ಚಿಕ್ಕಮಗಳೂರು: ಪ್ರವಾಹದ ನೀರಲ್ಲಿ ಕೊಚ್ಚಿಕೊಂಡು ಹೋಗಿದ್ದ ಎನ್ನಲಾದ ವ್ಯಕ್ತಿ 13 ದಿನಗಳ ಬಳಿಕ ರಸ್ತೆಯಲ್ಲಿ ಪ್ರತ್ಯಕ್ಷವಾಗಿದ್ದಾನೆ.
ಇಂತಹ ಘಟನೆ ಚಿಕ್ಕಮಗಳೂರಲ್ಲಿ ಸಂಭವಿಸಿದೆ. ಜು.12ರಂದು ಉಂಡೇ ದಾಸರಹಳ್ಳಿ ರಾಜಕಾಲುವೆಯಲ್ಲಿ ಚಿಂದಿ ಆಯುತ್ತಾ ಹಳ್ಳ ದಾಟುವ ವೇಳೆ ಪತ್ನಿ ಗೀತಾಳ ಕಣ್ಣೆದುರೇ ಗಂಡ ಸುರೇಶ್ ನೀರಲ್ಲಿ ಕೊಂಚಿಕೊಂಡು ಹೋಗಿದ್ದ. ಆತನಿಗಾಗಿ ರಕ್ಷಣಾ ತಂಡ ಎಷ್ಟೇ ಹುಡುಕಾಟ ನಡೆಸಿದರೂ ಸುಳಿವೇ ಸಿಕ್ಕಿರಲಿಲ್ಲ. ಎಸ್ಡಿಆರ್ಎಫ್, ಅಗ್ನಿಶಾಮಕ ದಳ, ನಗರಸಭೆ, ಪೊಲೀಸರು, ಸ್ಥಳೀಯರು ಸುರೇಶ್ಗಾಗಿ ಶೋಧ ಕಾರ್ಯ ನಡೆಸಿದ್ದರು. ಆತನ ಸುಳಿವೇ ಪತ್ತೆಯಾಗದ ಹಿನ್ನೆಲೆ ಕಾರ್ಯಾಚರಣೆ ಸ್ಥಗಿತಗೊಳಿಸಿದ್ದರು.
ಕಾಫಿ ತೋಟದಲ್ಲಿ ಕೆಲಸ ಮಾಡಿಕೊಂಡಿದ್ದ ಸುರೇಶ್ ಮತ್ತು ಗೀತಾ ಇಬ್ಬರೂ ಚಿಂದಿ ಆಯುವ ಕೆಲಸವನ್ನು ಆಯ್ದುಕೊಂಡದ್ದು ಪ್ರೇಮವಿವಾಹದಿಂದ. ಹೊನ್ನಾಳಿಯ ಸುರೇಶ್ ಮತ್ತು ಚಿಕ್ಕಮಗಳೂರು ತಾಲೂಕು ಹೊಸಪೇಟೆಯ ಗೀತಾ ಕಾಫಿ ತೋಟದಲ್ಲಿ ಕೆಲಸ ಮಾಡುವಾಗ ಪ್ರೀತಿಸಿ 6 ವರ್ಷದ ಹಿಂದೆ ಮಾದುವೆಯಾಗಿದ್ದರು. ದಂಪತಿಗೆ ಮಕ್ಕಳಿರಲಿಲ್ಲ. ಕುಟುಂಬದವರೂ ಇವರಿಬ್ಬರನ್ನು ಸೇರಿಸಿಕೊಂಡಿರಲಿಲ್ಲ. ಹೀಗಾಗಿ ಕಾಫಿತೋಟದ ಕೆಲಸ ಬಿಟ್ಟು ಇಬ್ಬರೂ ಚಿಕ್ಕಮಗಳೂರು ನಗರದಲ್ಲಿ ಗುಜರಿ ವಸ್ತು ಆಯುವ ಕೆಲಸ ಆರಂಭಿಸಿದ್ದರು. ಗುಜರಿ ವಸ್ತುಗಳನ್ನು ಮಾರಿ ಅದರಿಂದ ಬಂದ ಹಣದಲ್ಲೇ ಹಸಿವು ನೀಗಿಸಿಕೊಳ್ಳುತ್ತಿದ್ದ ಈ ದಂಪತಿಗೆ ಬಸ್ ನಿಲ್ದಾಣವೇ ಸೂರಾಗಿತ್ತು. ನಿತ್ಯ ರಾತ್ರಿ ಬಸ್ ನಿಲ್ದಾಣದಲ್ಲೇ ಮಲಗುತ್ತಿದ್ದರು. ಚಿಂದಿ ಆಯುವ ಸಮಯದಲ್ಲೇ ಸುರೇಶ್ ಹಳ್ಳದಲ್ಲಿ ಕೊಚ್ಚಿಕೊಂಡು ಹೋಗಿದ್ದ.
