ನವದೆಹಲಿ: ದೇಶಾದಾದ್ಯಂತ ಸಂಚಲನ ಮೂಡಿಸಿದ ಶ್ರದ್ಧಾ ಕೊಲೆ ಪ್ರಕರಣವು ದಿನದಿಂದ ದಿನಕ್ಕೆ ಹೊಸ ತಿರುವು ಪಡೆಯುತ್ತಿದೆ. ಅಫ್ತಾಬ್ ಕೊಲೆಯಾದ ಯುವತಿ ದೇಹವನ್ನು 35ಭಾಗಗಳನ್ನಾಗಿ ಕತ್ತರಿಸಿ ಪ್ರಿಡ್ಜ್ನಲ್ಲಿಟ್ಟು ದಿನಕ್ಕೆ 2ಭಾಗವನ್ನು ದೆಹಲಿ ಕಾಡಿನಲ್ಲಿ ಬಿಸಾಕಿದ್ದ. ಈಗ ಕೊಲೆಯಾದ ಶ್ರದ್ದಾನ ರುಂಡದ ಭಾಗವನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಮುಂಬೈ ಮೂಲದ ಯುವತಿ ಶ್ರದ್ಧಾ ವಾಕರ್ ಹತ್ಯೆ ಪ್ರಕರಣ ತನಿಖೆಯಲ್ಲಿ ಸ್ಫೋಟಕ ಮಾಹಿತಿಗಳು ಹೊರ ಬರುತ್ತಿದ್ದು, ಸಾಕ್ಷ್ಯಗಳ ನಾಶಕ್ಕೆ ನಿರ್ಧರಿಸಿದ್ದ ಆರೋಪಿ ಅಫ್ತಾಬ್ ಯುವತಿಯ ಮುಖ ಸುಟ್ಟು ಹಾಕಿದ್ದ ಎಂದು ತಿಳಿದು ಬಂದಿದೆ.
ಭೌತಿಕ ಸಾಕ್ಷ್ಯಗಳ ಹುಡುಕಾಟ ನಡೆಸುತ್ತಿದ್ದ ಪೊಲೀಸರಿಗೆ ತಲೆ ಬುರುಡೆ ಮತ್ತು ತುಂಡರಿಸಿದ ಕೈ ಸಿಕ್ಕಿದ್ದು, ತಲೆ ಸುಟ್ಟ ಸ್ಥಿತಿಯಲ್ಲಿತ್ತು ಎಂದು ತಿಳಿದು ಬಂದಿದೆ. ಸಾಕ್ಷಿ ಮತ್ತು ಮುಖದ ಗುರುತು ಅಳಿಸುವ ಬಗ್ಗೆ ಗೂಗಲ್ನಿಂದ ಮಾಹಿತಿ ಹುಡುಕಿ, ಅದರಂತೆ ತಲೆ ಸುಟ್ಟ ಹಾಕಿ, ಬಳಿಕ ಅದನ್ನು ಕೈ ಭಾಗದೊಂದಿಗೆ ಎಸೆದು ಬಂದಿರುವುದಾಗಿ ಅಫ್ತಾಬ್ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸ್ ಮೂಲಗಳು ಹೇಳಿವೆ.
ಸದ್ಯ ಪತ್ತೆಯಾಗಿರುವ ತಲೆ ಬರುಡೆಯನ್ನು ಡಿಎನ್ಎ ಪರೀಕ್ಷೆ ನಡೆಸಲು ಪೊಲೀಸರು ಮುಂದಾಗಿದ್ದು, ಈವರೆಗೂ ಸಿಕ್ಕಿರುವ ಸಾಕ್ಷ್ಯಗಳನ್ನು ಏಮ್ಸ್ನಲ್ಲಿ ಡಿಎನ್ಎ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಈಗಾಗಲೇ ಶ್ರದ್ಧಾ ತಂದೆ ವಿಕಾಸ್ ವಾಕರ್ ಅವರ ಸ್ಯಾಂಪಲ್ ಪಡೆದಿದ್ದು ಅದನ್ನು ಮ್ಯಾಚ್ ಮಾಡುವ ಕಾರ್ಯ ನಡೆಯಲಿದೆ.