ಬಂಟ್ವಾಳ ತಾಲೂಕು ವೀರಕಂಭ ಗ್ರಾಮ ಪಂಚಾಯತಿನ 2020-21, ಮತ್ತು 2021-22 ನೇ ಸಾಲಿನ ಪ್ರಥಮ ಹಾಗೂ ದ್ವಿತೀಯ ಸುತ್ತಿನ ಗ್ರಾಮಸಭೆಯು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ. ದಿನೇಶ್ ಇವರ ಅಧ್ಯಕ್ಷತೆಯಲ್ಲಿ ಶ್ರೀ ಶಾರದಾ ಭಜನಾಮಂದಿರ ವೀರಕಂಬ ಇಲ್ಲಿ ನಡೆಸಲಾಯಿತು.
ಶ್ರೀಮತಿ. ಬಿಂದೀಯಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಹಿಂದುಳಿದ ವರ್ಗಗಳ ಇಲಾಖೆ, ಬಂಟ್ವಾಳ ಇವರು ಮಾರ್ಗದರ್ಶಿ ಅಧಿಕಾರಿಯಾಗಿ ಗ್ರಾಮಸಭೆಯನ್ನು ನಡೆಸಿಕೊಟ್ಟರು. ಗ್ರಾಮ ಪಂಚಾಯತ್ ನ ಆಡಳಿತ ವರದಿ ಹಾಗೂ ಜಮಾ ಖರ್ಚಿನ ವರದಿಯನ್ನು ಕಾರ್ಯದರ್ಶಿಯವರಾದ ಶ್ರೀಮತಿ. ಸವಿತಾರವರು ಮಂಡಿಸಿದರು.
ಸದರಿ ಗ್ರಾಮಸಭೆಯಲ್ಲಿ ಕಂದಾಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಮೆಸ್ಕಾಂ ಇಲಾಖೆ, ಶಿಕ್ಷಣ ಇಲಾಖೆ, ಕೃಷಿ ಇಲಾಖೆ, ಸಾಮಾಜಿಕ ಅರಣ್ಯ ಇಲಾಖೆ, ಪಶು ಸಂಗೋಪನಾ ಇಲಾಖೆ, ಆರೋಗ್ಯ ಇಲಾಖೆಯ ಅಧಿಕಾರಿಗಳು ಹಾಜರಿದ್ದು ತಮ್ಮ ಇಲಾಖಾ ಹಂತದಿಂದ ಸಾರ್ವಜನಿಕರಿಗೆ ದೊರೆಯುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು.
ಸಭೆಯಲ್ಲಿ ವೀರಕಂಭ ಗ್ರಾಮವು ಕಲ್ಲಡ್ಕ ಹಾಗೂ ವಿಟ್ಲ ವ್ಯಾಪ್ತಿಯ ಮೆಸ್ಕಾಂ ವಿಭಾಗಕ್ಕೆ ಒಳಪಟ್ಟಿರುವುದರಿಂದ ಎರಡು ವಿಭಾಗದ ಮೆಸ್ಕಾಂ ಅಧಿಕಾರಿಗಳು ಗ್ರಾಮಸಭೆಯಲ್ಲಿ ಇರುವಂತೆ ಸಾರ್ವಜನಿಕರು ಮನವಿ ಮಾಡಿದರು ಹಾಗೂ ವ್ಯವಸ್ಥಿತವಾದ ಸ್ಮಶಾನ ಹಾಗೂ ಘನತ್ಯಾಜ್ಯ ಘಟಕ ನಿರ್ಮಿಸುವಂತೆ ಒತ್ತಾಯಿಸಿದರು. ಸಾರ್ವಜನಿಕರಿಂದ ವಿವಿಧ ಬೇಡಿಕೆ ಮನವಿಯನ್ನು ಸ್ವೀಕರಿಸಲಾಯಿತು.
ಸಭೆಯಲ್ಲಿ ಗ್ರಾ.ಪಂ. ಉಪಾಧ್ಯಕ್ಷರಾದ ಶ್ರೀಮತಿ. ಶೀಲಾ ನಿರ್ಮಲ ವೇಗಸ್, ಮತ್ತು ಸದಸ್ಯರಾದ ಶ್ರೀ. ಅಬ್ದುಲ್ ರಹಿಮಾನ್, ಶ್ರೀ. ರಘು ಪೂಜಾರಿ, ಶ್ರೀಮತಿ. ಜಯಂತಿ, ಶ್ರೀ. ನಿಶಾಂತ್ ರೈ, ಶ್ರೀ. ಜನಾರ್ಧನ ಪೂಜಾರಿ, ಶ್ರೀಮತಿ. ಗೀತಾ ಜೆ ಗಾಂಬೀರ, ಶ್ರೀ. ಸಂದೀಪ್ ಕುಮಾರ್ ಎನ್, ಶ್ರೀ. ಜಯಪ್ರಸಾದ್ ಶೆಟ್ಟಿ, ಶ್ರೀಮತಿ. ಮೀನಾಕ್ಷಿ, ಶ್ರೀಮತಿ. ಲಲಿತಾ ಉಪಸ್ಥಿತರಿದ್ದರು.
ಗ್ರಾಮ ಪಂಚಾಯತ್ ಸಿಬ್ಬಂದಿ ವರ್ಗದವರು ಸಹಕರಿಸಿದರು. ಸಭೆಯಲ್ಲಿ ವೀರಕಂಬ ಗ್ರಾಮ ವ್ಯಾಪ್ತಿಯ ಎಲ್ಲಾ ಅಂಗನವಾಡಿ ಶಿಕ್ಷಕಿಯರು, ಗ್ರಾಮ ವ್ಯಾಪ್ತಿಯ ಆರೋಗ್ಯ ಸಹಾಯಕಿಯರು, ಆಶಾ ಕಾರ್ಯಕರ್ತೆಯರು, ವೀರಕಂಬ ಗ್ರಾಮಸ್ಥರು ಹಾಜರಿದ್ದರು. ಮಜಿ ಶಾಲಾ ಮಕ್ಕಳು ನಾಡಗೀತೆ ಮೂಲಕ ಪ್ರಾರ್ಥಿಸಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀ. ನಿಶಾಂತ್ ಬಿ. ಆರ್.ರವರು ವಂದಿಸಿ ಕಾರ್ಯಕ್ರಮ ನಿರೂಪಿಸಿದರು.