ವಿಟ್ಲ: ಆಂಗ್ಲ ಮಾಧ್ಯಮ ಶಾಲೆಗಳ ಪ್ರಭಾವದಿಂದ ಸರ್ಕಾರಿ ಧೋರಣೆಗಳಿಂದ ಕನ್ನಡ ಮಾಧ್ಯಮ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಕನ್ನಡ ಮಾಧ್ಯಮ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ವಿಠಲ ವಿದ್ಯಾ ಸಂಘದ ವಿಠಲ ಪ್ರೌಢ ಶಾಲೆಯಲ್ಲಿ ಹಳೆ ವಿದ್ಯಾರ್ಥಿಗಳ ಮತ್ತು ದಾನಿಗಳ ಸಹಕಾರದಲ್ಲಿ 8ನೇ ತರಗತಿಯಿಂದ 10ನೇ ತರಗತಿ ವರೆಗಿನ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಉಚಿತ ಶಿಕ್ಷಣ ಯೋಜನೆಯ ವಿದ್ಯಾಪೋಷಕ ಸಮಿತಿ ಅಧ್ಯಕ್ಷ ಬಾಬು ಕೆ.ವಿ ತಿಳಿಸಿದರು.
ಅವರು ಸಂಸ್ಥೆಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ವಿಠಲ ಪ್ರೌಢ ಶಾಲೆಯೂ ಗಡಿನಾಡ ವಿದ್ಯಾರ್ಥಿಗಳಿಗೆ, ಸುತ್ತಮುತ್ತಲಿನ ಹಲವು ಹಳ್ಳಿಗಳ ವಿದ್ಯಾರ್ಥಿಗಳಿಗೆ ಸಂಜೀವಿನಿಯಂತೆ ಕಾರ್ಯನಿರ್ವಹಿಸುತ್ತಿದೆ. ಕನ್ನಡ ಶಾಲೆಗಳನ್ನು ಉಳಿಸುವುದು ಬೆಳೆಸುವುದು ನಮ್ಮ ಕರ್ತವ್ಯವಾಗಿದೆ. ಈ ಕಾರಣದಿಂದ ವಿದ್ಯಾ ಪೋಷಕ ಸಮಿತಿಯನ್ನು ರಚಿಸಲಾಗಿದೆ. ಕಳೆದ ಫೆಬ್ರವರಿಯಲ್ಲಿ ಉಚಿತ ಶಿಕ್ಷಣ ಅಭಿಯಾನ ಯೋಜನೆಗೆ ಚಾಲನೆ ನೀಡಲಾಗಿದೆ. ಕೋವಿಡ್ ಸಂದರ್ಭದಲ್ಲಿ ವಿದ್ಯಾರ್ಥಿಗಳು ಭಾರೀ ತೊಂದರೆ ಅನುಭವಿಸಿ ಶಿಕ್ಷಣ ಮುಂದುವರಿಸಲು ಸಾಧ್ಯವಾಗದೇ ಕೆಲಸಕ್ಕೆ ತೆರಳುತ್ತಿದ್ದರು.
ಉಚಿತ ಶಿಕ್ಷಣ ಯೋಜನೆ ಆಕರ್ಷಣೆದಿಂದಾಗಿ ವಿದ್ಯಾರ್ಥಿಗಳಿಗೆ ಶಾಲೆಗೆ ಬರಲು ಆಸಕ್ತಿ ವಹಿಸುತ್ತಿದ್ದಾರೆ. ವಿಠಲ ವಿದ್ಯಾ ಸಂಘದ ವಿಠಲ ಪ್ರೌಢ ಶಾಲೆಯಲ್ಲಿ 8ರಿಂದ 10ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಹಳೆ ವಿದ್ಯಾರ್ಥಿಗಳ ಮತ್ತು ದಾನಿಗಳ ಸಹಕಾರದಲ್ಲಿ ಉಚಿತ ಶಿಕ್ಷಣ ಯೋಜನೆ ಅಭಿಯಾನವನ್ನು ಜಾರಿಗೊಳಿಸಲಾಗಿದೆ. ಈ ವರ್ಷ ಒಟ್ಟು 567 ವಿದ್ಯಾರ್ಥಿಗಳು ದಾಖಲಾತಿ ಹೊಂದಿದ್ದು, ಎಲ್ಲರಿಗೂ ಉಚಿತ ಶಿಕ್ಷಣ ನೀಡಲಾಗುತ್ತದೆ. ವಿದ್ಯಾಭಿಮಾನಿಗಳು ನಿರಂತರ ಪ್ರೋತ್ಸಾಹ ನೀಡಿದರೆ ಈ ಯೋಜನೆಯನ್ನು ಮುಂದುವರಿಸಲಾಗುವುದು ಎಂದರು.
8,9,10ನೇ ತರಗತಿಗಳಿಗೆ ಸಂಪೂರ್ಣ ಉಚಿತ ಶಿಕ್ಷಣ, ಸರ್ಕಾರಿ ಶುಲ್ಕದಿಂದಲೂ ವಿನಾಯಿತಿ, ಉಚಿತ ಸಮವಸ್ತ್ರ, ಬರೆಯುವ ಪುಸ್ತಕ, ದತ್ತಿನಿಧಿ ಬಹುಮಾನಗಳು, ಎಲ್ಲಾ ಸರ್ಕಾರಿ ಸೌಲಭ್ಯಗಳು ಮೊದಲಾದ ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ. ಪ್ರತಿಯೊಬ್ಬ ವಿದ್ಯಾರ್ಥಿಗೆ ವಾರ್ಷಿಕ ವೆಚ್ಚ 1500 ರೂ. ತಗುಲುತ್ತದೆ. ಉಚಿತ ಶಿಕ್ಷಣ ಅಭಿಯಾನದ ಪ್ರಯುಕ್ತ ಅಕ್ಟೋಬರ್ 2 ರ ಗಾಂಧಿ ಜಯಂತಿ ದಿನದಂದು ಸಮವಸ್ತ್ರ ಮತ್ತು ಪುಸ್ತಕ ವಿತರಣೆ ಕಾರ್ಯಕ್ರಮ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ವಿಠಲ ವಿದ್ಯಾ ಸಂಘದ ಅಧ್ಯಕ್ಷ ಮುಗುಳಿ ತಿರುಮಲೇಶ್ವರ ಭಟ್, ಉಪಾಧ್ಯಕ್ಷ ಅಲ್ಫಾನ್ಸ್ ಸಿಲ್ವೆಸ್ಟರ್ ಮಸ್ಕರೇಂಞಸ್, ವಿಠಲ ಪ್ರೌಢ ಶಾಲಾ ಮುಖ್ಯ ಶಿಕ್ಷಕ ಕಿರಣ್ ಕುಮಾರ್ ಬ್ರಹ್ಮಾವರ, ವಿದ್ಯಾ ಪೋಷಕ ಸಮಿತಿಯ ಕಾರ್ಯದರ್ಶಿ ಶಂಕರನಾರಾಯಣ ಪ್ರಸಾದ್ ಉಪಸ್ಥಿತರಿದ್ದರು.