ಮೈಸೂರು : ಅನೈತಿಕ ಸಂಬಂಧ ಪ್ರಶ್ನಿಸಿದ್ದ ಪತಿಯನ್ನು ಪ್ರಿಯಕರನ ಜೊತೆ ಸೇರಿ ಪತ್ನಿಯೇ ಹತ್ಯೆ ಮಾಡಿರುವ ಘಟನೆ ಮೈಸೂರಿನ ಹೂಟಗಳ್ಳಿ ಎಂಬಲ್ಲಿ ನಡೆದಿದೆ.
ಮೈಸೂರಿನ ಹೂಟಗಳ್ಳಿ ನಿವಾಸಿಯಾದ ಮಂಜುನಾಥ್ ಹಾಗೂ ನಿಖಿತಾ ಮೈಸೂರಿನ ಬೋಗಾದಿ ನಿವಾಸಿ ಎನ್ನಲಾಗಿದೆ. 10 ವರ್ಷಗಳ ಹಿಂದೆ ಈ ಜೋಡಿ ಮದುವೆಯಾಗಿದ್ದು, ಈ ಜೋಡಿಗೆ ಎರಡು ಮುದ್ದಾದ ಮಕ್ಕಳು ಕೂಡ ಇದ್ದಾರೆ. ಆದರೆ, ನಿಖಿತಾ ಮಾಡ್ರನ್ ಜೀವನಕ್ಕೆ ಒಗ್ಗಿಕೊಂಡು ಪಾರ್ಟಿ ಪಬ್ ಎಂದು ದಿನಂಪ್ರತಿ ಸುತ್ತಾಟ ನಡೆಸುತ್ತಿದ್ದ ಪರಿಣಾಮ ಸಂಬಂಧದಲ್ಲಿ ಬಿರುಕು ಮೂಡಲು ಕಾರಣವಾಗಿದೆ.
ಮಂಜುನಾಥ್ ಅವರದ್ದು ಸಂಪ್ರದಾಯಸ್ಥ ಕುಟುಂಬ ಅಷ್ಟೆ ಅಲ್ಲದೇ, ಊರ ಯಜಮಾನಿಕೆ ಜವಾಬ್ದಾರಿ ಹೊತ್ತಿದ್ದ ಕುಟುಂಬ. ಹಾಗೆಂದ ಮೇಲೆ ಊರವರ ಮುಂದೆ ನಿಂತು ತಲೆ ತಗ್ಗಿಸುವಂತೆ ಆಗಬಾರದು ಎಂದು ಮನೆಯವರು ಅಂದುಕೊಡಿದ್ದರು. ಆದರೆ, ಇದ್ಯಾವುದರ ಪರಿವೆಯೇ ಇಲ್ಲದೆ ಯಾವಾಗಲೂ ಮಾಡ್ರನ್ ಡ್ರೆಸ್ ಹಾಕಿ ತನ್ನ ಶೋಕಿಯಲ್ಲಿಯೇ ಲೇಟ್ ನೈಟ್ ಪಾರ್ಟಿ ಮಾಡುತ್ತಾ ದಿನ ಕಳೆಯುತ್ತಿದ್ದಳು. ಇದು ಸಾಲದೆಂಬಂತೆ ಅಕ್ರಮ ಸಂಬಂಧದ ಆರೋಪ ಕೂಡ ಕೇಳಿ ಬಂದಿದ್ದು, ಇದಕ್ಕೆ ಸಾಕ್ಷಿ ಎಂಬಂತೆ 6 ವರ್ಷದ ಹಿಂದೆ ಯಾರೊಂದಿಗೋ ಓಡಿ ಹೋಗಿ ಎಲ್ಲರ ಮುಂದೆ ಮನೆಯ ಮಾನ ಹರಾಜು ಹಾಕಿದ್ದಾಳೆ ಎನ್ನಲಾಗಿದೆ. ಹೀಗಾಗಿ, ರಾಜಿ ಸಂಧಾನ ಮಾಡಿ ಆಕೆಗೆ ಹಿರಿಯರು ಬುದ್ದಿ ಹೇಳಿದ್ದಾರೆ. ಆದರೂ ಆಕೆ ಬದಲಾಗದೆ ಮೊದಲಿನ ಚಾಳಿ ಮುಂದುವರೆಸಿದಾಗ ಸಂಪ್ರದಾಯಸ್ಥ ಮನೆತನದವರಾದ ಮಂಜುನಾಥರ ಮನೆಯವರು ಇದನ್ನು ಕಂಡು ಕಾಣದವರಂತೆ ವರ್ತಿಸಲಾಗದೆ ನಿಖಿತಾಳಿಗೆ ತಿಳಿ ಹೇಳಿ ಬುದ್ಧಿವಾದ ಹೇಳಿದ್ದಾರೆ ಎನ್ನಲಾಗಿದೆ.
