ವಿಟ್ಲ: ಪಶ್ಚಿಮ ವಲಯದ ಪೊಲೀಸ್ ಮಹಾ ನಿರೀಕ್ಷಕ (ಐಜಿಪಿ) ಡಾ. ಚಂದ್ರಗುಪ್ತರವರು ವಿಟ್ಲ ಪೊಲೀಸ್ ಠಾಣೆಗೆ ಭೇಟಿ ನೀಡಿದರು. ಸರಕಾರಿ ಗೌರವಗಳೊಂದಿಗೆ ಠಾಣೆಗೆ ಸ್ವಾಗತಿಸಲಾಯಿತು.
ಬಳಿಕ ವಿಟ್ಲ ಪರಿಸರದಲ್ಲಿ ನಡೆಯುತ್ತಿರುವ ಕಾರ್ಯ ಚಟುವಟಿಕೆ ಹಾಗೂ ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ವಿಟ್ಲ ಪೊಲೀಸರು ಈ ಪ್ರದೇಶದಲ್ಲಿ ಯಾವ ರೀತಿಯಾಗಿ ಕಾರ್ಯ ನಿರ್ವಹಿಸುತ್ತಾ ಇದ್ದಾರೆ ಎಂಬ ವಿಚಾರಗಳ ಬಗ್ಗೆ ಸಾರ್ವಜನಿಕರ ಜೊತೆ ಸಂವಾದ ನಡೆಸಿದರು. ಈ ಸಂದರ್ಭದಲ್ಲಿ ವಿಟ್ಲ ಪೊಲೀಸ್ ಠಾಣೆಯ ಕಾರ್ಯವೈಖರಿಯ ಬಗ್ಗೆ ಸಾರ್ವಜನಿಕರು ಮೆಚ್ಚುಗೆಯ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.
ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದು ಚುನಾವಣಾ ನೀತಿ ಸಂಹಿತಾ ನಿಯಮಗಳನ್ನು ಜನರು ಪಾಲಿಸಿ ಪೊಲೀಸ್ ಅಧಿಕಾರಿಗಳೊಂದಿಗೆ ಸಹಕರಿಸಬೇಕು ಹಾಗೂ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಅಧಿಕಾರಿಗಳ ತಂಡ ಸೂಕ್ಷ್ಮವಾಗಿ ತಮ್ಮ ದಕ್ಷ ಸೇವೆಯನ್ನು ಮಾಡಬೇಕೆಂದು ಹೇಳಿದರು.
ಬಳಿಕ ಪತ್ರಿಕಾ/ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಐಜಿಪಿಯವರು ವಿಟ್ಲ ಪರಿಸರದಲ್ಲಿ ಜನರಿಗೆ ಆಗುವ ಸಮಸ್ಯೆಗಳು, ಪೊಲೀಸ್ ಇಲಾಖೆಯಿಂದ ಜನರಿಗೆ ದೊರಕುವ ಸೇವೆಗಳ ಬಗ್ಗೆ ಹಾಗೂ ಎಲ್ಲಾ ವಿಚಾರಗಳನ್ನು ಈಗಾಗಲೇ ಸಾರ್ವಜನಿಕರಲ್ಲಿ ಸಂವಾದ ನಡೆಸಿ ಈ ಬಗ್ಗೆ ಗಮನಹರಿಸಿದ್ದೇನೆ. ಈ ಬಗ್ಗೆ ಎಲ್ಲಾ ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ವಿಟ್ಲ ಪೊಲಿಸ್ ಠಾಣಾ ಅಧಿಕಾರಿಗಳಿಗೆ ತಿಳಿಸಿದ್ದೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಎಸ್.ಪಿ ವಿಕ್ರಂ ಅಮಟೆ, ಡಿವೈಎಸ್ಪಿ ಪ್ರತಾಪ್ ಸಿಂಗ್ ತೋರಾಟ್, ವಿಟ್ಲ ಠಾಣಾಧಿಕಾರಿ ನಾಗರಾಜ್ ಹೆಚ್.ಇ, ವಿಟ್ಲ ಠಾಣಾ ಸಬ್ ಇನ್ಸ್ಪೆಕ್ಟರ್ ಸಂದೀಪ್ ಕುಮಾರ್ ಶೆಟ್ಟಿ, ಮತ್ತು ವಿಟ್ಲ ಪೊಲೀಸ್ ಅಧಿಕಾರಿ ವರ್ಗ ಸೇರಿದಂತೆ ಠಾಣಾ ಸಿಬ್ಬಂದಿಗಳು ಸಾರ್ವಜನಿಕರು ಉಪಸ್ಥಿತರಿದ್ದರು.