ವಿಜಯವಾಡ: ಮನೆಯೊಂದರಲ್ಲಿ ನಡೆಯುತ್ತಿದ್ದ ಶುಭ ಕಾರ್ಯಕ್ರಮ ನಿಮಿತ್ತ ಮೆಹಂದಿ ಹಾಕಲು ಫ್ರೆಂಡ್ಸ್ ಜತೆ ಬೈಕ್ನಲ್ಲಿ ತೆರಳುತ್ತಿದ್ದ ವೇಳೆ ಅಪಘಾತಕ್ಕೀಡಾಗಿ ಯುವತಿ ದುರಂತ ಸಾವಿಗೀಡಾಗಿರುವ ಘಟನೆ ಆಂಧ್ರ ಪ್ರದೇಶದಲ್ಲಿ ನಡೆದಿದೆ.
ಮೃತ ಯುವತಿಯನ್ನು ರತ್ನಮಾಲಾ (19) ಎಂದು ಗುರುತಿಸಲಾಗಿದೆ.
ಮೆಹಂದಿ ಹಾಕಿ ಬರಲು ಶುಕ್ರವಾರ ರಾಜಮಹೇಂದ್ರವರಂನಿಂದ ಅಮಲಾಪುರಂಗೆ ರತ್ನಮಾಲಾ ಮತ್ತು ಸುಧಾರಾಣಿ ತೆರಳಿದ್ದರು. ಕಾಶಿ ಬೈಕ್ ಚಲಾಯಿಸುತ್ತಿದ್ದ. ಮೂವರು ರಾವುಲಪಾಳ್ಯಂನ ಸೇತುವೆ ಬಳಿ ಹೋಗುತ್ತಿದ್ದಂತೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಹಿಂಬದಿಯಿಂದ ಬಂದ ಲಾರಿಯೊಂದು ಬೈಕ್ಗೆ ಡಿಕ್ಕಿ ಹೊಡಿದಿದೆ. ಈ ವೇಳೆ ಬೈಕ್ ಸಮತ ಕೆಳಗೆ ಬಿದ್ದ ರತ್ನಮಾಲಾ ತಲೆಯ ಮೇಲೆ ಲಾರಿ ಚಕ್ರ ಹರಿದು ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ರಾಜಮಹೇಂದ್ರವರಂ ಮೂಲದ ಆಕೆಯ ಸ್ನೇಹಿತೆ ಸುಧಾರಾಣಿಗೆ ಎಡಗೈಗೆ ಗಾಯವಾಗಿದ್ದರೆ, ಅಲಮುರು ಮಂಡಲದ ಮೊಡುಕುರು ಗ್ರಾಮದ ಸ್ನೇಹಿತ ಕಾತೌಂಗ ಕಾಶಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಸುಧಾರಾಣಿ ಹಾಗೂ ಕಾಶಿಗೆ ಗಾಯಗಳಾಗಿದ್ದು, ಅವರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಿದ್ದಾರೆ. ರತ್ನಮಾಲಾ ಮೃತದೇಹವನ್ನು ಕೊತ್ತಪೇಟೆಯ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಅಪಘಾತ ಎಸಗಿದ ಲಾರಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಚಾಲಕನನ್ನು ಬಂಧಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಮೃತ ರತ್ನಮಾಲಾ ವೀರರಾಜು ಮತ್ತು ನಾಗಮಣಿ ದಂಪತಿಯ ಎರಡನೇ ಮಗಳು. ಮೊದಲು ಮಗಳಿಗೆ ಮದುವೆಯಾಗಿದೆ. ತಂದೆ ವೀರರಾಜು ಕೂಲಿ ಕಾರ್ಮಿಕನಾಗಿದ್ದಾನೆ. ತಾಯಿ ನಾಗಮಣಿ ಮೂರು ತಿಂಗಳ ಹಿಂದಷ್ಟೇ ಕೆಲಸಕ್ಕೆಂದು ದುಬೈಗೆ ತೆರಳಿದಳು. ರತ್ನಮಾಲಾ ಶುಭ ಸಮಾರಂಭಗಳಿಗೆ ಮೆಹಂದಿ ಮತ್ತು ಮೇಕಪ್ ಹಾಕುವ ಕೆಲಸ ಮಾಡುತ್ತಾ ಮನೆಗೆ ನೆರವಾಗುತ್ತಿದ್ದಳು. ಆದರೆ, ಇದೀಗ ಅಪಘಾತದಲ್ಲಿ ಮಗಳು ಮೃತಪಟ್ಟಿರುವುದು ಕುಟುಂಬಕ್ಕೆ ತುಂಬಲಾರದ ನಷ್ಟವಾಗಿದೆ.