ವಿಟ್ಲ : ಮುಳಿಯರ ಬದುಕು ನಮಗೆಲ್ಲರಿಗೆ ಬೆಳಕು. ಶ್ರೀಮಂತ ಮನೆತನದಲ್ಲಿ ಹುಟ್ಟಿ, ಬಡತನದಲ್ಲಿ ಬೆಳೆಯುತ್ತಾ ಬದುಕಿನ ಏರಿಳಿತವನ್ನು ಸಹಿಸಿಕೊಂಡು, ಶಿಕ್ಷಣ, ಸಾಹಿತ್ಯ, ವೃತ್ತಿ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದ, ನಮ್ಮೂರಿನವರಾದ, ಮುಳಿಯ ತಿಮ್ಮಪ್ಪಯ್ಯನವರ (03.03.2023-16.01.1950) 135 ನೇಯ ಜನ್ಮದಿನವು ಇಂದಾಗಿದೆ. ಅವರ ಬದುಕು, ನಮಗೆಲ್ಲರಿಗೆ ಬೆಳಕು. ಆ ಹಿರಿಯರ ಆಶೀರ್ವಾದವು ಸದಾ ನಮ್ಮ ಮೇಲಿರಲಿ ಎಂದು ನಮ್ಮ ನಮ್ಮ ಇಷ್ಟ ದೇವರಲ್ಲಿ ಒಂದು ನಿಮಿಷದ ಮೌನ ಪ್ರಾರ್ಥನೆ ಸಲ್ಲಿಸೋಣ ಎಂದು ಶಾಲೆಯ ಪ್ರಧಾನ ಸಲಹೆಗಾರ ಭಾಸ್ಕರ ಅಡ್ವಳರು ತಿಳಿಸಿದರು.
ಶ್ರೀ ಕೃಷ್ಣ ವಿದ್ಯೋದಯ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಕಾನತ್ತಡ್ಕದಲ್ಲಿ ಅವರು ಮುಳಿಯ ತಿಮ್ಮಪ್ಪಯ್ಯ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು. ಶಾಲೆಯ ಆಡಳಿತಾಧಿಕಾರಿ ಕಾನ ಸುಂದರ ಭಟ್ಟರು, ಮುಖ್ಯ ಶಿಕ್ಷಕ ಕಾನ ವಿಶ್ವನಾಥ ಭಟ್ಟರು ಹಾಗೂ ವಿದ್ಯಾರ್ಥಿ ನಾಯಕರು ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸಿದರು.
ಶಾಲೆಯ ಕಂಬಗಳಲ್ಲಿ ಮುಳಿಯರ ಜೀವನ ಚರಿತ್ರೆಯನ್ನು ಮುದ್ರಿತ ಕಾಗದಗಳಲ್ಲಿ ಪ್ರದರ್ಶಿಸಲಾಗಿದ್ದು ಅವುಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಕೊಡಲಾಗಿತ್ತು. ವಿದ್ಯಾರ್ಥಿನಿ ಅಫ್ನಾ ಸ್ವಾಗತಿಸಿ, ಸಾನಿಬಾ ವಂದಿಸಿದರು. ಫರ್ಝಾನ ಕಾರ್ಯಕ್ರಮ ನಿರೂಪಿಸಿದರು.