ಶಿವಮೊಗ್ಗದಲ್ಲಿ ಮತ್ತೊಂದು ಚಾಕು ಇರಿತ ಪ್ರಕರಣ ನಡೆದಿದೆ. ಕಲ್ಲು ತೂರಾಟದ ಬಳಿಕ ಶಾಂತವಾಗಿರುವ ಶಿವಮೊಗ್ಗದಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿ ಮೇಲೆ ಬೈಕ್ನಲ್ಲಿ ಬಂದ ದುಷ್ಕರ್ಮಿಗಳು ಹರಿತವಾದ ವಸ್ತುವಿನಿಂದ ದಾಳಿ ಮಾಡಿ ಪರಾರಿಯಾಗಿದ್ದಾರೆ. ಶಿವಮೊಗ್ಗ ಬಸ್ ನಿಲ್ದಾಣದ ಸಮೀಪದ ರಾಯಲ್ ಆರ್ಕೇಡ್ ಹೋಟೆಲ್ ಬಳಿ ಭಾನುವಾರ ರಾತ್ರಿ ಘಟನೆ ನಡೆದಿತ್ತು.
ಸದ್ಯ ಗಾಯಾಳು ಅಶೋಕ್ ಪ್ರಭು ಎಂಬವರನ್ನು ಮೆಗ್ಗಾನ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.
ಸುಮಾರು ನಾಲ್ಕು ಜನರ ಗುಂಪಿನಿಂದ ಈ ದಾಳಿ ನಡೆದಿದೆ. ದುಷ್ಕರ್ಮಿಗಳ ಗುಂಪು ಮೊದಲೇ ರಸ್ತೆಯಲ್ಲಿ ನಿಂತುಕೊಂಡಿತ್ತು. ಈ ವೇಳೆ ಅಶೋಕ್ ಪ್ರಭು ಮೇಲೆ ದಾಳಿ ನಡೆಸಿದ್ದಾರೆ. ಅಶೋಕ್ ಪ್ರಭು ಕೆಳಗೆ ಬೀಳುತ್ತಿದ್ದಂತೆ ಮೊಬೈಲ್ ಕಿತ್ತುಕೊಳ್ಳಲು ದುಷ್ಕರ್ಮಿಗಳು ಮುಂದಾಗಿದ್ದಾರೆ. ಅಶೋಕ್ ಪ್ರಭು ಪ್ರತಿರೋಧ ಒಡ್ಡಿದಾಗ ಹರಿತವಾದ ವಸ್ತುವಿನಿಂದ ದಾಳಿ ನಡೆಸಿದ್ದಾರೆ. ಕೊನೆಗೆ ಅಶೋಕ್ ಪ್ರಭು ದುಷ್ಕರ್ಮಿಗಳಿಂದ ತಪ್ಪಿಸಿಕೊಂಡು ಬಂದಿದ್ದಾರೆ.
ಅಶೋಕ್ ಪ್ರಭು ಮುಖದ ಭಾಗಕ್ಕೆ ಗಾಯವಾಗಿದೆ. ದುಷ್ಕರ್ಮಿಗಳು ಉರ್ದು ಭಾಷೆಯಲ್ಲಿ ಮಾತನಾಡುತ್ತಿದ್ದರು ಎಂದು ಅಶೋಕ್ ಪ್ರಭು ಮಾಹಿತಿ ನೀಡಿದ್ದಾರೆ. ಅಶೋಕ್ ಪ್ರಭು ಪ್ರಾಣಾಪಾಯದಿಂದ ಪಾರಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ದೊಡ್ಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಘಟನೆ ಬಳಿಕ ದುಷ್ಕರ್ಮಿಗಳು ಎಸ್ಕೇಪ್ ಆಗಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.‘