ವಿಟ್ಲ: ಗ್ರಾ. ಪಂ ಸದಸ್ಯರೋರ್ವರಿಗೆ ಹಾಡು ಹಗಲೇ ಸಾರ್ವಜನಿಕವಾಗಿ ಚಾಕು ತೋರಿಸಿ ಹಲ್ಲೆ ನಡೆಸಿದ ಘಟನೆ ವಿಟ್ಲದ ಚಂದಳಿಕೆ ಮಾಡತ್ತಡ್ಕ ರಸ್ತೆಯಲ್ಲಿ ನಡೆದಿದೆ.
ಹಲ್ಲೆ ನಡೆಸಿದಾತನನ್ನು ಕೇಪು ಗಣೇಶ ಮತ್ತು ಆತನ ಸಹಚರರು ಎಂದು ಗುರುತಿಸಲಾಗಿದೆ.
ವಿಟ್ಲ ಮುಡ್ನೂರು ಗ್ರಾಮ ಪಂಚಾಯತ್ ನ ಸದಸ್ಯರಾದ ಪುನೀತ್ ಮಾಡತ್ತಾರು ರವರು ವಿಟ್ಲ ಚಂದಳಿಕೆ ಮಾಡತ್ತಡ್ಕ ರಸ್ತೆಯನ್ನು ದುರಸ್ತಿ ಮಾಡುತ್ತಿರುವ ವೇಳೆ ಕಾಮಗಾರಿಗಾಗಿ ಕಾಂಕ್ರೇಟ್ ಮಿಕ್ಸರ್ ರಸ್ತೆಗೆ ಅಡ್ಡದಾಗಿ ನಿಲ್ಲಿಸಿದ್ದು, ಈ ವೇಳೆ ಬೈಕ್ ನಲ್ಲಿ ಆಗಮಿಸಿದ ಕೇಪು ಗಣೇಶ ಮತ್ತು ಆತನ ಸಹಚರರು ಯಾಕೇ ಕಾಂಕ್ರೇಟ್ ಮಿಕ್ಸರ್ ಅಡ್ಡ ನಿಲ್ಲಿಸಿದ್ದು, ನಾವು ಹೇಗೆ ಹೋಗುವುದು..!??, ನಿಮಗೆ ರೋಡ್ ಬ್ಲಾಕ್ ಮಾಡಲು ಯಾರು ಅಧಿಕಾರ ಕೊಟ್ಟದ್ದು ಎಂದು ಪ್ರಶ್ನಿಸಿ ಏಕಾಏಕಿ ಹಲ್ಲೆ ನಡೆಸಿದ್ದಾರೆಂದು ಆರೋಪಿಸಿ ಪುನೀತ್ ರವರು ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಪುನೀತ್ ಮಾಡತ್ತಾರು ರವರು ಪುತ್ತೂರು ಬಿಜೆಪಿ ಮಂಡಲ ರೈತ ಮೋರ್ಚಾದ ಪ್ರಧಾನ ಕಾರ್ಯದರ್ಶಿಯಾಗಿದ್ದು, ವಿಟ್ಲ ಮುಡ್ನೂರು ಗ್ರಾಮ ಪಂಚಾಯತ್ ನ ಸದಸ್ಯರಾಗಿದ್ದಾರೆ. ಆಸ್ಪತ್ರೆಗೆ ಬಿಜೆಪಿ ಮುಖಂಡರು ಭೇಟಿ ನೀಡಿದ್ದಾರೆ.
ಕೇಪು ಗಣೇಶ ರೌಡಿ ಶೀಟರ್ ಆಗಿದ್ದು ಇದೇ ರೀತಿ ಹಲವಾರು ಬಾರಿ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದ. ಇದೀಗ ಈತ ಮತ್ತೆ ಬಾಲ ಬಿಚ್ಚಿದ್ದು ಇನ್ನಾದರೂ ಈತನನ್ನು ಪೊಲೀಸರು ಬೆಂಡೆತ್ತಿ ಸರಿದಾರಿಗೆ ತರುವರೇ ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.