ಹುಟ್ಟು ಗುಣ ಸುಟ್ಟರೂ ಹೋಗದು ಎಂಬ ಮಾತಿನಂತೆ ನಿಖಿತಾ ಮಾನ ಹರಜಾದರು ಕೂಡ ತನಗೂ ಸಂಬಂಧವೇ ಇಲ್ಲ ಎಂಬಂತೆ ಮೊದಲಿನ ಚಾಳಿಯನ್ನು ಹಾಗೇ ಮುಂದುವರಿಸಿಕೊಂಡು ಹೋಗಿದ್ದಾಳೆ ಎನ್ನಲಾಗಿದೆ. ಇವಳ ಶೋಕಿವಾಲಾ ನಡೆ ಕಂಡು ಬೇಸತ್ತು ಹೋದ ಮಂಜುನಾಥ್ ತಂದೆ ತಾಯಿ ಅನಾರೋಗ್ಯಕ್ಕೆ ತುತ್ತಾಗಿ ಹಾಸಿಗೆ ಹಿಡಿದು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಇಷ್ಟಾದರೂ ಸಮಾಧಾನವಾಗದ, ತನ್ನ ಶೋಕಿಗೆ ಅಡ್ಡಿ ಉಂಟು ಮಾಡುತ್ತಿದ್ದ ಗಂಡನನ್ನೇ ಮುಗಿಸಿ ಏನು ತಿಳಿಯದವರಂತೆ ನಾಟಕ ಮಾಡಿದ್ದಾಳೆ ಎನ್ನಲಾಗಿದೆ.
ಮಂಗಳವಾರ ತಡರಾತ್ರಿ ಮಂಜುನಾಥ್ ಸಹೋದರಿಯರಿಗೆ ಕರೆ ಮಾಡಿದ ನಿಖಿತಾ ನಿಮ್ಮ ತಮ್ಮ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ ಎಂದಿದ್ದಾಳೆ. ಹೀಗಾಗಿ, ಮಂಜುನಾಥ್ ಸಹೋದರಿಯರ ಜೊತೆಗೆ ಸಂಬಂಧಿಕರು ಮನೆಗೆ ತಲುಪುವಷ್ಟರಲ್ಲಿ ಮಂಜುನಾಥ್ ಪ್ರಾಣ ಪಕ್ಷಿ ಹಾರಿ ಹೋಗಿದ್ದು ಬಾರದ ಲೋಕಕ್ಕೆ ತೆರಳಿಯಾಗಿತ್ತು. ಇನ್ನು ಮನೆಗೆ ಆಗಮಿಸಿದ ಮಂಜುನಾಥ್ ಮನೆಯವರು ಮಂಜುನಾಥನ ಸಾವಿಗೆ ನಿಖಿತಾಳೆ ಕಾರಣ ಆಕೆಯೇ ಕೊಲೆ ಮಾಡಿದ್ದಾಳೆ ಎಂದು ಆರೋಪಿಸಿದ್ದಾರೆ. ಇಷ್ಟೇ ಅಲ್ಲದೆ, ಮಂಜುನಾಥನ ತಂದೆ ತಾಯಿ ಸಾವಿನ ಹಿಂದೆಯು ನಿಖಿತಾಳ ಕೈವಾಡವಿದೆ ಎಂದು ಕೂಡ ಮಂಜುನಾಥ್ ಮನೆಯವರು ಅನುಮಾನ ವ್ಯಕ್ತ ಪಡಿಸಿದ್ದಾರೆ ಎನ್ನಲಾಗಿದೆ. ಸದ್ಯ, ವಿಜಯನಗರ ಪೊಲೀಸರು ನಿಖಿತಾಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.