ವಿಟ್ಲ: ಗರ್ಭಧಾರಣೆಗೆ ಸಂಬಂಧಿಸಿದ ಶಸ್ತ್ರ ಚಿಕಿತ್ಸೆಯ ಸಂದರ್ಭದಲ್ಲಿ ವೈದ್ಯರು ಎಡವಟ್ಟನಿಂದಾಗಿ ಶಸ್ತ್ರ ಚಿಕಿತ್ಸೆಗೆ ಒಳಗಾದ ಮಹಿಳೆ ಬೇರೊಂದು ದೈಹಿಕ ಆರೋಗ್ಯ ಸಮಸ್ಯೆಗೆ ಸಿಲುಕಿರುವ ಘಟನೆ ಬಂಟ್ವಾಳದಲ್ಲಿ ನಡೆದಿದ್ದು, ಈ ಬಗ್ಗೆ ತನಿಖೆ ನಡೆಸಿ ತಮಗೆ ನ್ಯಾಯ ದೊರಕಿಸಿಕೊಡಬೇಕೆಂದು ಮಹಿಳೆಯ ಕುಟುಂಬಸ್ಥರು ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯ ಅಧಿಕಾರಿಗೆ ಮನವಿ ಮಾಡಿದ್ದಾರೆ.
ಬಂಟ್ವಾಳ ತಾಲೂಕು ವಿಟ್ಲ ಮುಡ್ನೂರು ಗ್ರಾಮದ ಚಂದ್ರಶೇಖರ ಅವರ ಪತ್ನಿ 37 ವರ್ಷ ಪ್ರಾಯದ ಇಂದಿರಾ ಅವರು ತೊಂದರೆಗೊಳಗಾದ ಮಹಿಳೆ. ಇಂದಿರಾ ಅವರು ಗರ್ಭಧಾರಣೆಯ ಬಗ್ಗೆ ಸ್ಕ್ಯಾ ನಿಂಗ್ ಮಾಡಲು ಬಂಟ್ವಾಳದ ಮೆಲ್ಕಾರ್ನಲ್ಲಿರುವ ಖಾಸಗಿ ಆಸ್ಪತ್ರೆಗೆ ತೆರಳಿದ್ದು, ಅಲ್ಲಿನ ವೈದ್ಯೆ ಡಾ। ಕಾವ್ಯ ರಶ್ಮೀ ರಾವ್ , ಶಸ್ರ್ರ ಚಿಕಿತ್ಸೆಯೊಂದರ ಅಗತ್ಯವಿದೆ, ಅದಕ್ಕೆ 60,000 ರೂ. ವೆಚ್ಚ ವಾಗುತ್ತದೆ ಎಂದಿದ್ದರು.
ಹಾಗೆ ಕಳೆದ ಜೂನ್ 17 ರಂದು ಗರ್ಭಧಾರಣೆ ಸಂಬಂಧಿತ ಶಸ್ತ್ರ ಚಿಕಿತ್ಸೆಯನ್ನು ನೆರವೇರಿಸಿದ್ದರು. ಶಸ್ತ್ರ ಚಿಕಿತ್ಸೆಯ ಬಳಿಕ ಮಲ ಹೋಗುವ ಭಾಗಕ್ಕೆ ತೊಂದರೆ ಆಗಿರುವುದರಿಂದ ಮಲದ ಬ್ಯಾಗ್ ಹೊರಗೆ ಹಾಕಿ ಒಂದು ವಾರದ ಬಳಿಕ ಇನ್ನೊಂದು ಶಸ್ತ್ರ ಚಿಕಿತ್ಸೆಯ ಅಗತ್ಯವಿದೆ ಎಂದು ಹೇಳಿ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ಕಳುಹಿಸಿ ಕೊಟ್ಟಿದ್ದಾರೆ.
