ವಿಟ್ಲ: ಇಲ್ಲಿನ ಸರಕಾರಿ ಆಸ್ಪತ್ರೆ – ದೇವಸ್ಥಾನ ಸಂಪರ್ಕ ರಸ್ತೆಯಲ್ಲಿ ದೂರವಾಣಿ ಕಛೇರಿ ಸಮೀಪ ನಿಯಮ ಬಾಹಿರವಾಗಿ ಯಾವ ಇಲಾಖೆಗಳಿಗೂ ಮಾಹಿತಿ ನೀಡದೇ ಎರಡು ರೋಡ್ ಹಂಪ್ಸ್ ನಿರ್ಮಿಸಲಾಗಿದ್ದು ಸವಾರರ ಪ್ರಾಣಕ್ಕೆ ಕಂಕಟವಾಗಿದೆ. ಈ ಹಿಂದೆ ಎಂಟಕ್ಕೂ ಹೆಚ್ಚು ಅಪಘಾತಗಳಾಗಿ ಸವಾರರು ಆಸ್ಪತ್ರೆ ಸೇರಿದ್ದಾರೆ. ಈಗ ಹಂಪ್ನಿಂದ ಬಿದ್ದು ಗಾಯಗೊಂಡವರ ಸಂಖ್ಯೆ 10ಕ್ಕೆ ಏರಿಕೆಯಾಗಿದೆ. ಸ್ಥಳೀಯ ನಿವಾಸಿಯೊಬ್ಬರು ಬೈಕ್ನಿಂದ ಬಿದ್ದು ಗಾಯಗೊಂಡಿದ್ದಾರೆ.
ಸಾರ್ವಜನಿಕರ ಪ್ರಕಾರ ಕರಾವಳಿ ಪ್ರಾಧಿಕಾರವು ರಸ್ತೆ ನಿರ್ಮಾಣದ ವೇಳೆ ಹಂಪ್ ನಿರ್ಮಾಣ ಮಾಡಿದೆ. ಎಲ್ಲಾ ಹಂಪ್ಸ್ಗಳಿಗಿಂತ ಇಲ್ಲಿನ ಹಂಪ್ಸ್ ಸ್ವಲ್ಪ ಎತ್ತರ ಜಾಸ್ತಿಯೇ ಇದ್ದು ಸವಾರರಿಗೆ ತೊಂದರೆಯುಂಟುಮಾಡಿದೆ. ಹಂಪ್ಸ್ ಹಾಕುವ ವೇಳೆ ಸವಾರರಿಗೆ ಮುನ್ಸೂಚನೆ ಎಂಬಂತೆ ಸಿಗ್ನಲ್ ಬೋರ್ಡ್, ರಸ್ತೆಗಳಲ್ಲಿ ಬಿಳಿ ಮಾರ್ಕ್ ಹಾಕುವುದು ಸಾಮಾನ್ಯ. ಆದರೆ ರಸ್ತೆ ನಿಯಮಗಳನ್ನು ಗಾಳಿಗೆ ತೂರಿರುವುದು ಸವಾರರ ಪ್ರಾಣಕ್ಕೆ ಆಪತ್ತು ಉಂಟುಮಾಡಿದೆ.
ಸಾರ್ವಜನಿಕರ ಹಿತಾಸಕ್ತಿಯ ಮೇರೆಗೆ ಇಂಜಿನಿಯರ್ ಹರೀಶ್ ಕುಮಾರ್ ಅವರನ್ನು ಸಂಪರ್ಕಿಸಿದಾಗ ‘ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಕುಂದಾಪುರ ಮೂಲದ ಕಾಂಟ್ರಾಕ್ಟರ್ ಈ ಕೆಲಸ ಮಾಡಿದ್ದಾರೆ. ಪ್ರಾಜೆಕ್ಟ್ನಲ್ಲಿ ಹಂಪ್ಸ್ ಬಗ್ಗೆ ಉಲ್ಲೇಖ ಮಾಡಿಯೇ ಇರಲಿಲ್ಲ. ಆದರೆ ಅವರೇ ಸ್ವ ಇಚ್ಛೆಯಿಂದ ಹಂಪ್ಸ್ ನಿರ್ಮಿಸಿದ್ದು ಈಗ ತಲೆಕೆಡಿಸುವಂತಾಗಿದೆ. ಈ ಹಂಪ್ಸ್ ಅನ್ನು ತೆರವುಗೊಳಿಸಲು ಕುಂದಾಪುರ ಮೂಲದ ಕಾಂಟ್ರಾಕ್ಟರ್ ಅವರಿಗೆ ಸೂಚನೆ ನೀಡಲಾಗಿದೆ. ಮುಂದಿನ ದಿನಗಳ ಒಳಗೆ ಹಂಪ್ಸ್ ತೆರವು ಗೊಳಿಸಲಾಗುವುದು’ ಎಂದು ವಿ.ಟಿವಿಗೆ ತಿಳಿಸಿದ್ದಾರೆ.
ಸರ್ಕಾರಿ ಆಸ್ಪತ್ರೆಗೆ ಸಂಪರ್ಕಿಸುವ ರಸ್ತೆ- ದ್ವಿಚಕ್ರ ವಾಹನ ಸವಾರರು ಹೈರಾಣ
ಪ್ರತಿನಿತ್ಯ ಸರಕಾರಿ ಆಸ್ಪತ್ರೆಗೆ ಅನಾರೋಗ್ಯ ಪೀಡಿತರನ್ನು ತುರ್ತುವಾಹನಗಳಲ್ಲಿ ತಲುಪಿಸಬೇಕಾಗಿದ್ದ ಪ್ರಮುಖ ಒಳರಸ್ತೆ ಇದಾಗಿದೆ. ಮುಖ್ಯರಸ್ತೆಯಲ್ಲಿ ದಿನವಿಡೀ ಟ್ರಾಫಿಕ್ ಜಾಮ್ ಆಗುತ್ತಿರುವ ಕಾರಣ ಇದೇ ಒಳರಸ್ತೆಯನ್ನು ಅಂಬ್ಯುಲೆನ್ಸ್ ವಾಹನಗಳು ರೋಗಿಯ ಪ್ರಾಣ ರಕ್ಷಿಸುವುದಕ್ಕಾಗಿ ಅವಲಂಬಿಸಿವೆ. ತಿರುವು ರಸ್ತೆಯಲ್ಲಿ ಹಂಪ್ಸ್ ಹಾಕಿದ್ದರಿಂದಾಗಿ ಈ ಹಿಂದೆ ಎಂಟಕ್ಕೂ ಹೆಚ್ಚು ಅಪಘಾತಗಳಾಗಿ ಸವಾರರು ಆಸ್ಪತ್ರೆ ಸೇರಿದ್ದಾರೆ. ಅದರಲ್ಲಿ ವಿಟ್ಲದ ಸವಾರರಿಬ್ಬರು ಗಂಭೀರ ಗಾಯಗೊಂಡು ಮೂಳೆ ಮುರಿದುಕೊಂಡಿದ್ದರು.