಾರು ಎಂಬಲ್ಲಿ ನಡೆದಿದೆ.
ವಿಟ್ಲ ಮುಡ್ನೂರು ಗ್ರಾಮದ ದಂಬೆತಾರು ನಿವಾಸಿ ವಿನಯ ಚಂದ್ರನಾಯಕ್ ರವರ ಮನೆಯ ಬೆಡ್ರೂಮಿನ ಕಪಾಟಿನಲ್ಲಿದ್ದ ಚಿನ್ನದ ಬ್ರಾಸ್ ಲೈಟ್-1, ಚಿನ್ನದ ಲಕ್ಷ್ಮಿ ಚೈನ್-01, ಚಿನ್ನದ ಪದಕ ಸಹಿತ ಚೈನು -1, ಚಿನ್ನದ ಲಕ್ಷ್ಮಿ ಪದಕ ಸಹಿತ ಚೈನ್-01, ಚಿನ್ನದ ಉಂಗುರಗಳು -03 (Total- 98Gram) ಚಿನ್ನಾಭರಣಗಳು ಕಳವಾಗಿದ್ದು, ಕಳವಾದ ಚಿನ್ನಾಭರಣಗಳ ಒಟ್ಟು ಮೌಲ್ಯ ರೂ.1,48,000 ಆಗಿದೆ.
ವಿನಯ ಚಂದ್ರನಾಯಕ್ ರವರು ನೀಡಿದ ದೂರಿನನ್ವಯ ದ.ಕ. ಜಿಲ್ಲಾ ಪೊಲೀಸ್ ಅಧೀಕ್ಷಕ ರಿಷಿಕೇಶ್ ಭಗವಾನ್ ಸೋನಾವಣೆ IPS ರವರ ನಿರ್ದೇಶನದಂತೆ ಹಾಗೂ ದ.ಕ. ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರ ಚಂದ್ರ, ಬಂಟ್ವಾಳ ಉಪವಿಭಾಗದ ಉಪಾಧೀಕ್ಷಕ ಪ್ರತಾಪ್ ಸಿಂಗ್ ತೊರಟ್ ರವರ ಮಾರ್ಗದರ್ಶನದಲ್ಲಿ ವಿಟ್ಲ ಪೊಲೀಸ್ ಠಾಣಾ ನಿರೀಕ್ಷಕ ನಾಗರಾಜ್ ಎಚ್. ಈ. ರವರ ಮಾರ್ಗದರ್ಶನದಲ್ಲಿ ತನಿಖೆ ನಡೆಸಿದಾಗ, ವಿನಯ ಚಂದ್ರನಾಯಕ್ ರವರ ಮನೆಯಲ್ಲಿ ಕೂಲಿ ಕೆಲಸಕ್ಕೆ ಇದ್ದ ಮಹಿಳೆ ಹಾಗೂ ಆಕೆಯ ಪತಿ ಕಳವುಗೈದಿರುವುದು ಬೆಳಕಿಗೆ ಬಂದಿದೆ. ಆರೋಪಗಳನ್ನು ಬಂಧಿಸಿ ಕಳವಾಗಿದ್ದ 98 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.
ಪುತ್ತೂರು ತಾಲೂಕಿನ ಸರ್ವೆ ಗ್ರಾಮದ ಬಾವಿಕಟ್ಟೆ ನಿವಾಸಿ ಸುಮತಿ(25) ಹಾಗೂ ಪುತ್ತೂರು ತಾಲೂಕಿನ ಸರ್ವೆ ಗ್ರಾಮದ ಬಾವಿಕಟ್ಟೆ ನಿವಾಸಿ ಪ್ರಮೋದ್(26) ಬಂಧಿತ ಆರೋಪಿಗಳು.
ಕಾರ್ಯಾಚರಣೆಯಲ್ಲಿ ವಿಟ್ಲ ಪೊಲೀಸ್ ಠಾಣಾ ಉಪನಿರೀಕ್ಷಕ ಸಂದೀಪ್ ಕುಮಾರ್ ಶೆಟ್ಟಿ, ಮಂಜುನಾಥ ಟಿ., ಪೊಲೀಸ್ ಹೆಡ್ ಕಾನ್ಸ್ಟೇಬಲ್ ಗಳಾದ ಜಯರಾಮ ಕೆ.ಟಿ., ರಕ್ಷಿತ್, ಕರುಣಾಕರ, ಪೊಲೀಸ್ ಕಾನ್ಸ್ಟೇಬಲ್ ಗಳಾದ ಹೇಮರಾಜ್, ಸತೀಶ್, ಮನೋಜ್ ಕುಮಾರ್, ಮಹಿಳಾ ಪೊಲೀಸ್ ಕಾನ್ಸ್ಟೇಬಲ್ ಸವಿತಾ ರವರು ಭಾಗವಹಿಸಿದ್ದಾರೆ.