ಪುತ್ತೂರಿನ ಆಸ್ಪತ್ರೆಯಲ್ಲಿ ಇನ್ನೊಂದು ಶಸ್ತ್ರ ಚಿಕಿತ್ಸೆ ನಡೆಸಿದ್ದಾರೆ. ಆದರೆ ಮಲ ಶೇಖರಣೆಯ ಬ್ಯಾಗ್ ಹೊಟ್ಟೆಯಿಂದ ಹೊರಗೆಯೇ ಇರಿಸಲಾಗಿದ್ದು, ಅಲ್ಲಿ 1,75,000 ರೂ. ಬಿಲ್ ಮಾಡಿದ್ದಾರೆ. ಡಿಸ್ಚಾರ್ಜ್ ಆಗಿ ಮನೆಗೆ ಹೋದರೂ 15 ದಿನಗಳಿಗೊಮ್ಮೆ ಆಸ್ಪತ್ರೆಗೆ ತೆರಳಿ ಮಲ ಶೇಖರಣೆಯ ಬ್ಯಾಗ್ ಬದಲಾಯಿಸಬೇಕಿದ್ದು, ಆದಕ್ಕೆ 5000 ರೂ. ಖರ್ಚಾಗುತ್ತದೆ. ಈ ನಡುವೆ ಸೆ.9 ರಂದು ಮಲ ಶೇಖರಣೆಯ ಬ್ಯಾಗ್ ತೆಗೆಯಲೆಂದು ಬಂಟ್ವಾಳ ಆಸ್ಪತ್ರೆಗೆ ಕರೆಸಿ ಡಾ। ಕಾವ್ಯ ಶಸ್ತ್ರ ಚಿಕಿತ್ಸೆ ನಡೆಸಿದ್ದಾರೆ. ಆದರೆ ಅದು ಸರಿಯಾಗಿಲ್ಲ ಎಂದು ಪುನಃ ಪುತ್ತೂರಿನ ಆಸ್ಪತ್ರೆಗೆ ಕಳುಹಿಸಿದ್ದು, ಅಲ್ಲಿ ಸೆ. 12 ರಂದು ಇನ್ನೊಂದು ಶಸ್ತ್ರ ಚಿಕಿತ್ಸೆ ಮಾಡಿರುತ್ತಾರೆ. ಆದರೆ ಮಲ ಶೇಖರಣೆಯ ಬ್ಯಾಗ್ ಇನ್ನೂ ಹೊಟ್ಟೆಯ ಹೊರ ಭಾಗದಲ್ಲಿಯೇ ಇದೆ.
ಪುತ್ತೂರಿನ ಆಸ್ಪತ್ರೆಗೆ ಕಳುಹಿಸಿದ ಡಾ. ಕಾವ್ಯ ರಶ್ಮಿ ರಾವ್ ಯಾವುದೇ ಪ್ರತಿಕ್ರಿಯೆ ನೀಡದೇ , ನನಗೂ ಇದಕ್ಕೂ ಸಂಬಂಧವಿಲ್ಲ ಎನ್ನುತ್ತಿದ್ದಾರೆ ಎನ್ನಲಾಗಿದೆ. ಇದೀಗ ಇಂದಿರಾ ಅವರು ಪುತ್ತೂರಿನ ಆಸ್ಪತ್ರೆಯಲ್ಲಿಯೇ ಇದ್ದಾರೆ. ಅಲ್ಲಿ 1,70,000 ರೂ. ಬಿಲ್ ಆಗಿದೆ ಎಂದು ಅವರ ಪತಿ ತಿಳಿಸಿದ್ದಾರೆ. ಇಂದಿರಾ ಅವರ ಪತಿ ಕೂಲಿ ಕಾರ್ಮಿಕರಾಗಿದ್ದು, ಮೊದಲ ಬಿಲ್ 1,75,000 ರೂ. ಗಳನ್ನು ಸಾಲ ಮಾಡಿ ಪಾವತಿಸಿದ್ದಾರೆ. ಈಗ ಇಂದಿರಾ ಅವರಿಗೆ ಎದ್ದು ನಡೆದಾಡಲು ಸಾಧ್ಯವಾಗುತ್ತಿಲ್ಲ.
ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಬೇಕಾದ ಮೂಲಭೂತ ಸೌಕರ್ಯಗಳಾದ ವೆಂಟಿಲೇಟರ್ ಇಲ್ಲದೇ ಕಾರ್ಯ ನಿರ್ವಹಿಸುತ್ತಿದ್ದು, ಬಡವರ ಜೀವದ ಜೊತೆ ಈ ಆಸ್ಪತ್ರೆ ಚೆಲ್ಲಾಟವಾಡುತ್ತಿದೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಿ ನ್ಯಾಯ ದೊರಕಿಸಿಕೊಡುವಂತೆ ಜಿಲ್ಲಾ ಆರೋಗ್ಯ ಅಧಿಕಾರಿಗೆ ಮನವಿ ಸಲ್ಲಿಸಲಾಗಿದೆ. ಆರೋಗ್ಯ ಅಧಿಕಾರಿ ತಕ್ಷಣ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಮಹಿಳೆಯ ಪತಿ ಹಾಗೂ ಸಾರ್ವಜನಿಕ ವಲಯದಿಂದ ಅಭಿಪ್ರಾಯ ಕೇಳಿಬಂದಿದೆ. ಈ ಸಂಬಂಧ ನಿನ್ನೆ ಸುದ್ಧಿಗೋಷ್ಠಿ ನಡೆದಿದ್ದು, ಈ ವಿಚಾರ ಬೆಳಕಿಗೆ ಬಂದಿದೆ.