ಸುಳ್ಯ : ಸುಳ್ಯ ತಾಲೂಕಿನ ಹರಿಹರ ಪಲ್ಲತ್ತಡ್ಕದಲ್ಲಿ ದಿಡೀರ್ ಆಗಿ ಬಾರ್ & ರೆಸ್ಟೋರೆಂಟ್ ತೆರೆದುಕೊಂಡಿದ್ದು, ಮಾಹಿತಿ ದೊರೆತ ಗ್ರಾಮಸ್ಥರು, ಮದ್ಯ ವಿರೋಧಿ ಹೋರಾಟ ಸಮಿತಿಯವರು ಮದ್ಯದಂಗಡಿ ಬಳಿಗೆ ಧಾವಿಸಿ ಪ್ರತಿಭಟನೆ ನಡೆಸಿದ್ದು, ಇದು ವಿಕೋಪಕ್ಕೂ ತಿರುಗಿದ ಘಟನೆ ನಡೆದಿದೆ.
ಹರಿಹರ ಪಲ್ಲತ್ತಡ್ಕ ಪೇಟೆ ಬಳಿ ಶುಕ್ರವಾರ ಮಂಗಳಾ ಬಾರ್ & ರೆಸ್ಟೋರೆಂಟ್ ಹೆಸರಿನಲ್ಲಿ ಅಂಗಡಿ ತೆರದುಕೊಂಡಿದ್ದು , ಮದ್ಯ ಮಾರಾಟ ಮುಕ್ತ ಹೋರಾಟಗಾರು, ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಅಂಗಡಿಯ ಮೆಟ್ಟಿಲಿನಲ್ಲಿ ಕುಳಿತು ಪ್ರತಿಭಟನೆಯನ್ನೂ ನಡೆಸಿದ್ದಾರೆ. ಕಳೆದ ಕೆಲವು ತಿಂಗಳಿನಿಂದ ಹರಿಹರ ಪಲ್ಲತ್ತಡ್ಕ ದಲ್ಲಿ ಮದ್ಯದಂಗಡಿ ಆರಂಭವಾಗುವುದನ್ನು ತಡೆಯಲು ಹೋರಾಟ ನಡೆಸಲಾಗುತಿತ್ತು .
ಬೆಳಗ್ಗೆಯಿಂದ ಸಂಜೆ ತನಕವು ಪ್ರತಿಭಟನೆ ಮುಂದುವರಿದಿದೆ. ಮದ್ಯದಂಗಡಿ ಬಂದ್ ಮಾಡಲು ಮುಖಂಡರು ಮನವೊಲಿಸಲು ಯತ್ನಿಸಿದ ವೇಳೆ ಮದ್ಯದಂಗಡಿ ಪರ ಬಂದವರು ಮುಖಂಡರ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಈ ಮಧ್ಯೆ ಮಾತಿನ ಚಕಮಕಿ, ನೂಕಾಟ ತಳ್ಳಾಟ ನಡೆದಿದೆ. ಮದ್ಯ ದಂಗಡಿ ಬಂದ್ ಮಾಡುವಂತೆ ಕತ್ತಲಾಗುವ ತನಕವೂ ಆಗ್ರಹಿಸಿದ್ದರು. ಸಂಜೆ ವೇಳೆ ಪ್ರತಿಭಟನೆ ವಿಕೋಪಕ್ಕೂ ತಿರುಗಿದೆ. ಆಕ್ರೋಶಿತ ಪ್ರತಿಭಟನಾಕಾರರು ಮದ್ಯದಂಗಡಿ ಬಳಿ ಇದ್ದ ಚಯರ್, ನಾಮಫಲಕ ಕಿತ್ತು ರಸ್ತೆಗೆ ಎಸೆದಿದ್ದಾರೆ. ಈ ವೇಳೆ ಪೊಲೀಸರು ಪರಿಸ್ಥಿತಿ ನಿಯಂತ್ರಿಸಿದರು. ಮದ್ಯ ದಂಗಡಿ ಬಂದ್ ಮಾಡಲೇಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ರಾತ್ರಿ ವೇಳೆ ಸಚಿವ ಎಸ್. ಅಂಗಾರ ಅವರ ಸೂಚನೆಯಂತೆ ಹಿರಿಯ ಅಧಿಕಾರಿಗಳು ಸೂಚನೆ ನೀಡಿ ಮದ್ಯದಂಗಡಿ ಬಂದ್ ಮಾಡುವಂತೆ ಬಾರ್ ಮಾಲಕರಿಗೆ ಸೂಚಿಸಿದ್ದಾರೆ.
ಅದರಂತೆ ಬಾರ್ ತಾತ್ಕಾಲಿಕ ಬಂದ್ ಮಾಡಲಾಯಿತು. ಅದರಂತೆ ಗ್ರಾಮಸ್ಥರು ಸ್ಥಳದಿಂದ ಮರಳಿದರು. ಇಂದು ಮದ್ಯದಂಗಡಿ ಮತ್ತೆ ತೆರೆದುಕೊಳ್ಳದಂತೆ ಕ್ರಮಕೈಗೊಳ್ಳಬೇಕು. ಒಂದು ವೇಳೆ ಮದ್ಯದಂಗಡಿ ತೆರೆದಲ್ಲಿ ಮತ್ತೆ ನಡೆಯುವ ಎಲ್ಲಾ ಅನಾಹುತಗಳಿಗೂ ಜಿಲ್ಲಾಡಳಿತವೇ ಹೊಣೆ ಎಂದು ಪ್ರ ತಿಭಟನಾಕಾರರು ಎಚ್ಚರಿಕೆ ನೀಡಿದ್ದಾರೆ. ಸುಬ್ರಹ್ಮಣ್ಯ ಪೊಲೀಸರು ಘಟನಾ ಸ್ಥಳದಲ್ಲಿದ್ದು ಬಂದೊಬಸ್ತ್ ಏರ್ಪಡಿಸಿದ್ದರು. ಸಂಜೆ ವೇಳೆ ಮುಂಜಾಗ್ರತೆ ಕ್ರಮವಾಗಿ ಪೇಟೆಯ ಅಂಗಡಿ ಮುಂಗಟ್ಟುಗಳನ್ನು ಪೊಲೀಸರು ಮುಚ್ಚಿಸಿದರು.