ಚಿಂದಿ ಆಯುತ್ತಿರುವಾಗ ಹಳ್ಳದ ಬದುನಲ್ಲಿ ನಿಂತು ಪ್ಲಾಸ್ಟಿಕ್ ಬಾಟಲಿಗಳನ್ನು ಹೆಕ್ಕಿ ಕೊಡುತ್ತಿದ್ದ ವೇಳೆ ನೀರಿನಲ್ಲಿ ಕೊಚ್ಚಿ ಹೋಗಿದ್ದ.
ಆತ ಮೃತಪಟ್ಟಿದ್ದಾನೆಂದು ಪತ್ನಿ ಗೀತಾಗೆ ಪರಿಹಾರದ ಚೆಕ್ ಕೊಡಲು ಸಿದ್ಧತೆಯೂ ನಡೆದಿತ್ತು. ಅಷ್ಟರಲ್ಲಿ ಇಂದು(ಜು.26) ಬೆಳಗ್ಗೆ ಸುರೇಶ್ ರಸ್ತೆಯಲ್ಲಿ ಕಾಣಿಸಿಕೊಂಡಿದ್ದಾನೆ. ನೀರಿನಲ್ಲಿ ಕೊಚ್ಚಿ ಹೋಗಿದ್ದ ಅಂದುಕೊಂಡಿದ್ದ ವ್ಯಕ್ತಿ ನಗರದ ಐ.ಜಿ.ರಸ್ತೆಯಲ್ಲಿ ಓಡಾಡಿಕೊಂಡಿದ್ದ. ಈ ಸುದ್ದಿ ಕೇಳಿ ಸ್ಥಳೀಯರು ಮತ್ತು ಅಧಿಕಾರಿಗಳು ಶಾಕ್ ಆಗಿದ್ದಾರೆ. ನೀರಲ್ಲಿ ಕೊಚ್ಚಿಕೊಂಡು ಹೋಗಿದ್ದ ಸುರೇಶ್, ಸ್ವಲ್ಪ ದೂರದ ಬಳಿಕ ಹೊರ ಬಂದಿರುವುದು ಗೊತ್ತಾಗಿದೆ. ಆದರೂ ಯಾರಿಗೂ ಹೇಳದೆ, ತಲೆಮರೆಸಿಕೊಂಡಿದ್ದ ಎಂದು ಗೊತ್ತಾಗಿದೆ. ನಗರಸಭೆ ಅಧ್ಯಕ್ಷ ವೇಣುಗೋಪಾಲ್ ಸುರೇಶ್ಗೆ ಬುದ್ಧಿ ಹೇಳಿದ್ದಾರೆ. ಸತ್ತಿದ್ದಾನೆಂದು ತಿಳಿದಿದ್ದ ವ್ಯಕ್ತಿ ಬದುಕಿರುವ ಸುದ್ದಿ ಕೇಳಿ ಅಧಿಕಾರಿಗಳು ನಿಟ್ಟುಸಿರು ಬಿಟ್ಟಿದ್ದಾರೆ.