ವಿಟ್ಲ: ಶ್ರೀ ದೇವತಾ ಸಮಿತಿ ವಿಟ್ಲ ಆಶ್ರಯದಲ್ಲಿ 51 ನೇ ವರ್ಷದ ಶ್ರೀ ಶಾರದಾ ಮಹೋತ್ಸವ ಕಾರ್ಯಕ್ರಮ 4 ದಿನಗಳ ಕಾಲ ಹಲವು ಧಾರ್ಮಿಕ, ಸಾಂಸ್ಕೃತಿಕ, ವೈದಿಕ ವಿಧಿ-ವಿದಾನಗಳೊಂದಿಗೆ ಬಹಳ ಅದ್ದೂರಿಯಾಗಿ ನಡೆಯಿತು.
2.10.2022ನೇ ಆದಿತ್ಯವಾರ ಪ್ರಾರಂಭಗೊಂಡ ಶಾರದಾ ಮಹೋತ್ಸವವು 5.10.2022ನೇ ಬುಧವಾರ ದೇವಿಯ ವಿಜೃಂಭಣೆಯ ಜಲಸ್ತಂಭನಾ ಮೆರವಣಿಗೆಯೊಂದಿಗೆ ಸಂಪನ್ನಗೊಂಡಿತು.5.10.2022 ನೇ ಬುಧವಾರ ಬೆಳಗ್ಗೆ ಶ್ರೀ ಶಾರದಾ ಮಾತೆಗೆ ಪ್ರಸನ್ನ ಪೂಜೆ, ಭಜನೆ, ನಡೆದು ಬಳಿಕ ಮಕ್ಕಳಿಗೆ ಅಕ್ಷರಭ್ಯಾಸ ಮಾಡಲಾಯಿತು. ಮಧ್ಯಾಹ್ನ ಪೂಜೆ, ವಿಸರ್ಜನಾ ಆರತಿ , ಮಹಾಪೂಜೆ, ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ನಡೆಯಿತು. ಬಳಿಕ ರವೀಶ್ ತಂತ್ರಿ ಕುಂಟಾರು, ಧಾರ್ಮಿಕ ನಾಯಕರು ಇವರ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ಕಾರ್ಯಕ್ರಮ ನಡೆಯಿತು.
ಶಾರದಾ ಮಹೋತ್ಸವದ ಅಂಗವಾಗಿ ಮಕ್ಕಳಿಗೆ, ಮಹಿಳೆಯರಿಗೆ, ಪುರುಷರಿಗೆ ಸೇರಿದಂತೆ ಸಾರ್ವಜನಿಕರಿಗೆ ಏರ್ಪಡಿಸಿದ ವಿವಿಧ ಆಟೋಟ ಸ್ಪರ್ಧೆಗಳ ವಿಜೇತರಿಗೆ ಸುದೇಶ್ ಭಂಡಾರಿ ಎರ್ಮೆನಿಲೆ ಅಧ್ಯಕ್ಷರು ಲಯನ್ಸ್ ಕ್ಲಬ್ ವಿಟ್ಲ ಇವರು ಬಹುಮಾನ ವಿತರಿಸಿದರು. ಈ ಸಂದರ್ಭದಲ್ಲಿ ಡಾ. ಶ್ರೀ ಕೃಷ್ಣ ಪ್ರಸನ್ನ, ಜಿಲ್ಲಾಧ್ಯಕ್ಷರು ವಿಶ್ವ ಹಿಂದೂ ಪರಿಷತ್ ಪುತ್ತೂರು ಜಿಲ್ಲೆ, ಚಂದ್ರಹಾಸ್ ಕೊಪ್ಪಳ, ಅಧ್ಯಕ್ಷರು ಲಯನ್ಸ್ ಜೇ ಸಿ ಐ ವಿಟ್ಲ ಇವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಕರ್ನಾಟಕ ಕಲಾಶ್ರೀ ಡಾ. ಪಿ.ಕೆ ದಾಮೋದರ್ ಪುತ್ತೂರು ಮತ್ತು ಬಳಗದವರಿಂದ ವಾದ್ಯಗೋಷ್ಠಿ ಕಾರ್ಯಕ್ರಮ ನಡೆಯಿತು.ಬಳಿಕ ಶ್ರೀ ದೇವಿಯ ವೈಭವದ ಶೋಭಾಯಾತ್ರೆಯು ವಿಟ್ಲ ಮುಖ್ಯರಸ್ತೆಯುದ್ದಕ್ಕೂ ಸಾಗಿ ಬಂದು ಶ್ರೀ ಅನಂತೇಶ್ವರ ದೇವಸ್ಥಾನದ ಕೆರೆಯಲ್ಲಿ ಜಲಸ್ತಂಭನ ಮಾಡಲಾಯಿತು. ಮೆರವಣಿಗೆಯಲ್ಲಿ ಆಕರ್ಷಣೀಯ ಡಿಜೆ ಸೌಂಡ್ಸ್, ಹುಲಿವೇಷ ಕುಣಿತ, ಹಲವು ವಿದ್ಯುತ್ ಅಲಂಕಾರಿಕ ಪ್ರಭಾವಳಿಗಳೊಂದಿಗೆ ಸುಮಾರು ಸಾವಿರಾರು ಜನರು ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು. ಎಲ್ಲಾ ಕಾರ್ಯಕ್ರಮಗಳಲ್ಲಿ ಸಾವಿರಾರು ಜನರು ಪಾಲ್ಗೊಂಡು ಶ್ರೀ ದೇವಿಯ ಕೃಪೆಗೆ ಪಾತ್ರರಾದರು.