ಬೆಂಗಳೂರು: ಸಿಎಂ ಬಸವರಾಜ್ ಬೊಮ್ಮಾಯಿ ಹಾಗೂ ಹೈಕಮಾಂಡ್ ವಿರುದ್ದ ಸಚಿವ ಸ್ಥಾನ ಹಂಚಿಕೆ ವಿಚಾರದಲ್ಲಿ ಆನಂದ್ ಸಿಂಗ್ ಮುನಿಸಿಕೊಂಡಿದ್ದಾರೆ. ಸಿಎಂ ಕರೆಗೂ ಡೋಂಟ್ ಕೇರ್ ಎಂದಿದ್ದಾರೆ.
ರಾಜ್ಯದ ಮುಖ್ಯಮಂತ್ರಿಯಾಗುತ್ತಲೇ ಬಸವರಾಜ್ ಬೊಮ್ಮಾಯಿ ಅವರು ಸಚಿವರಾಗಿ ಅಧಿಕಾರ ಸ್ವೀಕಾರ ಮಾಡಿರುವ ಆನಂದ್ ಸಿಂಗ್ ಅವರು ಪ್ರಬಲ ಹುದ್ದೆಗಳ ಮೇಲೆ ಕಣ್ಣಿಟ್ಟಿದ್ದರು. ಅವರು ಇಂಧನ ಅಥವಾ ಲೋಕೋಪಯೋಗಿ ಇಲಾಖೆ ಸಿಗುತ್ತದೆ ಅಂದುಕೊಂಡಿದ್ದರು.
ಆದರೆ ಆನಂದ್ ಸಿಂಗ್ ಅವರಿಗೆ ಪ್ರವಾಸೋದ್ಯಮ ಮತ್ತು ಪರಿಸರ ಖಾತೆಯನ್ನು ನೀಡಲಾಗಿದೆ. ಈ ಬಗ್ಗೆ ಸಿಎಂ ಬಳಿಯಲ್ಲಿ ಖುದ್ದಾಗಿ ಖಾತೆ ಬದಲಾವಣೆ ಮಾಡುವಂತೆ ಮನವಿ ಮಾಡಿದ್ದರು. ಆದರೆ ಸಿಎಂ ಬೊಮ್ಮಾಯಿ ಸದ್ಯಕ್ಕೆ ಸಾಧ್ಯವಿಲ್ಲ ಎಂದಿದ್ದಾರೆ.
ಸಿಎಂ ಹೇಳಿಕೆಯ ವಿರುದ್ದ ಇದೀಗ ಆನಂದ್ ಸಿಂಗ್ ಅವರು ಈಗಾಗಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಕುರಿತು ತಮ್ಮ ಆಪ್ತರ ಜೊತೆಯಲ್ಲಿ ಹೇಳಿಕೊಂಡಿದ್ದರು. ಅಲ್ಲದೇ ಹೊಸಪೇಟೆಯಲ್ಲಿರುವ ತಮ್ಮ ಕಚೇರಿಯ ಬೋರ್ಡ್ ತೆರವುಗೊಳಿಸಿದ್ದರು. ಇದರ ಬೆನ್ನಲ್ಲೇ ಸಿಎಂ ಬೊಮ್ಮಾಯಿ ಖುದ್ದು ಕರೆ ಮಾಡಿದ್ರೂ ಆನಂದ್ ಸಿಂಗ್ ಕರೆಯನ್ನು ಸ್ವೀಕರಿಸಲಿಲ್ಲ. ಹೀಗಾಗಿ ಆನಂದ್ ಸಿಂಗ್ ನಡೆ ಇದೀಗ ತೀವ್ರ ಕುತೂಹಲವನ್ನು ಮೂಡಿಸಿದೆ.