ನವದೆಹಲಿ: ಮೃತಪಟ್ಟ ವೃದ್ಧರೊಬ್ಬರು ಅಂತ್ಯ ಸಂಸ್ಕಾರಕ್ಕೆ ಕೆಲ ಸಮಯ ಬಾಕಿ ಇರುವ ಸ್ಮಶಾನದಲ್ಲಿ ಕಣ್ತೆರೆದ ಘಟನೆ ದೆಹಲಿಯಲ್ಲಿ ನಡೆದಿದೆ.
ಸತೀಶ್ ಭಾರದ್ವಾಜ್ (62 )ಎಂಬವರು ಕ್ಯಾನ್ಸರ್ ನಿಂದ ಬಳಲುತ್ತಿದ್ದರು. ಅವರನ್ನು ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಭಾನುವಾರ ಬೆಳಗ್ಗೆ ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.
ಹೀಗಾಗಿ ಸಂಬಂಧಿಕರು ಸ್ಮಶಾನಕ್ಕೆ ತೆರಳಿ ಮೃತರ ಅಂತ್ಯಸಂಸ್ಕಾರಕ್ಕೆ ಸಿದ್ಧತೆ ನಡೆಸಿದ್ದಾರೆ. ಮಧ್ಯಾಹ್ನ 3 ಗಂಟೆಯ ಸುಮಾರಿಗೆ ಕೊನೆಯ ಕಾರ್ಯಕ್ರಮವಾಗಿ ಮೃತದೇಹದ ಬಾಯಿಗೆ ಗಂಗಾಜಲ ಬಿಡುತ್ತಿದ್ದಂತೆಯೇ ಮೃತ ವ್ಯಕ್ತಿ ಕಣ್ತೆರೆದು ಮಾತನಾಡಲಾರಂಭಿಸಿದ್ದಾರೆ. ಸ್ವಲ್ಪ ತಡವಾಗುತ್ತಿದ್ದರೆ, ಆ ವೃದ್ಧ ಜೀವಂತವಾಗಿ ದಹನವಾಗುತ್ತಿದ್ದ.
ಈ ಘಟನೆಯಿಂದ ಬೆಚ್ಚಿ ಬಿದ್ದ ಕುಟುಂಬಸ್ಥರು ತಕ್ಷಣವೇ ದೆಹಲಿ ಪೊಲೀಸರಿಗೆ ವಿಷಯ ಮುಟ್ಟಿಸಿ, ವೃದ್ಧನನ್ನು ನರೇಲಾದ ರಾಜಾ ಹರಿಶ್ಚಂದ್ರ ಆಸ್ಪತ್ರೆಗೆ ದಾಖಲಿಸಿದ್ದಾರೆ. ತಪಾಸಣೆಯ ವೇಳೆ ಸತೀಶ್ ಭಾರದ್ವಾಜ್ ಅವರ ಬಿ.ಪಿ., ಹೃದಯದ ಬಡಿತ, ನಾಡಿ ಮಿಡಿತ ಎಲ್ಲವೂ ನಾರ್ಮಲ್ ಆಗಿದ್ದು, ಅವರು ಆರೋಗ್ಯವಂತರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.